Thursday, September 26, 2013

ನೋವು ನುಂಗಿದವಳು


ಶ್ರೀಮತಿ ಪದ್ಮಸುಬ್ಬಯ್ಯ, ಸಂಕಲ್ಪ್ ಟ್ರಸ್ಟ್, ಬೆಂಗಳೂರು

ಆದಿನ ಬೆಳಗ್ಗೆ ಏಳುವಾಗಲೇ ಅನ್ನಿಸಿತು, ಇವತ್ತು ಏನೋ ವಿಶೇಷವಿರುತ್ತದೆ ಎಂದು. ರೇಡಿಯೋದಲ್ಲಿ ಮಹಿಳೆಯರ ಪಾತ್ರ' ಎಂದು ಸಮಾಜಸೇವಕಿಯ ಮಾತು ನಡೆಯುತ್ತಿತ್ತು. ಜಯಳಿಗೆ ದಿನ ಎನೋ ಒಂದು ತರಹದ ಭಾವನೆಗಳು. ರೇಡಿಯೋದಲ್ಲಿ ಹೇಳುವುದನ್ನು ಕೇಳುವಾಗ ಹೌದು, ಹೀಗೇ ಮಾಡಬೇಕು ಅನ್ನಿಸಿತು. ಮಹಿಳೆಯ ಸ್ಥಾನದ ಬಗ್ಗೆ ಜಾಗೃತಿ ರಿಸರ್ವೇಶನ್ ಬಗ್ಗೆ ವಿವಾದಗಳು ಎಲ್ಲ ಕೇಳಿದ ಮಾತುಗಳೇ ಯಾವುದೂ ಹೊಸದಲ್ಲ.
            ಅವಳಿಗೆ ಅತ್ತೆಯ ಮಾತು ಜ್ಞಾಪಕಕ್ಕೆ ಬಂತು, ಇಂತದೆಲ್ಲ ಕೇಳಲು ಚಂದ, ಹೇಳಲೂ ಚಂದ. ಆದರೆ ಕಾರ್ಯರೂಪಕ್ಕೆ ತರಲು ಇನ್ನೂ ಎಷ್ಟು ಶತಮಾನವೋ?
            ನಾವೆಲ್ಲರೂ ನಮ್ಮ ಮನಸ್ಸಿನ ಗೊಂದಲಗಳನ್ನು ಬದಲಾಯಿಸುವವರೆಗೆ ಏನೂ ಬದಲಾಗುವುದು ಸಾಧ್ಯವಿಲ್ಲ. ಪ್ರತಿದಿನವನ್ನು ದಿನಕ್ಕೆ ಬೇಕಾದ ಹಾಗೆ ಹೊಂದಿಸಿಕೊಳ್ಳುವುದೇ ಒಳ್ಳೆಯದು ಅನಿಸುತ್ತೆ.
            ಮಕ್ಕಳು ಬರುವುದರೊಳಗೆ ಮನೆ ಕೆಲಸ ಮುಗಿಸಿದರೆ ಸಾಕಾಗಿತ್ತು. ದಿನ ಕೆಲಸದವಳು ಬೇರೆ ರಜ. ಮನಸ್ಸಿನ ಯೋಚನೆಗೆ ಯಾವ ತರಹದ ಕಡಿವಾಣವಿಲ್ಲ. ಕೆಲಸ ಮಾಡಿಕೊಂಡೆ, ಯೋಚನೆಯ ಲಹರಿ ಹರಿಯುತ್ತಿತ್ತು.
            ಹೌದು ಸೌಮ್ಯಳ ಬೆಳಗ್ಗಿನ ಫೋನ್ ಕರೆ. ಪ್ರತೀ ಸಲ ಅವಳು ಫೋನ್ ಮಾಡಿ, ಅವಳ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಳು.
            ಜಯ ಅವಳಿಗೆ ಹೇಳಿದಳು, ನೀನು ಬರದೆ ನಾನು ನಿನಗೆ ಸಹಾಯ ಮಾಡಲು ಕಷ್ಟ ನಿನ್ನ ಪರಿಚಯ ಫೋನಿನಲ್ಲಿ ಆಗಿರುವುದರಿಂದ, ನಿನ್ನನ್ನು ನೋಡಬೇಕು.
            ದಿನದ ಕರೆ 5ನೇ ಸಲದ್ದಿರಬಹುದು. ಸಹಾಯ ಬೇಕು ಆದರೆ ಅದನ್ನು ಸ್ವೀಕರಿಸಲು ಅವಳೇ ಹುಟ್ಟಿಸಿಕೊಂಡಿರುವ ಅಡೆತಡೆಗಳು ಬಹಳ. ಜಯಳ ಯೋಚನೆಗೆ ಇದೊಂದು ವಿಷಯ. ಪ್ರತಿ ಸಲ ಹೀಗೆ ಒಂದೊಂದು ವಿಚಾರಗಳು ಅವಳ ಮನಸ್ಸನ್ನು ಹಿಡಿದಿರುತ್ತೆ, ಮನಸ್ಸಿನೊಂದಿಗೆ ಅವಳ ಚರ್ಚೆ ಬಹಳಷ್ಟು ಅದಕ್ಕೆನಾದರೂ ಕಂಪ್ಯೂಟರ್ ಚಿಪ್ ಹಾಕಿದರೆ...! ಏನೆಲ್ಲಾ ಸ್ಪಂದಿಸಿರುವ ವಿಷಯಗಳ ಬ್ರಹ್ಮಾಂಡವೇ ಆಗುತ್ತಿತ್ತೇನೋ. ಅಷ್ಟೋಂದು ವಿಚಾರಗಳ ಅಲೆ ಅವಳ ತಲೆಯಲ್ಲಿ ಹಾದು ಹೋಗುತ್ತಿತ್ತು. ವಿಚಾರಧಾರೆಗಳನ್ನೆಲ್ಲ ಬರೆಯಬೇಕು. ಇಲ್ಲವಾದರೆ ಬರೆಯಲು ಹೇಳಬೇಕು. ಎಷ್ಟು ಯೋಚಿಸಿದರೂ ಅದಕ್ಕೆ ಪರಿಹಾರ ... ತಾನೆ ಬರೆಯಬೇಕು.  ಇದು ಸಾಧ್ಯವಾ? ಬರೆದಿದ್ದುದನ್ನು ಯಾರು ಓದುತ್ತಾರೆ? ಹೀಗೆಲ್ಲಾ ಪ್ರಶ್ನೆಗಳು. ಸರಿ, ಜಯ, ಸೌಮ್ಯಳಿಗೆ ಖಂಡಿತವಾಗಿ ಹೇಳಿದಳು ನೀನು ಬಂದರೆ ಮುಂದಿನ ಮಾತು  ಫೋನ್ ಇಟ್ಟುಬಿಟ್ಟಳು. ಸಾಕಾಗಿತ್ತು ಅವಳಿಗೆ.
            ಮತ್ತೆ ಫೋನ್ ಹೊಡೆದುಕೊಂಡಿತ್ತು. ಸೌಮ್ಯಳದೆ, ಇನ್ನು ಒಂದು ಘಂಟೆಯಲ್ಲಿ ಬರಲಾ? ಜಯ ದಿನ ತಲೆಗೆ ಸ್ನಾನ ಮಾಡುವ ಯೋಜನೆ, ಅವಳಿಗೆ ತಲೆಗೆ ನೀರು ಹಾಕ್ಕೊಂಡು ಶುದ್ಧ ಮಾಡುವುದು ಒಂದು ದೊಡ್ಡ ಕಷ್ಟದ ಕೆಲಸ, ಈಗ ಏನು ಮಾಡುವುದು?
            ಸೌಮ್ಯಳ ಪ್ರತಿಯೊಂದು ಕರೆಯಲ್ಲೂ ಅವಳಿಗೆ ಸೌಜನ್ಯದ ಮಾತು ಬೇಕಿತ್ತು. ಇನ್ನೊಬ್ಬರ ಸಹಾಯ ಬೇಕಿತ್ತು. ಇಲ್ಲವೆನ್ನಲು ಮನಸ್ಸು ಒಪ್ಪಲಿಲ್ಲ ಸರಿ ಬಾ ಎಂದಳು. ಬೇಗನೆ ಸ್ನಾನ ಮುಗಿಸಿ ರೆಡಿಯಾದಳು. ಬೆಲ್ನ ಶಬ್ದವಾಯಿತು. ಜಯಳನ್ನು ನೋಡಲು ಪಕ್ಕದ ಮನೆಯವರು ಬಂದಿದ್ದರು. ಅವರ ಮನೆಯಲ್ಲಿ ನಲ್ಲಿಯ ತೊಂದರೆಯಿಂದ ಬಹಳ ನೀರು ಪೋಲಾಗುತ್ತಾ ಇದೆ. ಯಾರಾದರೂ ಪ್ಲಂಬರ್ ಇದ್ದಾರಾ?
            ಜಯ ಅಂದುಕೊಂಡಳು ನಾನೊಂದು ತರಹದ ರೆಡಿ ಸರ್ವಿಸ್ ಅವೈಲಬಲ್''  ಎಂದು ಫೋನ್ ನಂಬರ್ ಹುಡುಕಿ, ತಾನೆ ಅವನನ್ನು ಕರೆಸಿ, ತೊಂದರೆಗೆ ಪರಿಹಾರ ಮಾಡಿಕೊಟ್ಟಳು. ಕೆಲಸದವಳು ಅವಳ ಮಗಳ ಕೈಯಲ್ಲಿ ನಿನ್ನೆ ತೆಗೆದುಕೊಂಡ ಡಬ್ಬ ಕಳುಹಿಸಿ, ಕೆಲಸ ಮಾಡಿಕೊಡಲು ಹೇಳಿ ಕಳುಹಿಸಿದ್ದಳು. ಸದ್ಯ ಅಷ್ಟಾದರು ಬಂದಳಲ್ಲ ಎಂದು ಅವಳಿಗೇ ಕೆಲಸ ಹೇಳಿ ಬರುವಷ್ಟರಲ್ಲಿ  ಸೌಮ್ಯ ಬಂದಳು....
            ಅವಳನ್ನು ನೋಡಿ ಜಯಳಿಗೆ ಒಂದು ವಿಧವಾದ ಆಶ್ಚರ್ಯ! ಪ್ರತೀ ಸಲ ಫೋನಿನಲ್ಲಿ ಮಾತನಾಡುವಾಗ ಅವಳ ಬಗ್ಗೆ ಮಾಡಿದ್ದ ಕಲ್ಪನೆಯೇ ಬೇರೆ, ಗಡುಸಾದ ದೊಡ್ಡ ಶರೀರದ, ಸೊಕ್ಕಿನ ಹೆಂಗಸು ಅಂದುಕೊಂಡಿದ್ದಳು.
            ಬಂದವಳು ಸೌಮ್ಯ ಸ್ವಭಾವದ, ಸಣ್ಣ ಮೈಕಟ್ಟಿನ, ಮುಗ್ಧ ಮುಖದವಳು. ನೋಡಿದಾಗ ಕರುಳಲ್ಲಿ ಚುರ್ ಆದಂತಾಯಿತು. ಜೀವಕ್ಕೇ ಹೀಗಾಯಿತೆ? ಅವಳು ಅಲ್ಲಿಯವರೆಗೆ ಫೋನಿನಲ್ಲಿ ಹೇಳಿದ ವಿಚಾರಧಾರೆಯ ಸುರುಳಿ ತಲೆಯನ್ನು ತುಂಬಿತು. ಸೌಮ್ಯ, ತಂದೆ ತಾಯಿಯ ಒಬ್ಬಳೇ ಮುದ್ದಿನ ಗೊಂಬೆ. ಯಾವುದೇ ತರಹದ ತೊಂದರೆ ಇಲ್ಲದೆ ಬೆಳೆದವಳು. ಕೇಳಿದ್ದೆಲ್ಲ ಸಿಕ್ಕುತ್ತಿತ್ತು, ಎಲ್ಲರಿಗೂ ನೋಡಿದಾಗ ಪ್ರೀತಿ ಹುಟ್ಟುತ್ತಿತ್ತು. ಶ್ರೀಮಂತ ಆಸ್ತಿಗೆ ಮುಂದಿನ ಒಡತಿ. ಇದರಿಂದಾಗಿ ಬೇಕಾದಷ್ಟು ಗೆಳೆಯ, ಗೆಳತಿ, ಅಭಿಮಾನಿಗಳೂ ಇದ್ದರು . ಅವರ ಸಂಬಂಧಿಕರಿಗೂ ಅವಳು ಅಚ್ಚು ಮೆಚ್ಚು. ಹದಿನೇಳು ವರ್ಷ ತುಂಬುತ್ತಲೇ ಅವಳಿಗೆ ಎಲ್ಲರೂ ವರಾನ್ವೇಷಣೆಗೆ ತೊಡಗಿದರು. ಎಲದರಲ್ಲೂ ಅನುರೂಪನಾದ ರಾಕೇಶ ಎನ್ನುವ ಹುಡುಗನಿಗೆ ಅವನ ಚಿಕ್ಕಮ್ಮ ಸೌಮ್ಯಳನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಂಡಳು ಅವಳ ತಂದೆ ತಾಯಿಯೂ ಒಪ್ಪಿದರು. ಸೌಮ್ಯಳಿಗೆ ಸಣ್ಣ ವಯಸ್ಸಾದುದರಿಂದ ಹೊಂದಿಕೊಳ್ಳಲು ಸುಲಭವಾಗುವುದೆಂದು ರಾಕೇಶನ ಚಿಕ್ಕಮ್ಮನ ಅನಿಸಿಕೆ. ರಾಕೇಶನಿಗೆ ತಂದೆ ಇರಲಿಲ್ಲ, ಒಬ್ಬನೇ ಮಗ ಒಳ್ಳೆಯ ವಿದ್ಯಾವಂತ, ಆಸ್ತಿವಂತ, ನೋಡಲು ಸಿನಿಮಾ ಹೀರೋ ತರಹ ಇದ್ದನು. ಇನ್ನು ಕೇಳಬೇಕೆ? ಮದುವೆ  ಬಹಳ ಅದ್ದೂರಿಯಿಂದ ನಡೆಯಿತು. ಊರಿಗೆ ಚಪ್ಪರ ಹಾಕಿಸಿದ್ದರು. ರಾಕೇಶ ಬಹಳ ಶೋಕಿಯ ಮನುಷ್ಯನಾದುದರಿಂದ ಯಾವಾಗಲೂ ಹೈ ಸೊಸೈಟಿ ಪಾರ್ಟಿಯಲ್ಲಿ ಓಡಾಡುತ್ತಿದ್ದ
            ಸೌಮ್ಯಳನ್ನು ಸಿನಿಮಾ ಪಾರ್ಕ್ ಗಳಿಗೆ ಕರೆದೊಯ್ಯವುದು, ಹೊಸ ಬಟ್ಟೆ ತೆಗೆಸಿಕೊಡುವುದು, ಎಲ್ಲಾ ಅವಳಿಷ್ಟದಂತೆ ಮಾಡುತ್ತಿದ್ದ. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳ ಹೊಸ ಬಾಳಿನ ತಿರುವು ನೋಡಿ ಅವಳ ಸ್ನೇಹಿತೆಯರಿಗೆ, ದಾಂಪತ್ಯ ಜೀವನ ಇದ್ದರೆ ಹೀಗೆ ಇರಬೇಕು ಅನಿಸುತ್ತಿತ್ತು. ಒಳಗೊಳಗೆ ಹೊಟ್ಟೆಕಿಚ್ಚು ಆಗುತ್ತಿತ್ತು.
            ಒಂದು ದಿನ ಸೌಮ್ಯ ಏನು ನೀವು ಕೆಲಸಕ್ಕೆ ಹೋಗುವುದಿಲ್ಲವೆ? ಎಂದು ಕೇಳಿದಳು. ಸಿಗರೇಟ್, ವಿಸ್ಕಿ ಗ್ಲಾಸ್ ಹಿಡಿದಿದ್ದ ರಾಕೇಶ ಅವಳ ಮಾತಿಗೆ ಗಮನವೇ ಕೊಡದೆ ಬೇರೆ ಏನೋ ಯೋಚನೆಯಲ್ಲಿ ಮಗ್ನನಾಗಿದ್ದ.
            ದಿನಗಳು ಉರುಳಿದವು. ಸೌಮ್ಯಳಿಗೆ ವಾಂತಿ ಶುರುವಾಯಿತು. ಬೆಳಗ್ಗೆ ಏಳುವಾಗ ತಲೆಸುತ್ತುತ್ತಿತ್ತು, ಹಾಗೇ ಮಲಗಿದಳು
ಬಾಗಿಲು ತಟ್ಟಿದ ಶಬ್ದ...... 
ಏಳಲಾರದೆ ಎದ್ದಳು, ರಾತ್ರಿಯೆಲ್ಲಾ ನಿದ್ದೆ ಇರಲಿಲ್ಲ. ಪಕ್ಕದಲ್ಲಿ ನೋಡಿದಾಗ ರಾಕೇಶ ಇಲ್ಲದುದನ್ನು ಗಮನಿಸಿದಳು, ಕಣ್ಣು ಬಿಟ್ಟು ಗಡಿಯಾರ ನೋಡಿದಾಗ ಘಂಟೆ 11 ಆಗಿತ್ತು. ಮೆಲ್ಲನೆ ಎದ್ದಳು. ಬಾಗಿಲು ತಟ್ಟುವ ಶಬ್ದ ಇನ್ನೂ ಹೆಚ್ಚಾಯಿತು. ಬಾಗಿಲು ತೆಗೆದಾಗ ಅವಳ ಅಮ್ಮ ಮಗಳನ್ನು ಬಹಳ ದಿನಗಳ ನಂತರ ನೋಡಲು ಬಂದಿದ್ದರು. ಅಮ್ಮ, ಏನು ಫೋನ್ ಮಾಡದೆ ಬಂದಿರುವೆ? ಒಬ್ಬಳೇ ಬಂದೆಯಾ? ಬ್ಯಾಗ್ ತೆಗೆದುಕೊಂಡಳು. ಸೌಮ್ಯ, ಬ್ಯಾಗ್ ನಲ್ಲಿ ನಿನಗೆ ಇಷ್ಟವಾದ ರವೆ ಉಂಡೆ ಇದೆ ತಿನ್ನಮ್ಮ'' ಸೌಮ್ಯಳ ಅಮ್ಮ ಹೇಳಿದಳು. ಇಲ್ಲಮ್ಮ, ಇನ್ನು  ಈಗ ತಾನೆ ಏಳುತ್ತಿದ್ದೇನೆ. ಯಾಕೋ ತಲೆಸುತ್ತುತ್ತಾ ಇದೆ'' ಎಂದಳು. ಹೋಗಮ್ಮ, ಬೇಗನೇ ಮುಖ ತೊಳೆದು ಬಾ, ಒಟ್ಟಿಗೆ ಏನಾದರೂ ಹೊಟ್ಟೆಗೆ ಹಾಕೋಣ. ನಾನು ಏನೂ ತಿಂದಿಲ್ಲ'' ಎಂದು ಅಮ್ಮ ಅಡುಗೆ ಮನೆ ಕಡೆಗೆ ನಡೆದರು
            ಕೆಲಸದ ಗೌರಮ್ಮ ಮಧ್ಯಾಹ್ನದ ಅಡುಗೆಯ ತಯಾರಿಯಲ್ಲಿ ಇದ್ದಳು. ಬಿಸಿ ಬೇಳೆ ಬಾತ್, ಮೊಸರನ್ನ ರೆಡಿಯಾಗಿತ್ತು. ಹಪ್ಪಳ ಕರಿದರೆ ಮುಗಿಯಿತು ಎಂದಳು ಗೌರಮ್ಮ. ಸೌಮ್ಯ ಸ್ನಾನ ಮುಗಿಸಿ, ರಾಕೇಶ ಎರಡು ದಿನದ ಹಿಂದೆ ತಂದ ಚೂಡಿದಾರ ಹಾಕಿಕೊಂಡು ಬಂದಳು. ಹಸಿರು ಬಣ್ಣದ ಚೂಡಿದಾರ್ ನಲ್ಲಿ ಮುದ್ದಾಗಿ ಕಾಣುತ್ತಿದ್ದ ಮಗಳನ್ನು ನೋಡಿ, ಅಮ್ಮನಿಗೆ ಒಂದು ವಿಧದಲ್ಲಿ  ತೃಪ್ತಿ ಅನ್ನಿಸಿ, ದೃಷ್ಟಿ ಆಗದಿರಲಿ ಅಂದುಕೊಂಡಳು.
            ಇಬ್ಬರೂ ಊಟಕ್ಕೆ ಕುಳಿತಾಗ ಫೋನ್ ರಿಂಗ್ ಆಯಿತು. ರಾಕೇಶನದು, ನಾನು ಊಟಕ್ಕೆ ಬರಲ್ಲ ದಿನ ತುಂಬಾ ಬ್ಯುಸಿ ನೀನು ಕಾಯಬೇಡ.
            ಸೌಮ್ಯಳ ಅಮ್ಮ ಊಟ ಬಡಿಸಿ ಆಗಿತ್ತು. ಇಬ್ಬರೂ ಅಲ್ಲಿಯ ಇಲ್ಲಿಯ ವಿಚಾರ, ಸಂಬಂಧಿಕರಲ್ಲಿ ಆಗುತ್ತಿದ್ದ ಗಲಾಟೆಗಳು, ಇನ್ಯಾರೋ ಟೂರ್ಗೆ ಹೋಗಿ ಬ್ಯಾಗ್ ಕಳೆದು ಹೋಗಿದ್ದು, ಮತ್ತೆ ಸಿಕ್ಕಿದ್ದು, ಹೀಗೆ ಹರಟೆ ಹೊಡೆಯುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ.
            ಅಡುಗೆಯವಳು ತಿನ್ನಲು ಕುರುಕಲು ತಂದಿತ್ತಳು. ಹಾಗೆಯೇ ತೋಟದಲ್ಲಿ ಸುತ್ತಾಡಿದರು.
            ಸೌಮ್ಯಳನ್ನು ಅವಳ ಅಮ್ಮ ಮೆಲ್ಲನೆ ಏನಮ್ಮಾ ಚೆನ್ನಾಗಿದ್ದೀಯಾ? ಎಂದು ಕೇಳಿದರು
            ಯಾಕಮ್ಮ ಹಾಗೆ ಕೇಳುತ್ತೀಯಾ? ಸೌಮ್ಯ ಅಂದಳು.
            ಅಲ್ಲ, ರಾಕೇಶ ಮನೆಯಲ್ಲಿ ಕಾಣುತ್ತಿಲ್ಲ, ಇಷ್ಟು ಹೊತ್ತಿನವರೆಗೂ ಏನು ಕೆಲಸ?'' ಎಂದಳು.
            ಯಾಕೋ ಗೊತ್ತಿಲ್ಲಮ್ಮ ಎರಡು ದಿನದಿಂದ ಮನೆಗೆ ಬಂದಿಲ್ಲ ಫೋನಿನಲ್ಲಿ ಬಹಳ ಕೆಲಸವಿದೆ ಎಂದು ಹೇಳುತ್ತಿದ್ದಾರೆ ಎಂದಳು.
            ಮಗಳ ಮುಖ ನೋಡಿ ಅಮ್ಮನಿಗೆ ಚಿಂತೆ ಪ್ರಾರಂಭವಾಯಿತು. ರಾಕೇಶನನ್ನು ಭೇಟಿ ಮಾಡಿಯೇ ಹೋಗುವುದು ಎಂದು ನಿರ್ಧಾರ ಮಾಡಿಕೊಂಡಳು. ಹಾಗೂ ಹೀಗೂ ಸಮಯ ಕಳೆದು, ರಾತ್ರಿ 12 ಘಂಟೆಗೆ ತೂರಾಡುತ್ತಾ ಬಂದ ರಾಕೇಶನನ್ನು ಮಾತನಾಡಿಸುವುದು ಬೇಡವೆನಿಸಿತ್ತು.
            ಬೆಳಗ್ಗೆ 11 ಘಂಟೆಗೆ ಈಗ ತಾನೆ ಬೆಳಗಾದಂತೆ ಎದ್ದು ಬಂದ. ರಾತ್ರಿಯ ಕುಡಿತದ ಮಬ್ಬು ಇಳಿದಿರಲಿಲ್ಲ.  ಅತ್ತೆ ಯಾವಾಗ ಬಂದಿರಿ? ಮಾವ ಹೇಗಿದ್ದಾರೆ ಎಂದ.
            ಅತ್ತೆಯನ್ನು ಮಾತಾನಾಡಿಸಿದ ರೀತಿ ನೋಡಿ ಸೌಮ್ಯಳಿಗೆ ಆಶ್ಚರ್ಯವಾಯಿತು. ಅಮ್ಮನಿಗೆ ತಿಳಿಯುವುದು ಬೇಡವೆಂದು ಅವಳು ಕೇಕ್ ಮಾಡುವ ಕೆಲಸದಲ್ಲಿ ಮಗ್ನಳಾದಳು. ಮನಸ್ಸೆಲ್ಲಾ ಮನೆಯಲ್ಲಿ ಕೆಲವು ದಿನದಿಂದ ನಡೆಯುತ್ತಿದ್ದ ವಿಷಯಗಳ ಬಗ್ಗೆ ಮೆಲುಕು ಹಾಕುತ್ತಿತ್ತು.
            ರಾಕೇಶ ಮದುವೆಯಾಗಿ 3 ತಿಂಗಳಿಂದ ಅವನ ಇನ್ನೊಂದು ಮುಖತೋರಿಸಲು ಪ್ರಾರಂಬಿಸಿದ್ದ. ಹೆಂಡತಿಗೆ ಸುಂದರವಾದ ಬಟ್ಟೆಗಳನ್ನು ತೊಡಿಸುವುದು, ಸಿಂಗರಿಸುವುದು, ಫೋಟೋ ತೆಗೆಯುವುದು ಮಾಡುತ್ತಾ ಸಂತೋಷಪಡುತ್ತಿದ್ದ. ಸಿನಿಮಾಗಳಿಗೂ ಕರೆದು ಕೊಂಡು ಹೋಗಿ ಅಲ್ಲಿ ಪ್ರಚೋದಿಸಿ ತೋರಿಸುತ್ತಿದ್ದ ಹಾವ ಭಾವಗಳನ್ನು ಹೆಂಡತಿಯಲ್ಲಿ ಕಾಣಲು ಶುರುಮಾಡಿ, ಸೌಮ್ಯಳಿಗೆ ಹಿಂಸೆ ನೀಡುತ್ತಿದ್ದ. ಅವಳು ಅಸಮಾಧಾನ ತೋರಿಸಿದರೆ ಕೈಯಲ್ಲಿದ್ದ ಉರಿಯುವ ಸಿಗರೇಟಿನಿಂದ ಸುಡುತ್ತಿದ್ದ. ದಿನಗಳೆದಂತೆ ಕ್ರೂರತೆ ಜಾಸ್ತಿಯಾಗುತ್ತಾ ಹೋಯಿತು. ಅಮ್ಮನ ಮನೆಗೆ ಹೋಗುವುದಿರಲಿ ಅಲ್ಲಿಯ ವಿಷಯ ಮಾತನಾಡಲು ಬಿಡುತ್ತಿರಲಿಲ್ಲ. ಮೊದಲೆಲ್ಲಾ ಅಲ್ಲಿಯ ಹತ್ತಿರದ ಕ್ಲಬ್ಗೆ ಕರೆದುಕೊಂಡು ಹೋಗಿ, ಎಲ್ಲರೊಂದಿಗೆ ಬೆರೆಯುತ್ತಿದವನು, ಈಗ ಯಾರೂ ಬೇಕಿರಲಿಲ್ಲ
            ಹಳೆಯ ಪರಿಚಯಸ್ಥರು ಸೌಮ್ಯಳನ್ನು  ಮಾತನಾಡಿಸಲು ಬಂದರೆ ದಿನ ಅವಳನ್ನು ದೇವರೇ ಕಾಯಬೇಕಿತ್ತು. ಕಚ್ಚುವುದು, ಜಿಗುಟುವುದು, ನೋಯಿಸುವುದು, ಅವರೊಂದಿಗೆ ನಿನ್ನ ಲಲ್ಲೆಯೇನು? ನೀನು ಅವರನ್ನು ಮರಳು ಮಾಡಬೇಡ ಎಂಬ ಕುಹಕದ ಮಾತುಗಳು. ರಾತ್ರೆಯೆಲ್ಲ ನಿದ್ರೆ ಮಾಡಲು ಬಿಡುತ್ತಿರಲ್ಲಿಲ್ಲ. ಸೌಮ್ಯ ಇದೆಲ್ಲಾ ಅಮ್ಮನಿಗೆ ಗೊತ್ತಾಗದಂತೆ ಬಹಳ ಜಾಗ್ರತೆ ವಹಿಸಿದ್ದಳು. ಅಮ್ಮನನ್ನು ಬೇಗ ಮನೆಯಿಂದ ಕಳುಹಿಸಬೇಕು . ಅಪ್ಪನಿಗೆ ಫೋನ್ ಮಾಡಿ ಬೇಗನೆ ಬಂದು ಅಮ್ಮನನ್ನು ಕರೆದೊಯ್ಯಲು ಹೇಳಿದಳು. ಅಮ್ಮ ನೀ ಹೋಗಮ್ಮ. ಅಪ್ಪನಿಗೆ ನೀನಿಲ್ಲದೆ ಬಹಳ ಬೇಜಾರು. ಎಷ್ಟು ಜನ ಕೆಲಸದವರಿದ್ದರೂ, ನೀನಿದ್ದಂತೆ ಆಗಲ್ಲ. ವಯಸ್ಸಾದಂತೆ ನೀನು ಜೊತೆಗೆ ಇರಬೇಕು ಅನಿಸಿರುತ್ತೆ'' ಎಂದಳು. ತೋಟದಿಂದ ಅಪ್ಪನಿಗೆ ಇಷ್ಟವಾದ ಬದನೆ, ಬೆಂಡೆ ಕಿತ್ತು ತಂದಳು. ಅಮ್ಮನಿಗೆ ಊಟ ಬಡಿಸಿ ಡ್ರೈವರನ್ನು ಕರೆದು ಅಮ್ಮನನ್ನು ಬೇಗನೆ ಕಳುಹಿಸಿಕೊಟ್ಟಳು. ಕತ್ತಲಾಯಿತು. ದೀಪ ಹಚ್ಚಲು ಹೋದಾಗ ಜೀಪು ಬಂದ ಶಬ್ದ ಕೇಳಿಸಿತು. ರಾಕೇಶ ತೂರಾಡುತ್ತಾ ಒಳಗೆ ಬಂದ. ಸೌಮ್ಯಳಲ್ಲಿ ನಿನ್ನ ಅಮ್ಮ ಹೋದ ಹಾಗಿದೆ, ಕಾರು ಕಾಣಿಸುತ್ತಿಲ್ಲ ಎಂದು ತೊದಲಿದ
            ಹೌದು ಮಧ್ಯಾಹ್ನ ಊಟ ಮುಗಿಸಿ ಹೋದರು ಎಂದಳು
            ಒಳ್ಳೆಯದಾಯಿತು.  ಇಲ್ಲಿಯ ವಿಷಯ ಏನಾದರೂ ಬಾಯಿ ಬಿಟ್ಟೆಯಾ''? ಎಂದು ಪ್ರಶ್ನಿಸಿದ.
            ಯಾವ ವಿಷಯ!?'' ಆಶ್ಚರ್ಯದಿಂದ ಸೌಮ್ಯ ಕೇಳಿದಳು. ರಾಕೇಶ ದುರು ದುರುನೆ ನುಂಗುವಂತೆ ನೋಡಿದ.
            ಏನೇ ಬಹಳ ನಾಟಕ ಆಡ್ತಾ ಇದ್ದಿಯಾ?'' ಅವಳ ನೀಳ ಕೂದಲಿಗೆ ಕೈ ಹಾಕಿ ದರದರನೆ ಎಳೆದು ಹೋದ.  ಅವಳ ಮೈಮೇಲೆ ಬಿದ್ದು ಹಿಂಸಿಸಿ, ಮೃಗದಂತೆ ವರ್ತಿಸಿದ ಆಮೇಲೆ ಏನು ಆಗದವನಂತೆ ಸುಮ್ಮನೆ ಬಿದ್ದು ಕೊಂಡ
ಸೌಮ್ಯಳಿಗೆ ಅಳುವುದಕ್ಕು ತ್ರಾಣವಿರಲಿಲ್ಲ. ಕಣ್ಣಲ್ಲಿ ನೀರು ತುಂಬಿತ್ತು.
            ಬೆಳಗ್ಗೆ ಕೆಲಸದವರು ಬಂದಾಗ, ತನಗೇನೂ ಆಗಲೇ ಇಲ್ಲ ಎನ್ನುವಂತೆ ಸಿಂಗರಿಸಿ ಕೊಂಡಳು. ಕಾಫಿ ಕುಡಿದು ಹೊಲಿಯುವ ದಾರಕ್ಕೆ ಕೈ ಹಾಕಿದಳು, ಚಿತ್ರದಲ್ಲಿನ ಬಣ್ಣ ತುಂಬುವ ಪ್ರಯತ್ನ ಮಾಡಿದಳು. ಸಮಯ ಕಳೆಯುತ್ತಾ ಇತ್ತು
            ಯಾಕೊ ತಲೆ ಸುತ್ತಿ ವಾಂತಿ ಬಂದಹಾಗೆ ಅನ್ನಿಸಿತು. ಹೀಗೆ ಸ್ವಲ್ಪ ದಿನದಿಂದ ಆಗುತ್ತಿದ್ದುದನ್ನು ಅಮ್ಮನಿಗೆ ಹೇಳಿಕೊಳ್ಳಬೇಕೆಂದು ಫೋನ್ ಮಾಡಿದಳು. ವಿಷಯ ತಿಳಿದ ಅಪ್ಪ ಸಂಭ್ರಮದಿಂದ ಬಂದು ಬುಟ್ಟಿ ಹಣ್ಣು ತೆಗೆದುಕೊಂಡು ಯಾವ ಮಾಯೆಯಲ್ಲಿ ಬಂದರೋ ತಿಳಿಯಲಿಲ್ಲ. ಮಗಳು ತಾಯಿಯಾಗುವಳು ಎಂಬ ಸಂತೋಷ ಅಪ್ಪನಿಗೆ, ಸೌಮ್ಯಳಿಗೆ ದುಃಖದಲ್ಲಿ ಗಂಟಲು ಕಟ್ಟಿದಂತಾಯಿತು. ಅಪ್ಪನ ಇಷ್ಟೊಂದು ಸಂತೋಷವನ್ನು ಅವಳು ಇದುವರೆಗೆ ನೋಡಿರಲ್ಲಿಲ್ಲ. ಅಪ್ಪನನ್ನು ನೋಯಿಸಲಾರದೆ, ಅವಳ ವೇದನೆಯನ್ನು ಹೇಳಲಾರದೆ ಮೂಕಿಯಾದಳು. ರಾಕೇಶನಿಗೂ ಸೌಮ್ಯ ತನ್ನ ಮಗುವಿನ ತಾಯಿಯಾಗುವಳು ಎಂದು ಸಂತೋಷವಾಗಿದ್ದು ಕಂಡು ಸೌಮ್ಯಳಿಗೆ ಒಂದು ರೀತಿಯ ಸಂತೋಷವಾಯಿತು. ಇನ್ನು ತನ್ನೊಂದಿಗಿನ ಅವನ ವರ್ತನೆ ಸುಧಾರಿಸಬಹುದು ಎಂದುಕೊಂಡಳು.
            ಸ್ವಲ್ಪ ದಿನಗಳು ಅವನಲ್ಲಿ ಒಂದು ತರಹದ ಬದಲಾವಣೆ ಕಂಡಳು. ಮಾತು ಕಡಿಮೆಯಾಯಿತು. ಮನೆಗೆ ಬೇಗ ಬರುತ್ತಿದ್ದ. ಜಾಸ್ತಿ ಹೊತ್ತು ನಿದ್ದೆ ಮಾಡುತ್ತಿದ್ದ. ಯಾವಾಗಲೂ ಮಲಗುವ ಆಸೆಯಲ್ಲಿರುತ್ತಿದ್ದ. ಹೆರಿಗೆಯ ಸಮಯ ಹತ್ತಿರವಾಗುತ್ತಿದ್ದಂತೆ ತವರು ಮನೆಗೆ ಹೋಗುವ ತಯಾರಿಯಲ್ಲಿ ಸೌಮ್ಯಳಿದ್ದಳು.  ರಾಕೇಶನ ಕಡೆ, ತೋಟದ ಕಡೆ ಗಮನಕೊಡುವುದು ಕಡಿಮೆಯಾಗಿತ್ತು
            ಎರಡು ದಿನಗಳ ಹಿಂದೆ ಜೀಪನ್ನು ಯಾರೋ ಹಣ ಕೊಟ್ಟು ತೆಗೆದುಕೊಂಡು ಹೋಗಿದ್ದರು. ದಿನ ಹೋದ ರಾಕೇಶ, ಮತ್ತೆರಡು ದಿನ ಬಿಟ್ಟು ಮನೆಗೆ ಬಂದಿದ್ದ. ಮನೆಯಲ್ಲಿ ಒಬ್ಬಳೇ ಇರುವುದು ಕಷ್ಟವಾಗುತ್ತಿತ್ತು ಸೌಮ್ಯಳಿಗೆ, ರಾಕೇಶನಲ್ಲಿ ತನ್ನನ್ನು ಅಮ್ಮನ ಮನೆಗೆ ಕರೆದೊಯ್ಯುವಂತೆ ಕೇಳಿಕೊಂಡಳು, ಅದನ್ನು ಕೇಳಿದವನು ಮತ್ತೆ ಅದೇ ಹಿಂದಿನ ರಾಕೇಶನಾದ. ಹುಚ್ಚು ಮಾತು, ಕೊಂಕು ನುಡಿ, ತಾಂಡವ ನೃತ್ಯವನ್ನೇ ಮಾಡಿದ.
            ಯಾರು ಆಗದ ತಾಯ್ತನವೆ ನಿನ್ನದು ಸುಮ್ಮನಿರು'' ಎಂದು ಅವಳ ಬಾಯಿ ಮುಚ್ಚಿಸಿದ. ಮರುದಿನ ಬೆಳಗ್ಗೆ ಅವಳ ಅಪ್ಪ ಅಮ್ಮ ಬಂದು ಮಗಳನ್ನು ಕಳುಹಿಸಿ ಕೊಡಲು ಕೇಳಿದಾಗ ಹಿಂದಿನ ರಾತ್ರಿಯ ಯಾವುದೇ ವರ್ತನೆ ತೋರಿಸದೆ ಕರೆದುಕೊಂಡು ಹೋಗುವಂತೆ ಹೇಳಿದ. ಇನ್ನೇನೂ ಎಲ್ಲಾ ರೆಡಿಯಾಗೋಣವೆಂದು ಸೌಮ್ಯ ಒಳಗಡೆ ಪೆಟ್ಟಿಗೆಯಲ್ಲಿದ್ದ ಒಡವೆ ತೆಗೆಯಲು ಹೋದಾಗ ಒಡವೆಗಳು ಕಾಣೆಯಾಗಿದ್ದವು. ಅಲ್ಲಿ ಪ್ಯಾಕೇಟು ಪುಡಿಯ ಪೊಟ್ಟಣಗಳನ್ನು ಅವಳು ಆಗಷ್ಟೇ ಗಮನಿಸಿದ್ದಳು, ಕುಡಿಯುವ ಛಟ ಬಿಟ್ಟು ಗಾಂಜಾದ ದಾಸನಾಗಿರುವುದು ತಿಳಿದಾಗ ಅವಳಿಗೆ ಆಘಾತವಾಯಿತು. ಈಗ ಅದರ ಬಗ್ಗೆ ಮಾತನಾಡಿದರೆ ಬಂದ ತಂದೆ ತಾಯಿಯರ ಎದುರು ತೊಂದರೆಯಾಗುವುದು ಎಂದು ಸುಮ್ಮನೆ ಹೊರಟುಬಿಟ್ಟಳು. ತವರಿಗೆ ಬಂದ ಎರಡನೇ ದಿನ ಸೌಮ್ಯ ಗಂಡು ಮಗುವಿನ ತಾಯಿಯಾದಳು. ಸುದ್ದಿಯನ್ನು ರಾಕೇಶನಿಗೆ ತಿಳಿಸಲೆಂದು ಸೌಮ್ಯಳ ಅಪ್ಪ ಅವನಲ್ಲಿಗೆ ಹೋದರು. ಮತ್ತಿನ ಗುಂಗಿನಲ್ಲಿದ್ದ ರಾಕೇಶ ಅವರನ್ನು ಅವಮಾನ ಮಾಡಿ ಕಳುಹಿಸಿದ. ಮಗುವನ್ನು ನೋಡಲು ಬಂದಿರಲಿಲ್ಲ. ಇದರಿಂದ ಬಹಳವಾಗಿ ಮನನೊಂದು ಸೌಮ್ಯಳ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡರು.
            ಸೌಮ್ಯಳ ಜೀವನದ ಇನ್ನೊಂದು ಹೊಸ ಅಧ್ಯಾಯ ಪ್ರಾರಂಭವಾಯಿತು. ಅವಳು ಅರ್ಧಕ್ಕೆ ಬಿಟ್ಟಿದ್ದ ಎಂ ಬಿ ಕೋರ್ಸ್ ಮಾಡಲು ಹೊರಟಳು. ಪತಿ ತೀರಿಕೊಂಡ ದುಃಖ, ಮಗಳ ದುರಂತ ಜೀವನದಿಂದಾಗಿ ಅಮ್ಮ ತುಂಬಾ ನೊಂದು ಹೋಗಿದ್ದಳು. ಅಳಿಯನ ತೋಟವಿರುವ ಊರೇ ಬೇಡವೆಂದುಕೊಂಡು ತಮ್ಮ ತೋಟವನ್ನು ಮಾರಿ ಪಕ್ಕದ ಸಣ್ಣ ಊರಿಗೆ ಹೋಗಿ, ಅಲ್ಲ್ಲೊಂದು ಮನೆ ಕಟ್ಟಿಕೊಂಡರು. ಸೌಮ್ಯ ಹಿಂದೆ ಇದ್ದ ಹಾಸ್ಟೆಲ್ ನಲ್ಲಿ ಇರೋಣವೆಂದುಕೊಂಡರೆ ಅಲ್ಲಿಗೆ ರಾಕೇಶನ ಉಪದ್ರ-ಉಪಟಳ ಹೆಚ್ಚಾಯಿತು. ರಾಕೇಶ ರಾತ್ರಿ ವೇಳೆ ಸೌಮ್ಯಳಿಗೆ ಫೋನ್ ಮಾಡಿ ತೊಂದರೆ ಕೊಡುತ್ತಿದ್ದ ಹಾಗೂ ಬೇರೆ ಪಡ್ಡೆ ಹುಡುಗರಿಗೆ ಕಾಸುಕೊಟ್ಟು ಸೌಮ್ಯಳಿಗೆ ಕೀಟಲೆ ಕೊಡುವಂತೆ ರಾಕೇಶ ಹುರಿದುಂಬಿಸುತ್ತಿದ್ದ. ಇದರಿಂದಾಗಿ ಅವಳು ಹಾಸ್ಟೆಲ್ ಬಿಟ್ಟು ಬಿಟ್ಟಳು. ಸೌಮ್ಯ - ರಾಕೇಶರ ಸಂಬಂಧ ಕಡಿದಿತ್ತಾದರೂ, ನ್ಯಾಯಾಲಯದಲ್ಲಿ ಮಗು ಅಪ್ಪನ ಜೊತೆಯಲ್ಲಿರುವಂತೆ ಮಾಡಿಸಿದ್ದ. ತಿಂಗಳಿಗೊಮ್ಮೆ ಅಮ್ಮನಿಗೆ ನೋಡುವ ಅವಕಾಶವಿತ್ತಾದರೂ ಕಿರುಕುಳದ ಹೆದರಿಕೆಯಿಂದ ಮಗನ ಮೇಲಿನ ಬಂಧನ, ವ್ಯಾಮೋಹ ಬಿಟ್ಟಳು. ಮಗುವಿನ ತಲೆ ತುಂಬಾ ಅಮ್ಮ ಕೆಟ್ಟವಳು ಎಂಬ ಕಥೆಯನ್ನು ರಾಕೇಶ ಬೋದಿಸಿದ್ದ. ತಾಯಿಯನ್ನು ಕಾಣುವ ಅವಕಾಶ ಸಿಕ್ಕಿದಾಗಲೂ ದೂರದಿಂದಲೇ ನೋಡಿ ಮಗು ಅಸಮಾದಾನ ವ್ಯಕ್ತಪಡಿಸುತ್ತಿತ್ತು. ಮಗನನ್ನು ಬೋರ್ಡಿಂಗ್ ನಲ್ಲಿ ಓದುವ ಏರ್ಪಾಟು ಮಾಡಿ ತನ್ನ ರಾಕ್ಷಸ ಕೃತ್ಯವನ್ನು ಅಡೆ ತಡೆಯಿಲ್ಲದೆ ಮುಂದುವರಿಸಿದ. ಅಮ್ಮನಿಂದ ಮಗನನ್ನು ದೂರಮಾಡಿಸಿ ತಾನು ಗೆದ್ದೆನೆಂಬ ಅಹಂಕಾರವೂ ರಾಕೇಶನಿಗಿತ್ತು.
            ಕಷ್ಟಪಟ್ಟು ಡಿಗ್ರಿ ಸಂಪಾದಿಸಿದ ಸೌಮ್ಯಳಿಗೆ ಪಂಚತಾರಾ ಹೋಟೆಲಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ವಯಸ್ಸು ಸಣ್ಣದಿದ್ದು, ಕಾಣಲು ಸುಂದರಳಾಗಿದ್ದುದರಿಂದ ಎಲ್ಲರೂ ಅವಳನ್ನು ಇಷ್ಟಪಡುತಿದ್ದರು. ಚಾಣಾಕ್ಷತನದಿಂದ ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು. ಬಡ್ತೀಹೊಂದಿ ಇನ್ನೂ ದೊಡ್ಡ  ಹುದ್ದೆಗೆ  ಏರಿದಳು. ಮಟ್ಟಕ್ಕೆ ತಂದ ದೇವರನ್ನು ನಿತ್ಯವೂ ಸ್ಮರಿಸುತ್ತಿದ್ದಳು, ಅಮ್ಮನಿಗೆ ಮಗಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು. ಬೇರೆ ಮನೆ ಮಾಡಿ ಅಮ್ಮನನ್ನೂ ತನ್ನೊಂದಿಗೆ ಇರಲು ಹೇಳಬೇಕೆಂದು ಯೋಚಿಸುತ್ತಿದ್ದಳು. ನಿದ್ರೆ ಹತ್ತಿತ್ತು
ಟ್ರಿಣ್ ಟ್ರಿಣ್ ಫೋನ್ ಸದ್ದಾಯಿತು.
ಯಾರು ? ನಿದ್ದೆಗಣ್ಣಲ್ಲಿ ಕೇಳಿದಳು .
ಹಲೋ, ಸ್ವೀಟೀ, ಹೇಗಿದ್ದಿಯಾ. ದಿನಾ ದೂರದಿಂದ ನೊಡುತ್ತಿರುತ್ತೇನೆ.  ಹತ್ತಿರದಿಂದ ನೋಡಿ ಮಾತಾನಾಡಿಸುವ ಆಸೆ .
            ಯಾರು ನೀವು ಪರಿಚಿತರಂತೆ ಮಾತಾನಾಡುತ್ತಿದ್ದೀರಿ? ಅದು ಇಷ್ಟು ಹೊತ್ತಿನಲ್ಲಿ, ನನಗಂತೂ ಪರಿಚಯವಿಲ್ಲದ ಧ್ವನಿ, ಇದು ಸಭ್ಯತನವಲ್ಲ.
            ಹಲೋ ಡಿಯರ್ ನಿನಗೆ ನನ್ನ ಪರಿಚಯವಿದೆ ನೆನಪಿಸಿಕೊ. ಹ್ಹ... ಹ್ಹ.. ನಗು ಸೌಮ್ಯಳಿಗೆ ಕತ್ತು ಹಿಚುಕಿದಂತಾಯಿತ್ತು. ಯಾರಿರಬಹುದು?
            ನಿನ್ನ ಹೆಸರು ಪರಿಚಯ ಹೇಳು ಇಲ್ಲಾ ಫೋನ್ ಇಡು ... ಸ್ವಲ್ಪ ಖಾರವಾಗಿ ಅಂದಳು. ನಾನು ಡೇವಿಡ್. ಮೊನ್ನೆ ಪಾರ್ಟಿ ಆಗಿದ್ದಾಗ ನನ್ನ ಗೆಸ್ಟ್ ಗಳಿಗೆ ನೀನು ಬಹಳ ಚೆನ್ನಾಗಿ ಆರೆಂಜ್ ಮಾಡಿದ್ದಿ. ನಿಮ್ಮ ಮ್ಯಾನೇಜರ್ ಗೆ ನಿನಗೆ ಪ್ರಮೋಷನ್ ಕೊಡುವಂತೆ ನಾನೇ ಹೇಳಿದ್ದು. ನೀನು ನನಗೆ ಅಷ್ಟೊಂದು ಇಷ್ಟವಾಗಿದ್ದಿ ಹ್ಹಿ... ಹ್ಹಿ... ಹಲ್ಲು ಕಿರಿದ ಸದ್ದು
            ಸರ್ ನನಗೀಗ ತಲೆ ತುಂಬಾ ನೋಯುತ್ತಿದೆ ರಾತ್ರಿ ಬಹಳವಾಯಿತು. ಎನ್ನುತ್ತಾ ಫೋನ್ ಇಟ್ಟಳು. ಈಗ ಸೌಮ್ಯಳಿಗೆ ತನ್ನ ಪ್ರಮೋಷನ್ ದುರುದ್ದೇಶ ತಿಳಿಯಿತು. ತನ್ನ ಅಪ್ಲಿಕೇಷನ್ ನಲ್ಲಿ  ಮದುವೆಯಾಗಿ ಡೈವರ್ಸ್ ಎಂದು ಬರೆದಿದ್ದಳು. ಡೇವಿಡ್ ಗೆ ಇವಳು ಸುಲಭವಾಗಿ ಸಿಗಬಹುದೆಂದು ಅವನ ಯೋಚನೆಯಾಗಿರಬಹುದು. ಪಂಚತಾರ  ಹೋಟೆಲ್ ನಲ್ಲಿರುವವಳು ತಾನೇ
            ಬೆಳಗ್ಗೆ ಎಂದಿನಂತೆ ಆಫೀಸ್ ಗೆ ಹೋದಾಗ, ಮ್ಯಾನೇಜಿಂಗ್ ಡೈರಕ್ಟರಲ್ಲಿ ವಿಷಯ ಪ್ರಸ್ತಾಪಿಸಿದಳು. ಅವರಿಗೆ ಯಾವ ತರಹದ ಆಶ್ಚರ್ಯವೂ ಆಗಲಿಲ್ಲ. ಇಂತಹ ಕಡೆಗಳಲ್ಲಿ ರೀತಿ ಇರುವುದು ಸಹಜ. ಅದಕ್ಕೆಲ್ಲಾ ಮಹತ್ವ ಕೊಡುವುದು ಬೇಡ ಬಿಡಮ್ಮ ಎಂದು  ಸುಲಭವಾಗಿ ಅಂದರು.
            ನಾಳೆಯಿಂದ ಮೂರು ದಿನ ಬಹಳ ದೊಡ್ಡ ಪ್ರೋಗ್ರಾಮ್ ಇದೆ. ಊರಿನ ಬಹಳ ದೊಡ್ಡ ಮನುಷ್ಯರೆಲ್ಲಾ ಸೇರುತ್ತಾರೆ. ಸರಿಯಾದ ಪ್ಲಾನಿಂಗ್ ಮಾಡು. "ವಿ ಶಲ್ ಮೀಟ್ ಫಾರ್ ಡಿಸ್ಕಷನ್". ನಿನ್ನ ರಿಕ್ವೈರ್ ಮೆಂಟ್ ಏನಿದ್ದರೂ ತರಿಸಿಬಿಡು ಎನ್ನುತ್ತಾ ಮೊಬೈಲ್ ನಲ್ಲಿ ಮಾತನಾಡುತ್ತಾ ಮುಂದೆ ಹೋದ ವ್ಯಕ್ತಿಯನ್ನೇ ನೋಡುತ್ತಾ ನಿಟ್ಟುಸಿರು ಬಿಟ್ಟಳು ಸೌಮ್ಯ. ಮೂರು ದಿನವೂ ಬಿಡುವಿಲ್ಲದ ಕೆಲಸದ ಭರದಲ್ಲಿ ಯೋಚಿಸಲು ಆಕೆಗೆ ಸಮಯವಿರಲಿಲ್ಲ. ತನಗೆ ವಹಿಸಿದುದನ್ನು ಅಚ್ಚುಕಟ್ಟಾಗಿ ಮುಗಿಸಿದಳು, ಎಲ್ಲವೂ ನಿಗದಿಪಡಿಸಿದಂತೆಯೇ ನಡೆಯಿತು ಎಂದು ಡೈರಿಯಲ್ಲಿ ಬರೆದು ನಿದ್ರಿಸಿದಳು.

........ಮುಂದುವರೆಯುವುದು



No comments:

Post a Comment