Friday, November 29, 2013

'ಅಂಡಮಾನ : ಕಂಡಹಾಗೆ -ಡಾ ಎಚ್ ಎಸ್ ಅನುಪಮಾ





ಡಾ ಎಚ್ ಎಸ್ ಅನುಪಮಾ

 'ಅಂಡಮಾನ : ಕಂಡಹಾಗೆ ` ಡಾ ಅನುಪಮಾ ಅವರ ಪ್ರವಾಸ ಕಥನ.  ನಮ್ಮ ಪ್ರಕಾಶನ ಪ್ರಕಟಿಸುತ್ತಿರುವ ಹೊಸ ಪುಸ್ತಕ ಇದಾಗಿದೆ. ಅದರಲ್ಲಿನ ಒಂದು ಅಧ್ಯಾಯ ನಿಮ್ಮ ಓದಿಗಾಗಿ ಇಲ್ಲಿದೆ. ಇದರಲ್ಲಿನ ಒಂದು ಭಾಗ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು
ಅಂಡಮಾನಿಗೆ ಹೋಗುತ್ತೇವೆ ಎಂದ ಕೂಡಲೇ ಬಂಧುವೊಬ್ಬರು, ‘ಅಯ್ಯೋ, ಅಲ್ಲಿ ಬಿಲ್ಲು ಬಾಣ ಇಟ್ಕಂಡಿರೋ ಕಾಡುಮನುಷ್ಯರು ಇದಾರಂತಲ್ಲ, ಅಲ್ಯಾಕೆ ಹೋಗ್ತಿದೀರ?’ ಎಂದರು. ಅಂಡಮಾನ್ ಎಂದರೆ ಕಾಡು, ಕಾಡು ಮನುಷ್ಯರು ಎಂದು ತಿಳಿದುಕೊಂಡ ಮೇನ್ ಲ್ಯಾಂಡಿನವರ ತಿಳುವಳಿಕೆಗೆ ವಿರುದ್ಧವಾಗಿ ಅಂಡಮಾನಿನ ಮೂರೂವರೆ ಲಕ್ಷ ಜನಸಂಖ್ಯೆಯಲ್ಲಿ ೦.೫% ಮಾತ್ರ ಮೂಲನಿವಾಸಿಗಳಿದ್ದಾರೆ. ಉಳಿದ ೯೯.೫% ವಲಸಿಗರೇ ತುಂಬಿದ್ದಾರೆ. ಅಂಡಮಾನಿನ ರಸ್ತೆ, ಬೀದಿಯಲ್ಲಿ ನಡೆದುಹೋಗುವಾಗ ನೀವು ಕಲಕತ್ತೆಯಲ್ಲೋ ಅಥವಾ ಕೇರಳ, ತಮಿಳುನಾಡಿನ ಸಣ್ಣಪಟ್ಟಣವೊಂದರಲ್ಲೋ ನಡೆಯುತ್ತಿರುವ ಭಾಸವಾಗುವುದೇ ಹೊರತು ‘ಕಾಡು ಮನುಷ್ಯ’ರ ದ್ವೀಪದಲ್ಲಿರುವಂತೆ ಅಲ್ಲ. 

ಅಂಡಮಾನ್ ಭಿನ್ನ ಭಾಷೆ, ದೇಶ, ಕುಲಗಳ; ಮಾನವಶಾಸ್ತ್ರೀಯವಾಗಿ ಭಿನ್ನ ತಳಿಗಳ; ಭಿನ್ನ ಕಾಲಮಾನದಲ್ಲಿ ಬದುಕುತ್ತಿರುವ ಗುಂಪುಗಳ ಒಂದು ವಸಾಹತುವಾಗಿದೆ.  ನಾಗರಿಕ ಸಮಾಜ ೨೧ನೇ ಶತಮಾನದಲ್ಲಿರುವಾಗ, ಆಧುನಿಕತೆಯೆಂಬ ಮಾಯಾಂಗನೆಯ ಮೋಹಕ್ಕೆ ಸಿಲುಕದೆ ಗಡಿಯಾರ-ಕ್ಯಾಲೆಂಡರುಗಳ ಹಂಗಿಲ್ಲದೆ ವಿಕಾಸವಾದದ ರೇಸಿನಲ್ಲಿ ನಮಗಿಂತ ೫೫ ಸಾವಿರ ವರ್ಷ ಹಿಂದೆ ‘ಐರನ್ ಏಜ್’ನಲ್ಲೇ ಉಳಿದುಬಿಟ್ಟಿರುವ ಸಮುದಾಯಗಳು ಅಂಡಮಾನಿನಲ್ಲಿವೆ. ಅಲ್ಲಿ ನಾಲ್ಕು ನೀಗ್ರಾಯ್ಡ್ ಹಾಗೂ ಎರಡು ಮಂಗೋಲಾಯ್ಡ್ ಬುಡಕಟ್ಟು ಕುಲಗಳಿವೆ. ಜರವಾ, ಗ್ರೇಟ್ ಅಂಡಮಾನಿಗಳು, ಒಂಗೇಗಳು ಮತ್ತು ಸೆಂಟಿನಲೀಯರು ನೀಗ್ರಾಯ್ಡ್ ಬುಡಕಟ್ಟುಗಳಾದರೆ ಶೊಂಪೇನರು ಹಾಗೂ ನಿಕೋಬಾರಿಗಳು ಮಂಗೋಲಾಯ್ಡ್ ಬುಡಕಟ್ಟು ಕುಲಗಳಾಗಿವೆ. 

ನೀಗ್ರಾಯ್ಡ್ ಬುಡಕಟ್ಟುಗಳು ಆಫ್ರಿಕಾ ಮೂಲದವರೆನ್ನಲಾಗುತ್ತದೆ. ದಕ್ಷಿಣ ಆಫ್ರಿಕಾ, ದಕ್ಷಿಣ ಭಾರತ, ಅಂಡಮಾನ್, ಆಸ್ಟ್ರೇಲಿಯಾ ಭೂಭಾಗಗಳೆಲ್ಲ ಸಂಪರ್ಕ ಹೊಂದಿದ್ದ ಕಾಲವೊಂದಿತ್ತು. ಆಗ ಜಾಂಜೀಬಾರ್ ಮೂಲಕ ಸಂಭವಿಸಿದ ಮಹಾಚಲನೆಯಲ್ಲಿ ಭೂ ಮಧ್ಯರೇಖೆಯ ಕೆಳ ಭಾಗದ ಪ್ರದೇಶದಲ್ಲಿ ನೀಗ್ರಾಯ್ಡ್ ಜನರು ಹರಡಿಕೊಂಡರು. ಕ್ರಮೇಣ ಭೂಭಾಗಗಳು ದೂರ ಸರಿದು ಖಂಡಗಳು ಜನ್ಮ ತಾಳಿದವು. ಅಂಡಮಾನ್ ಭೂಭಾಗ ಮಾತ್ರ ಸುತ್ತ ಸಾವಿರಾರು ಮೈಲು ನೀರೇ ನೀರಾಗಿ ಉಳಿದ ಭೂ ಪ್ರದೇಶಗಳಿಂದ ದೂರವುಳಿಯಿತು. ಉಳಿದ ಮಾನವರೊಂದಿಗೆ ಕೊಡು-ಕೊಳು-ಘರ್ಷಣೆ-ಸಂಪರ್ಕ ಇಲ್ಲವಾಗಿ; ಹಂಚಿಕೊಂಡ ಜ್ಞಾನ ಇಲ್ಲವಾಗಿ; ಸ್ಪರ್ಧೆ ಇಲ್ಲವಾಗಿ;  ಅಂಡಮಾನಿನ ಬುಡಕಟ್ಟು ಮಾನವಕುಲ ಆದಿಮವಾಗಿಯೇ ಉಳಿಯಿತು. ಉಳಿದ ಜಗತ್ತನ್ನು ಪ್ರಭಾವಿಸಿ, ಬದಲಿಸಿದ ಸಂಶೋಧನೆ, ಆವಿಷ್ಕಾರಗಳಾವುವೂ ಅವರನ್ನು ತಲುಪದೆ ಹೋದವು.  

ರೋಗರುಜಿನ, ಪ್ರಾಕೃತಿಕ ವಿಕೋಪಗಳನ್ನೆಲ್ಲ ದಾಟಿ ಬಂದಿದ್ದರೂ ಅವರು ವಿನಾಶದ ಅಂಚಿಗೆ ಸರಿದಿರಲಿಲ್ಲ. ಆದರೆ ಅವರ ಜನಸಂಖ್ಯೆ ಈಗ ಆಧುನಿಕ ಮಾನವರ ಸಂಪರ್ಕಕ್ಕೆ ಬಂದಮೇಲೆ ಕುಸಿಯುತ್ತಿದ್ದು ಇದು ಕಳವಳದ ಸಂಗತಿಯಾಗಿದೆ. ಪ್ರಸ್ತುತ ಜರವಾಗಳ ಜನಸಂಖ್ಯೆ ೨೫೦ ಎಂಬ ಅಂದಾಜಿದ್ದರೆ ಗ್ರೇಟ್ ಅಂಡಮಾನಿಗಳ ಸಂಖ್ಯೆ ೫೨. ಒಂಗೇಗಳು ೯೯, ಸೆಂಟಿನೆಲೀಯರು ೩೯ ಜನ ಮಾತ್ರ ಇದ್ದಾರೆ. ಸಾವಿರಾರು ವರ್ಷಗಳಿಂದ ಹೊರಜಗತ್ತಿನ ಸಂಪರ್ಕವಿಲ್ಲದೆ ದ್ವೀಪಗಳಲ್ಲಿ ವಾಸಿಸುತ್ತಿದ್ದರೂ ಈಗ ಆಧುನಿಕ ಮನುಷ್ಯನ ಸಂಪರ್ಕಕ್ಕೆ ಬಂದ ‘ತಪ್ಪಿ’ಗೆ ಬುಡಕಟ್ಟು ಸಮುದಾಯಗಳು ತನ್ನ ನೆಲದಲ್ಲಿ ತಾನೇ ಪರದೇಶಿಯಾಗುತ್ತ ವಿನಾಶದ ಅಂಚಿಗೆ ಸರಿಯುತ್ತಿರುವುದು ನಾಗರಿಕತೆಯ ದುರಂತಗಳಲ್ಲೊಂದಾಗಿದೆ.

ಅಷ್ಟಕ್ಕೂ ನಿಜವಾದ ಅಂಡಮಾನಿನ ಚರಿತ್ರೆ ಅವರ ರಕ್ತದಲ್ಲಿ ಹರಿಯುತ್ತಿರುವಾಗ ನಾವು ನೂರಿನ್ನೂರು ವರ್ಷಗಳ ಜೈಲು ಚರಿತ್ರೆಯನ್ನೇ ಅಂಡಮಾನಿನದೆಂದು ಬಿಂಬಿಸುತ್ತಿದ್ದೇವೆ. ಅಂಡಮಾನ್ ಅವರ ನೆಲ. ನಾವೀಗ ಅವರ ನೆಲವನ್ನೇ ಅತಿಕ್ರಮಿಸಿ ಅಕ್ರಮ ಸಕ್ರಮ ಮಾಡಿಕೊಂಡಿದ್ದೇವೆ. ಅವರಿಗೊಂದಿಷ್ಟು ಜಾಗ ತೋರಿಸಿ ನೀವಿಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ತಯಾರು ಮಾಡಿ ವಿನಾಶವಾಗದೇ ಉಳಿಯಿರಿ ಎಂದು ಪ್ರದರ್ಶನಕ್ಕಿಟ್ಟ ವಸ್ತುಗಳಾಗಿ ನೋಡುತ್ತಿದ್ದೇವೆ. ಆದರೆ ನಾವು ನಾಗರಿಕರು, ಗಿಡಮರಬಳ್ಳಿಗಳಷ್ಟೇ ಸಹಜವಾಗಿ ಬದುಕುವ ಅವರು ಅನಾಗರಿಕ ‘ಕಾಡುಜನ’. 
ಆಹಾ ನಾಗರಿಕತೆಯೆ!

ಜರವಾ:  ಗಡಿಯಾರ-ಕ್ಯಾಲೆಂಡರುಗಳ ಹಂಗಿಲ್ಲದ ಕುಲ

ವಿನಾಶದ ಅಂಚಿನಲ್ಲಿರುವ ಜರವಾಗಳ ಜನಸಂಖ್ಯೆ ೨೫೦. ಗ್ರೇಟ್ ಅಂಡಮಾನಿಗಳ ಭಾಷೆಯಲ್ಲಿ ಜರವಾ ಎಂದರೆ ‘ಪರದೇಶಿ.’ ಈಗಷ್ಟೇ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುತ್ತಿರುವ ಜರವಾಗಳು ದಕ್ಷಿಣ ಮತ್ತು ಮಧ್ಯ ಅಂಡಮಾನಿನ ಪಶ್ಚಿಮ ಕರಾವಳಿಗುಂಟ ಜಿರ್ಖಾಟಾಂಗ್, ಕದಂತಲಾ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಅವರು ವಾಸಿಸುವ ಅರಣ್ಯ ಪ್ರದೇಶವನ್ನು ‘ಜರವಾ ರಿಸರ್ವ್’ ಎಂಬ ಹೆಸರಿನಲ್ಲಿ ರಕ್ಷಿತಾರಣ್ಯವಾಗಿ ಕಾದಿರಿಸಲಾಗಿದೆ. ಪೋರ್ಟ್‌ಬ್ಲೇರ್-ದಿಗ್ಲಿಪುರ್ ಜೋಡಿಸುವ ೩೩೩ ಕಿಮೀ ಉದ್ದದ ಅಂಡಮಾನ್ ಟ್ರಂಕ್ ರೋಡ್ ಈ ‘ಜರವಾ ರಿಸರ್ವ್’ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯ ವಾಹನ ಸಂಚಾರವನ್ನು ಅಂಡಮಾನ್ ಆಡಳಿತ ನಿಯಂತ್ರಿಸಿದೆ. ಆ ಪ್ರದೇಶ ಪ್ರವೇಶಿಸುವ ಮುನ್ನ ಜಿರ್ಖಾಟಾಂಗ್‌ನಲ್ಲಿ ಪೂರ್ಣ ತಪಾಸಣೆಗೊಳಪಡಿಸಿ ಅನುಮತಿಪತ್ರ ಕೊಡುತ್ತಾರೆ. ಬೆಳಿಗ್ಗೆ ೬, ೯, ೧೨ ಗಂಟೆಗೆ ಮತ್ತು ಮಧ್ಯಾಹ್ನ ೩ ಗಂಟೆಗೆ ಮಾತ್ರ ಕಾನ್ವಾಯ್‌ಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ವಾಹನಗಳು ಒಟ್ಟೊಟ್ಟಿಗೆ ರಿಸರ್ವ್ ಮೂಲಕ ಹಾದುಹೋಗಬಹುದು. ದಟ್ಟಕಾಡಿನಲ್ಲಿರುವ ೫೦ ಕಿಮೀ ದೂರವನ್ನು ಗಂಟೆಗೆ ೪೦ ಕಿಮೀಗಿಂತ ಹೆಚ್ಚು ವೇಗದಲ್ಲಿ ಕ್ರಮಿಸುವಂತಿಲ್ಲ, ಕಿಟಕಿಯ ಗಾಜುಗಳನ್ನು ಇಳಿಸುವಂತಿಲ್ಲ, ಮಧ್ಯದಲ್ಲೆಲ್ಲೂ ವಾಹನ ನಿಲ್ಲಿಸುವಂತಿಲ್ಲ, ಓವರ್ ಟೇಕ್ ಮಾಡುವಂತಿಲ್ಲ, ಜರವಾಗಳ ಜೊತೆ ಬೆರೆಯುವಂತಿಲ್ಲ, ಛಾಯಾಚಿತ್ರ ತೆಗೆಯುವಂತಿಲ್ಲ ಇತ್ಯಾದಿ ನಿರ್ಬಂಧಗಳಿವೆ. 

ಅಂಡಮಾನಿಗೆ ಹೋದವರಿಗೆ ಗುಟ್ಟಾಗಿ ಒಂದು ಕ್ರಿಮಿನಲ್ ಆಸೆಯಿರುತ್ತದೆ - ಆ ಬುಡಕಟ್ಟು ಜನರನ್ನು ಸಾಧ್ಯವಾದರೆ ನೋಡಬೇಕೆನ್ನುವುದು. ಅಂಡಮಾನಿಗೆ ನಾವು ಹೊರಟಾಗ ಒಳಗೊಳಗೇ ಈ ಆಸೆಯಿಟ್ಟುಕೊಂಡಿದ್ದು ಸುಳ್ಳಲ್ಲ. ಥೇನ್ ಚಂಡಮಾರುತ ಅಂಡಮಾನನ್ನು ಅಪ್ಪಳಿಸಿದಾಗ ನಾವೂ ಅಲ್ಲಿದ್ದೆವು. ವಾತಾವರಣ ಮುನಿಸಿಕೊಂಡ ಕಾರಣ ಹ್ಯಾವ್‌ಲಾಕ್ ದ್ವೀಪ ಪ್ರಯಾಣವನ್ನು ರದ್ದುಗೊಳಿಸಿ ಉತ್ತರ ಅಂಡಮಾನ್ ಪ್ರಯಾಣ ಆಯ್ಕೆಮಾಡಿಕೊಂಡಿದ್ದು ಜರವಾ ರಿಸರ್ವ್‌ನಲ್ಲಿ ಹಾದುಹೋಗುವಾಗ ಅವರ ಭೇಟಿಯಾಗಬಹುದೆಂಬ ಕಾರಣಕ್ಕಾಗಿಯೇ. 

ಅಂದು ಬೆಳಿಗ್ಗೆ..

   ನೂರಾರು ವಾಹನಗಳು ಒಂದರ ಹಿಂದೊಂದು ಚಲಿಸುತ್ತಿದ್ದವು. ಅಂಕುಡೊಂಕಾದ ಒದ್ದೆ ರಸ್ತೆಯಲ್ಲಿ ಸುತ್ತ ಜ್ಞೀಂಗುಡುವ ಜೀರುಂಡೆ, ಹಕ್ಕಿಯುಲಿತದ ನಡುವೆ ಕಿಟಕಿ ಮುಚ್ಚಿಕೊಂಡು ಉಸಿರು ಬಿಗಿಹಿಡಿದು ಒಬ್ಬ ಜರವಾ ಎದುರು ಕಾಣಬಹುದೇ ಎಂದು ಆಚೀಚಿನ ಸಂದು, ಪೊದೆಗಳತ್ತ ಕಣ್ಣು ಹಾಯಿಸುತ್ತ ಕಾದಿದ್ದೆವು. ಮೋಡ ತುಂಬಿದ ಆಕಾಶ, ನಾವೇ ಹೇರಿಕೊಂಡ ಮೌನ, ನಡುನಡುವೆ ಡ್ರೈವರ್ ಜರವಾಗಳ ಕುರಿತು ಕತೆಯಂತೆ ಹೇಳುತ್ತಿದ್ದ ವಿವರಗಳು - ಇವೆಲ್ಲವೂ ಆ ಬೆಳಗಿಗೆ ಇಲ್ಲದ ಗಾಂಭೀರ್ಯ ತುಂಬಿದ್ದವು. ನಮ್ಮ ಡ್ರೈವರ್ ಪ್ರಕಾರ ಇತ್ತೀಚೆಗೆ ಅವರು ನೋಡಲು ಕಂಡಿದ್ದು ಕಡಿಮೆ, ಮೊನ್ನೆ ಒಬ್ಬ ರಸ್ತೆ ಬದಿ ಕಾಣಿಸಿದ್ದ, ಆದರೆ ವಾಹನದತ್ತ ಕಲ್ಲು ತೂರಿ ಕಿಟಕಿ ಗಾಜು ಒಡೆದಿದ್ದ. ಇವತ್ತೇನಾದರೂ ರಸ್ತೆಪಕ್ಕ ಬಂದರೆ ನಿಮ್ಮ ಅದೃಷ್ಟ ಎಂದು ಹೇಳಿದ. ಯಾರಿಗೂ ಹೇಳಬೇಡಿರೆಂದು ತನ್ನ ಬಳಿಯಿದ್ದ ಜರವಾ ಫೋಟೋ, ವೀಡಿಯೋ ತೋರಿಸಿದ. 

ಇದ್ದಕ್ಕಿದ್ದಂತೆ ಎದುರಾದರು ಜರವಾ ದಂಪತಿಗಳು! ತನ್ನ ತೆರೆದೆದೆಯನ್ನು ಕೈಕಟ್ಟಿ ಮುಚ್ಚಿಕೊಂಡ ಆಕೆ ಸೊಂಟಕ್ಕೆ ಕೆಂಪು ಹಗ್ಗ ನೇಯ್ದುಕೊಂಡಿದ್ದಳು. ಗಂಭೀರ ನಿಲುವಿನ ಮುಖದಲ್ಲಿ ನಗೆಯ ಸುಳಿವಿಲ್ಲ. ಆತ ಬೆನ್ನ ಹಿಂದೆ ಬಿದಿರಿನ ಬುಟ್ಟಿ, ಕೈಯಲ್ಲಿ ಬಾಣ ಹಿಡಿದು ತದೇಕ ಚಿತ್ತದಿಂದ ಗಂಭೀರನಾಗಿ ವಾಹನಗಳ ಕಾನ್ವಾಯ್ ನೋಡುತ್ತಿದ್ದ. ಮಣ್ಣು ಬಳಿದುಕೊಂಡ ಮುಖದ ಚರ್ಮಕಾಂತಿ ಮನ ಸೆಳೆಯಿತು. ಸ್ವಲ್ಪ ಮುಂದೆ ಹೋಗುವುದರಲ್ಲಿ ಅಮ್ಮ ಮಗು ಸಿಕ್ಕರು. ವರ್ಷದ ಮಗುವನ್ನು ಪಕ್ಕ ನಿಲ್ಲಿಸಿಕೊಂಡಾಕೆ ಯಾವುದೋ ಬೇರಿಗೋ, ನೀರಿನ ಮೂಲಕ್ಕೋ ಹುಡುಕಾಟ ನಡೆಸಿ ಅಗೆಯುತ್ತಿದ್ದಳು. ಬಾಗಿದ ಭಂಗಿಗೆ ಹಿಂಭಾಗ ಮುಂಭಾಗಗಳೆಲ್ಲ ತೊನೆಯುತ್ತಿದ್ದರೂ ಚಲಿಸುವ ವಾಹನಗಳ ಪರಿವೆ ಇಲ್ಲದೆ ತನ್ನಷ್ಟಕ್ಕೆ ಕೆಲಸದಲ್ಲಿ ಮುಳುಗಿಹೋದ ಮಹಿಳೆ. ನಂತರ ಕಂಡ ನಾಲ್ಕಾರು ಮಹಿಳೆಯರು ಪಕ್ಕಾ ಜರವಾ ಉಡುಪಿನಲ್ಲಿದ್ದರು. ಕೊಂಚ ಮುಂದೆ ಹೋದ ಮೇಲೆ ನೀಲಿ ದಿರಿಸು ಧರಿಸಿದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕರ್ತನೊಟ್ಟಿಗೆ ಹತ್ತಿಪ್ಪತ್ತು ಜರವಾಗಳು ಜೀಪಿನಲ್ಲಿ ವಿವಿಧ ಭಂಗಿಗಳಲ್ಲಿ ಕೂತು, ಮಲಗಿದ್ದರು. ಅವರಿಗಾಗಿ ಪೋರ್ಟ್‌ಬ್ಲೇರ್‌ನ ಜಿಬಿ ಪಂತ್ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ವ್ಯವಸ್ಥೆ ಇದ್ದು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದರು. ಬಾರಾಟಾಂಗ್ ದ್ವೀಪ ಹತ್ತಿರ ಬಂದಂತೆ ಎಳೆಯ ಜರವಾ ತರುಣನೊಬ್ಬ ಬಂದ. ನೀಳಕಾಯದ, ಹುರಿ ಮೈಯ, ಗಂಭೀರ ನಿಲುವಿನ ಅವನು ಕೈಯಲ್ಲೊಂದು ಬಾಣ ಹಿಡಿದು ಬಿರುಸಾಗಿ ವಾಹನಗಳ ಒಳಗಿರುವವರನ್ನು ಪರೀಕ್ಷಿಸುತ್ತಿದ್ದಾನೋ ಎಂಬಂತೆ ಇಣುಕಿ ನೋಡುತ್ತ ನಡೆಯುತ್ತಿದ್ದ. ನಗೆಯ ಸುಳಿವೂ ಇಲ್ಲದ ಮುಖ.  

ಥಳಥಳಿಸುವ ಆ ನಗ್ನ ಮೈಗಳಲ್ಲಿ ಒಂದಾದರೂ ಗಾಯವಿರಲಿಲ್ಲ, ಕಲೆಯಿರಲಿಲ್ಲ. ಮುಖಮೈಗೆ ಅಲಂಕಾರಿಕವಾಗಿ ಮಣ್ಣು ಮೆತ್ತಿಕೊಂಡು ಬರಿಗಾಲು ಬರಿಮೈಯಲ್ಲಿ ತಿರುಗಿ ಮಲಗುವ ಅವರ ಚರ್ಮದ ಕಾಂತಿಯೋ ಅದ್ಭುತ. ಬೇರೆಬೇರೆ ಮಣ್ಣುಗಳ ಔಷಧೀಯ ಗುಣ ಅವರಿಗೆ ಗೊತ್ತಿದೆಯಂತೆ. ನಾರುಬೇರುಗಳ ರಹಸ್ಯ ತಿಳಿದಿದೆಯಂತೆ. ಹುತ್ತದ ಬಳಿ ಗೂಡು ಕಟ್ಟುವ ಒಂದು ಹಕ್ಕಿಯ ಎಂಜಲು ವಿಷಪೂರಿತವಾಗಿದ್ದು ಬಾಣದ ತುದಿಗೆ ಅದನ್ನು ಸವರುತ್ತಾರಂತೆ. ಡ್ರೈವರ್ ಹೇಳಿದ ಈ ಅಂತೆಕಂತೆಗಳು ಎಷ್ಟು ನಿಜವೋ, ಸುಳ್ಳೋ ಆದರೆ ಸಾವಿರಾರು ವರ್ಷಗಳಿಂದ ಗಾಯ-ಎಲುವು ಮುರಿತ-ಹೆರಿಗೆ-ಕಾಯಿಲೆಗಳನ್ನು ಆಧುನಿಕ ವೈದ್ಯದ ಕಲ್ಪನೆಯಿಲ್ಲದೆ ಆ ಸಮುದಾಯ ದಾಟಿಬಂದಿರುವುದು ನಿಜ. ಅವರ ಪುರಾತನರ ಕಾಯಿಲೆ, ನೋವು ನರಳಾಟಗಳ ಚರಿತ್ರೆ ನಮಗೆ ಗೊತ್ತಿಲ್ಲ. ಆದರೆ ಅಂಡಮಾನಿಗೆ ಹೋದವರು ಹೊತ್ತೊಯ್ದ ದಡಾರ, ಡೆಂಗಿ, ಮಲೇರಿಯಾ, ಕಾಲರಾ, ಕಾಲಾ ಅಜಾರ್, ಟೈಫಾಯ್ಡ್ ಕಾಯಿಲೆಗಳೂ; ಹಡಗಿನಲ್ಲಿ ನುಸುಳಿ ಬಂದ ಸೊಳ್ಳೆ, ನೊಣ, ಇಲಿಗಳೂ ಆದಿವಾಸಿಗಳಿಗೆ ವಿನಾಶಕಾರಿಯಾಗಿದ್ದು ಕಣ್ಣೆದುರಿನ ಸತ್ಯವಾಗಿದೆ. 

   ಮೂರು ದಿನಗಳ ನಂತರ ಅದೇ ದಾರಿಯಲ್ಲಿ ಮಧ್ಯಾಹ್ನ ಮೂರರ ಕಾನ್ವಾಯ್‌ನಲ್ಲಿ ವಾಪಸ್ ಬರುವಾಗ ತಂಡತಂಡವಾಗಿ ಜರವಾ ಜನರನ್ನು ನೋಡಿದೆವು. ಹೆಚ್ಚಿನ ಗಂಡುಹೆಣ್ಣುಗಳು ಸೊಂಟದ ಮೇಲೆ ನಗ್ನರೇ. ಬೇಟೆಯಾಡಿದ ಎರಡು ಹಂದಿಗಳನ್ನು ಬಾಳೆಪಟ್ಟೆಯಿಂದ ಬೆನ್ನ ಮೇಲೆ ತೂಗಿಕೊಂಡು ರಸ್ತೆ ದಾಟಲು ಕಾಯುತ್ತಿದ್ದ ತರುಣ; ಕೊಂಚ ವಯಸ್ಸಾದ, ನಡುರಸ್ತೆಗೇ ಬಂದು ವಾಹನಗಳಲ್ಲಿದ್ದವರಿಗೆ ಶೇಕ್ ಹ್ಯಾಂಡ್ ಕೊಟ್ಟು ಸಾಗುತ್ತಿದ್ದ ಹಿರಿಯ; ಕೈಯಲ್ಲಿ ಬಾಣ ಹಿಡಿದು ತದೇಕಚಿತ್ತನಾಗಿ ಸಾಗುವ ವಾಹನಗಳ ನೋಡುತ್ತಿದ್ದ ಪೋರ; ಒಂದರ ಪಕ್ಕ ಒಂದು ಎರೆಮಣ್ಣಿನ ಬೊಂಬೆಗಳನ್ನು ಜೋಡಿಸಿಟ್ಟಂತೆ ಸಾಲಾಗಿ ಕುಳಿತ ಎಳೆಕೂಸುಗಳು; ನಗ್ನ ಬಸುರಿ; ಮೊಲೆ ಚೀಪುವ ಮಗುವಿನೊಟ್ಟಿಗೆ ರಸ್ತೆಪಕ್ಕ ನಿಂತು ನಗೆ ಹಿಂದಿರುಗಿಸಿದ ಮಹಿಳೆ; ವಿ ಸೈನ್ ತೋರಿಸುತ್ತ ಕೈಯಾಡಿಸುತ್ತಿದ್ದ ಹುಡುಗ; ಏನನ್ನೋ ತಿನ್ನುತ್ತ, ತಿನ್ನುತ್ತಿದ್ದುದನ್ನು ವಾಹನಗಳತ್ತ ಬಿಸಾಡಿದ ಹುಡುಗಹುಡುಗಿ ಜೋಡಿ - ಹೀಗೇ ವಾಪಸು ಬರುವಾಗ ಇಡೀ ಹಳ್ಳಿಯೇ ರಸ್ತೆ ಮೇಲಿದೆಯೇನೋ ಎಂಬಂತೆ ಹಲವಾರು ಜರವಾ ತಂಡಗಳು ಎದುರುಸಿಕ್ಕಿದ್ದವು. ಅಷ್ಟೊಂದು ಬಸುರಿ-ಎಳೆಕೂಸುಗಳನ್ನು ನೋಡಿದ ಕೃಷ್ಣನ ಗೈನಕಾಲಜಿಸ್ಟ್ ಮನಸ್ಸು ಖುಷಿಯಾಯಿತು. ಜರವಾಗಳು ಸದ್ಯಕ್ಕೆ ನಾಶವಾಗುವ ಸಮುದಾಯ ಅಲ್ಲವೆನಿಸಿ ನೆಮ್ಮದಿಯಾಯಿತು.

ಮರುದಿನ ‘ಅಂಡಮಾನ್ ಶೀಖಾ’ ಪತ್ರಿಕೆಯ ಮುಖಪುಟದಲ್ಲಿ ಬಾರಾಟಾಂಗ್ ಬಳಿ ಮನೆಯೊಂದಕ್ಕೆ ನುಗ್ಗಿದ ಜರವಾ ತಂಡ ಮನೆಯಲ್ಲಿ ಮಾಡಿಟ್ಟ ಅಡುಗೆ, ಅಕ್ಕಿ, ತೆಂಗಿನ ಕಾಯಿ, ತರಕಾರಿ, ಬಟ್ಟೆ ಮತ್ತಿತರ ಸಾಮಾನುಗಳನ್ನು ಹೊತ್ತೊಯ್ದಿತೆಂದೂ, ಪ್ರತಿಭಟಿಸಿದ್ದಕ್ಕೆ ಮನೆಯೊಡೆಯನ ಮೇಲೆ ಹಲ್ಲೆಗೂ ಯತ್ನಿಸಿತೆಂದು ವರದಿಯಾಗಿತ್ತು. 

   ನಾಗರಿಕ ಸಮಾಜದ ಜೊತೆಯ ಬುಡಕಟ್ಟುಗಳ ಘರ್ಷಣೆ, ಮುಖಾಮುಖಿ ಹೊಸದಲ್ಲ. ಕೆಲವರ್ಷಗಳ ಕೆಳಗೆ ಜರವಾ ಗುಂಪೊಂದು ಹಳ್ಳಿಗೆ ಬಂದಿತ್ತು. ಮರವೇರಿ ತೆಂಗಿನಕಾಯಿ ಕೊಯ್ದು ಕೆಳಗಿಳಿಯುವಾಗ ಒಬ್ಬ ಹುಡುಗ ಮರದಿಂದ ಕೆಳಗೆ ಬಿದ್ದ. ಮೇಲೇಳಲಾರದ ಅವನನ್ನು ಅಲ್ಲೇ ಬಿಟ್ಟು ತಂಡದ ಇತರರು ವಾಪಸು ತೆರಳಿದರು. ಆಡಳಿತವು ಅವನಿಗೆ ಎನ್ಮೆ ಎಂಬ ಹೆಸರಿಟ್ಟು ಆಸ್ಪತ್ರೆಯಲ್ಲಿ ಮುರಿದ ಎಲುಬಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಎರಡು ತಿಂಗಳ ಬಳಿಕ ಹೆಲಿಕಾಪ್ಟರಿನಲ್ಲಿ ಅವನನ್ನು ಕಾಡಿಗೆ ಬಿಟ್ಟುಬಂತು. ಒಬ್ಬ ಎನ್ಮೆಯ ಭೇಟಿ ಮತ್ತು ನಾಗರಿಕ ಸಮಾಜದ ಜೊತೆಗಿನ ಅವನ ಅನುಭವಗಳು ಆ ಸಮುದಾಯಕ್ಕೆ ಯಾವ ಸಂದೇಶ ರವಾನಿಸಿರಬಹುದು? ಊಹೆಯಷ್ಟೇ ನಮ್ಮದು. 

   ಜರವಾಗಳು ನಾಗರಿಕರ ಜೊತೆ ಬೆರೆಯತೊಡಗಿದ್ದು ಅವರನ್ನು ಪ್ರತ್ಯೇಕವಾಗಿಡುವುದನ್ನು ನಿಲ್ಲಿಸಬೇಕೆಂದು ಅಂಡಮಾನ್ ಆಡಳಿತ ಇತ್ತೀಚೆಗೆ ತೀರ್ಮಾನಿಸಿತ್ತು. ಜೆಟ್ಟಿ, ಶಾಲೆ, ತನಿಖಾಠಾಣೆ, ರಸ್ತೆಯ ಹತ್ತಿರ ಉಳಿದವರ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವ ಜರವಾಗಳನ್ನು ಮುಖ್ಯವಾಹಿನಿಯಲ್ಲಿ ತರಬೇಕೆನ್ನುವುದು ಅದರ ನಿಲುವು. ಆದರೆ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ಸಭೆ ಸೇರಿ ಈ ನಿರ್ಧಾರವನ್ನು ಜರವಾಗಳಿಗೇ ಬಿಡಬೇಕೆಂದು ತೀರ್ಮಾನಿಸಿದೆ. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರ ಜೊತೆ ಅಂಡಮಾನ್ ಆಡಳಿತ ಕಲ್ಯಾಣ ಯೋಜನೆಯೊಂದನ್ನು ಸಿದ್ಧಗೊಳಿಸಿ ಅದರಂತೆ ಈಗ ಜರವಾ ಹಳ್ಳಿಗಳಿಗೆ ಪ್ರತಿದಿನ ಒಬ್ಬರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನೀಲಿ ಸಮವಸ್ತ್ರ ಧರಿಸಿ ಹೋಗುತ್ತಾರೆ. ಮೊದಮೊದಲು ಅವರಿಗೆ ಇಷ್ಟವಾದ ತೆಂಗು, ಬಾಳೆಹಣ್ಣು, ಅಲ್ಯುಮಿನಿಯಂ ಪಾತ್ರೆ, ಕೆಂಪು ಬಟ್ಟೆಗಳನ್ನು ಪೂರೈಸಿ ಅವರ ವಿಶ್ವಾಸ ಗಳಿಸಲಾಯಿತು. ಕೊನೆಗೆ ಅವರ ಸೆಟಲ್‌ಮೆಂಟ್‌ಗಳಿಗೇ ಹೋಗಿ ಔಷಧಿ, ಚಿಕಿತ್ಸೆ ಕೊಡಲು ಶುರುಮಾಡಲಾಯಿತು. ಈಗ ಅವರ ಮೇಲ್ವಿಚಾರಣೆಗೆಂದೇ ಒಂದು ಇಲಾಖೆಯಿದೆ, ಆಸ್ಪತ್ರೆಗೆ ಕರೆತಂದು, ಬಿಟ್ಟುಬರಲು ಜೀಪುಗಳಿವೆ. ರೋಗನಿರೋಧಕ ಲಸಿಕೆ ಹಾಕಲಾಗುತ್ತಿದೆ. ಗರ್ಭಿಣಿಯರಿಗೆ, ಎಳೆ ಶಿಶುಗಳಿಗೆ, ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಈ ಬೆಳವಣಿಗೆಯ ನಂತರ ಅವರ ಜನಸಂಖ್ಯೆ ಕಳೆದ ೧೦ ವರ್ಷಗಳಲ್ಲಿ ಏರಿಕೆ ಕಂಡಿದೆ. 

ಈಗ ಸರ್ಕಾರದ ‘ಜರವಾ ಪಾಲಿಸಿ’ ಹೀಗಿದೆ: 

    ದೈಹಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಜರವಾಗಳು ಆಧುನಿಕ ಸಮಾಜದ ಮುಖಾಮುಖಿಗೆ ಸಿದ್ಧರಾಗುವವರೆಗೆ ಸಂಪರ್ಕವೇರ್ಪಡದಂತೆ ರಕ್ಷಿಸುವುದು
    ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ಅಸ್ಮಿತೆ ರಕ್ಷಿಸುವುದು
    ವೈದ್ಯಕೀಯ ನೆರವು ನೀಡುವುದು
    ತಮ್ಮ ಜೀವನಶೈಲಿ ಉಳಿಸಿಕೊಳ್ಳಲು ತಕ್ಕ ಸಂಪನ್ಮೂಲಗಳಿಗಾಗಿ ಅವರಿರುವ ಪ್ರದೇಶ ರಕ್ಷಿಸುವುದು.
    ಅವರ ಅನನ್ಯ ಜೀವನಶೈಲಿ ಮತ್ತು ಸಂಸ್ಕೃತಿ ಉಳಿಸುವಂತೆ ಅವರ ವಾಸಸ್ಥಳದ ಸುತ್ತಮುತ್ತಲ ಜನರಿಗೆ ತಿಳುವಳಿಕೆ ನೀಡುವುದು.

ಅವರಿಗಾಗಿ ೧೦೨೮ ಚ. ಕಿಮೀ ಕಾಡು ಕಾದಿಟ್ಟ ಪ್ರದೇಶವಾಗಿರುವಂತೆಯೇ, ಅವರ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುವುದು, ಅರಣ್ಯ ಉತ್ಪನ್ನಗಳ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಕನಿಷ್ಠ ಹಸ್ತಕ್ಷೇಪ, ಗರಿಷ್ಠ ಸ್ವಾಯತ್ತತೆ ಸರ್ಕಾರದ ಗುರಿಯಾಗಿದೆ. ಆದರೂ ನಾಗರಿಕ ಜಗತ್ತು ಅದರ ಉಲ್ಲಂಘನೆ ಮಾಡುತ್ತಿರುವ ಸೂಚನೆಗಳಿವೆ.  

ಆದಿಮ ಸಮುದಾಯಗಳನ್ನು ಹೇಗೆ ನಡೆಸಿಕೊಳ್ಳಬೇಕೆನ್ನುವ ಬಗ್ಗೆ ಆಧುನಿಕ ಸಮಾಜಕ್ಕೆ ಗೊಂದಲಗಳಿವೆ. ಆ ಸಮುದಾಯಗಳನ್ನು ವಿಕಾಸವಾದದ ಹಂತಗಳಲ್ಲಿ ಆಧುನಿಕಗೊಳಿಸದೇ ಒಂದೇ ಸಲ ‘ಐರನ್ ಏಜ್’ ನಲ್ಲಿರುವವರನ್ನು ೨೧ನೇ ಶತಮಾನಕ್ಕೆ ಎಳೆದುತಂದರೆ ಕಲ್ಚರಲ್ ಶಾಕ್ ಅನುಭವಿಸುವುದಿಲ್ಲವೆ? ಅಥವಾ ಅವರಿಗೊಂದಿಷ್ಟು ‘ರಕ್ಷಿತ ಪ್ರದೇಶ’ವನ್ನು ಘೋಷಿಸಿ ಕಲ್ಲನ್ನು ಕಲ್ಲಿನಿಂದ ಕುಟ್ಟಿ ಬೆಂಕಿ ಕಾಯಿಸಿಕೊಳ್ಳಿ ಎಂದು ಅವರಷ್ಟಕ್ಕೆ ಅವರನ್ನು ಬಿಟ್ಟುಬಿಡಬಹುದೆ? ಅವರ ಹಕ್ಕು ಸ್ವಾತಂತ್ರ್ಯ ಸ್ವಾಯತ್ತತೆ ಎಷ್ಟರಮಟ್ಟಿಗೆ, ಎಲ್ಲಿಯವರೆಗೆ ರಕ್ಷಿಸಬೇಕು? ನಮ್ಮೆಲ್ಲ ಕ್ರಿಯೆಗಳೂ, ಯೋಜನೆಗಳೂ ಪ್ರಯೋಗವೇ ಆಗಿರುವಾಗ ಸ್ಪಷ್ಟ, ಖಚಿತ ಒಮ್ಮತ ಸಾಧ್ಯವಾಗುತ್ತಿಲ್ಲ.

    ಜರವಾ ಎಂದರೆ ಗಂಭೀರ ನಿಲುವಿನ ಕಪ್ಪುಮೂರ್ತಿಗಳು ಕಣ್ಣೆದುರು ಬರುತ್ತಿವೆ. ಪ್ರವಾಸಿಗಳೆದುರು ನಿಂತು ಅಂಗಲಾಚುತ್ತ ನೃತ್ಯ, ಉಡುಪು, ಹಾಡು, ಕಲೆ ಪ್ರದರ್ಶಿಸುವ ದುರ್ದಿನಗಳು ಅವರಿಗೆ ಬಾರದೇ ಇರಲಿ..

ಗ್ರೇಟ್ ಅಂಡಮಾನಿಗಳು

    ಒಂದು ಕಾಲದಲ್ಲಿ ಇಡೀ ದಕ್ಷಿಣ ಅಂಡಮಾನಿನಲ್ಲಿ ಹರಡಿಕೊಂಡಿದ್ದ ಆದಿವಾಸಿ ಕುಲ ಇದು. ೧೭೮೯ರಲ್ಲಿ ಆರ್ಕಿಬಾಲ್ಡ್ ಬ್ಲೇರ್ ಮೊದಲು ಈ ದ್ವೀಪಗಳ ಸರ್ವೆಗೆ ಕಾಲಿರಿಸಿದಾಗ ಅವರ ಜನಸಂಖ್ಯೆ ೧೦,೦೦೦ ಇರಬಹುದೆಂಬ ಅಂದಾಜು. ನಂತರ ಬ್ರಿಟಿಷರು ಅಂಡಮಾನಿನಲ್ಲಿ ಯೂನಿಯನ್ ಜ್ಯಾಕ್ ಧ್ವಜ ಹಾರಿಸಿದಾಗ ಸುಮಾರು ೫೦೦೦ದಷ್ಟು ಇದ್ದವರು ಬರಬರುತ್ತ ಸಂಖ್ಯೆಯಲ್ಲಿ ಕಡಿಮೆಯಾದರು. ೧೯೦೧ರಲ್ಲಿ  ೬೨೫ ಜನ ಇದ್ದವರು ೧೯೨೭ರಲ್ಲಿ ೨೦೦, ೧೯೪೭ರಲ್ಲಿ ೨೫, ೧೯೬೯ರಲ್ಲಿ ಅತಿಕಡಿಮೆ ೧೯ ಜನ ಉಳಿದಿದ್ದರು. ನಂತರ ಏರಿಕೆ ಕಾಣುತ್ತಿರುವ ಜನಸಂಖ್ಯೆ ೧೯೭೧ರಲ್ಲಿ ೨೪, ೧೯೯೯ರಲ್ಲಿ ೪೧ ಹಾಗೂ ಈಗ ೨೦೧೧ರಲ್ಲಿ ೫೨ ಜನರಿದ್ದಾರೆ.

   ಗ್ರೇಟ್ ಅಂಡಮಾನಿಗಳಲ್ಲೇ ೧೦ ಪಂಗಡಗಳಿದ್ದು ಅದರಲ್ಲಿ ೭ ವಿನಾಶದ ಅಂಚಿಗೆ ಸರಿದು ಕಾಣೆಯಾಗಿವೆ. ಈಗ ಅಕಾ ಜೆರು, ಅಕಾ ಬೊ, ಅಕಾ ಕರಿ ಎಂಬ ಮೂರು ಪಂಗಡಗಳಷ್ಟೇ ಉಳಿದಿವೆ. ಕಳೆದ ವರ್ಷ ಅಕಾಬೊಗಳು ಮಾತ್ರ ಆಡುತ್ತಿದ್ದ ವಿಶಿಷ್ಟ ಬೊವಾ ಭಾಷೆ ಗೊತ್ತಿದ್ದ ಹಿರಿಯ ಜೀವವೊಂದು ಕಣ್ಮುಚ್ಚಿದಾಗ ಆಕೆಯ ಜೊತೆಗೇ ಅವಳ ಭಾಷೆಯೂ ಸಮಾಧಿಯಾಯಿತು. ಈಗ ಅವರ ಭಿನ್ನ ಉಪಪಂಗಡಗಳು ಸಾಂಸ್ಕೃತಿಕ, ಭಾಷಿಕ ಅಸ್ಮಿತೆ ಹಾಗೂ ಪ್ರದೇಶವನ್ನು ಸಂಪೂರ್ಣ ಕಳೆದುಕೊಂಡಿವೆ. ಒಂದು ಕಾಲದಲ್ಲಿ ದಕ್ಷಿಣ ಅಂಡಮಾನ್, ರಟ್‌ಲ್ಯಾಂಡ್ ದ್ವೀಪ, ಲಿಟಲ್ ಅಂಡಮಾನಿನ ೩೫೦ ಕಿಮೀ ಉದ್ದಕ್ಕೂ ವಾಸಿಸುತ್ತಿದ್ದವರು ಈಗ ಸ್ಟ್ರೈಟ್ ದ್ವೀಪಕ್ಕೆ ಸೀಮಿತಗೊಂಡು ಸರ್ಕಾರ ನೀಡಿದ ಸವಲತ್ತುಗಳೊಂದಿಗೆ ಬದುಕುತ್ತಿದ್ದಾರೆ. 

  ಈ ನೀಗ್ರಾಯ್ಡ್ ಕುಲ ಮತ್ತು ಆಧುನಿಕ ಮನುಷ್ಯನ ಮುಖಾಮುಖಿ ಶುರುವಾದದ್ದು ಅಂಡಮಾನಿಗೆ ಬ್ರಿಟಿಷರು ಕಾಲಿರಿಸಿದ ನಂತರ. ಪೀನಲ್ ಸೆಟಲ್‌ಮೆಂಟ್ ಶುರುವಾದಾಗ ಪೋರ್ಟ್‌ಬ್ಲೇರ್‌ನ ಖೈದಿಗಳೂ, ಬ್ರಿಟಿಷರೂ ಹೆದರುತ್ತಿದ್ದುದು ಗ್ರೇಟ್ ಅಂಡಮಾನಿಗರಿಗೆ. ಗುಂಪುಗಳಲ್ಲಿ ಬಂದು ನಾಗರಿಕ ಮನುಷ್ಯನನ್ನು ಕೊಂದು ಕತ್ತರಿಸುತ್ತಿದ್ದ ಇವರ ಬಗ್ಗೆ ಊಹಾಪೋಹದ ಕತೆಗಳೇ ಹಬ್ಬಿದ್ದವು. ದೂದ್‌ನಾಥ ತಿವಾರಿ ಎಂಬ ಸಿಪಾಯಿ ೧೮೫೭ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಗಡೀಪಾರು ಶಿಕ್ಷೆಗೊಳಗಾಗಿ ೧೮೫೮ರಲ್ಲಿ ಅಂಡಮಾನಿಗೆ ಕಳಿಸಲ್ಪಟ್ಟಿದ್ದ. ಪೋರ್ಟ್‌ಬ್ಲೇರಿಗೆ ಬಂದ ತಿಂಗಳೊಳಗೆ ತನ್ನ ೯೦ ಜನ ಸಂಗಾತಿಗಳೊಂದಿಗೆ ಜೈಲಿನಿಂದ ತಪ್ಪಿಸಿಕೊಂಡ. ಕಾಡು ಹೊಕ್ಕವರಲ್ಲಿ ತಿವಾರಿಯನ್ನು ಬಿಟ್ಟು ಮತ್ತೆಲ್ಲರೂ ಗ್ರೇಟ್ ಅಂಡಮಾನಿಗಳಿಂದ ಹತರಾದರು. ಏನನಿಸಿತೋ, ತಿವಾರಿಯನ್ನು ಕೊಲ್ಲದೇ ತಮ್ಮ ನೆಲೆಗೆ ಕರೆದೊಯ್ದ ಬುಡಕಟ್ಟು ಜನ ಅವನ ಬಟ್ಟೆಬರೆ ತೆಗೆದು ಮೈಗೆ ಮಣ್ಣು ಹಚ್ಚಿ ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಲೀಪಾ, ಗೀಜಾರನ್ನು ಕೊಟ್ಟು ಮದುವೆ ಮಾಡಿದರು. ಒಂದು ವರ್ಷ ಹಾಗೂ ಹೀಗೂ ಕಾಲ ಕಳೆದ ತಿವಾರಿ ಅವರ ಭಾಷೆ ಕಲಿತ. ಅವರು ಪೋರ್ಟ್‌ಬ್ಲೇರ್ ಬಳಿ ಅಬರ್ಡೀನ್ ಪೊಲೀಸ್ ಸ್ಟೇಷನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದುದನ್ನು ತಿಳಿದುಕೊಂಡ. ಆದಿವಾಸಿಗಳಿಂದ ತಪ್ಪಿಸಿಕೊಂಡವ ಬ್ರಿಟಿಷರಿಗೆ ಆ ಸುದ್ದಿ ಮುಟ್ಟಿಸಿದ. ಬಿಲ್ಲುಬಾಣ ಹಿಡಿದ ಆದಿವಾಸಿಗಳು ಹಾಗೂ ಗನ್, ಪಿಸ್ತೂಲು ಹಿಡಿದ ಬ್ರಿಟಿಷರ ನಡುವೆ ಕಾಳಗ ನಡೆದು ಹಲವಾರು ಆದಿವಾಸಿಗಳೂ, ಬ್ರಿಟಿಷರೂ ಸತ್ತುಹೋದರು. ಇದು ಅಬರ್ಡೀನ್ ಕಾಳಗ ಎಂದು ಹೆಸರಾಯಿತು. ದೂದ್‌ನಾಥ ತಿವಾರಿ ಸಹಾಯ ನೀಡಿದ್ದಕ್ಕಾಗಿ ಬ್ರಿಟಿಷರು ಅವನನ್ನು ಬಿಡುಗಡೆ ಮಾಡಿ ೧೮೬೦ರಲ್ಲಿ ಮೇನ್‌ಲ್ಯಾಂಡಿಗೆ ಕಳಿಸಿದರು. ಅಬರ್ಡೀನ್ ಕಾಳಗದ ನೆನಪಿಗಾಗಿ ಪೋರ್ಟ್‌ಬ್ಲೇರಿನ ಜನಜಂಗುಳಿ ಮಾರುಕಟ್ಟೆ ಪ್ರದೇಶದಲ್ಲಿ ಈಗಲೂ ಒಂದು ಸ್ಮಾರಕ ಸ್ತಂಭ ಕಾಣಬಹುದು. 

ನಾಗರಿಕ ಜಗತ್ತು ಅಮಾಯಕ ಆದಿವಾಸಿಗಳನ್ನು ಅವರ ನೆಲದಲ್ಲೇ ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬದಲು ವಿಜಯದ ಕುರುಹಾಗಿ ಸ್ತಂಭ ನಿಲಿಸಿ ಮಡಿದ ತನ್ನವರ ಹೆಸರನ್ನಷ್ಟೇ ಅದರಲ್ಲಿ ಕೆತ್ತಿಟ್ಟುಕೊಂಡರೆ ಈ ಘಟನೆಯ ನಂತರ ದ್ರೋಹ ಬಗೆದ ಆಧುನಿಕ ಮನುಷ್ಯನ ಮೇಲೆ ಆದಿವಾಸಿಗಳ ಕ್ರೋಧ, ಅನುಮಾನ ಮತ್ತಷ್ಟು ಹೆಚ್ಚಾಯಿತು. ೧೮೫೮ರಲ್ಲಿ ಇಂಡಿಯನ್ ನೇವಿಯ ಲೆಫ್ಟಿನೆಂಟ್ ಟೆಂಪಲ್ ಎಂಬಾತ ಮೂರು ನಾಡದೋಣಿಗಳನ್ನು ಹಿಡಿದು ಅಂಡಮಾನಿಗಳ ಗುಡಿಸಲು ನಾಶಗೊಳಿಸಿ ಆರು ಜನರನ್ನು ಕೊಂದ. ನಂತರ ಬುಡಕಟ್ಟುಗಳು ಮೂರು ಬಾರಿ ದಾಳಿ ನಡೆಸಿದರು. ಇದಾದ ಮೇಲೆ ಪೋರ್ಟ್‌ಬ್ಲೇರ್ ಸೂಪರಿಂಟೆಂಡೆಂಟ್ ಸ್ಥಳೀಯರ ಜೊತೆ ಸ್ನೇಹದಿಂದಿರುವ ಅವಶ್ಯಕತೆ ಮನಗಂಡು ಅಧಿಕಾರಿಗಳು ಮತ್ತು ಅಪರಾಧಿಗಳು ಬುಡಕಟ್ಟುಗಳ ಜೊತೆ ಹೇಗೆ ವರ್ತಿಸಬೇಕೆಂಬ ನೀತಿ ಸಂಹಿತೆಯನ್ನು ರೂಪಿಸಿದ. ‘ಅಂಡಮಾನ್ ಹೋಂ’ ತೆರೆಯಲಾಯಿತು. ಕ್ಯಾಪ್ಟನ್ ಕಾರ್ಬೈನ್ ಅದರ ಮುಖ್ಯಸ್ಥನಾದ. ಆತ ೨೮ ಅಂಡಮಾನಿಗಳ ಮನವೊಲಿಸಿ ಅಂಡಮಾನ್ ಹೋಂನಲ್ಲಿರುವಂತೆ ಮಾಡಿದ. ಅವನ ನಂತರ ಬಂದ ಇ.ಎಚ್.ಮ್ಯಾನ್ ಅಂಡಮಾನಿಗರ ಕುರಿತು ವ್ಯವಸ್ಥಿತ ಅಧ್ಯಯನ ನಡೆಸಿದ. ತಪ್ಪಿಸಿಕೊಂಡು ಓಡುವ ಖೈದಿಗಳನ್ನು ಹಿಡಿದು ತರಲು ಬೇಟೆನಾಯಿಗಳಂತೆ ಅವರನ್ನು ಬಳಸಿಕೊಳ್ಳಲಾಯಿತು. ಇದು ೧೯೦೦ರ ತನಕ ಹೀಗೇ ಮುಂದುವರೆಯಿತು. ಆದರೆ ನಾಗರಿಕ ಜಗತ್ತಿನೊಂದಿಗೆ ಏರ್ಪಟ್ಟ ನಿರಂತರ ಸಂಪರ್ಕ ಗ್ರೇಟ್ ಅಂಡಮಾನಿಗಳ ಪಾಲಿಗೆ ಬಹು ತುಟ್ಟಿಯಾಗಿ ಪರಿಣಮಿಸಿತು. ಎರಡು ಬಾರಿ ಕಾಡಿದ ದಡಾರಕ್ಕೆ (ಮೀಸಲ್ಸ್ ಎಪಿಡೆಮಿಕ್) ಹಲವರು ಬಲಿಯಾದರು. ನಂತರ ಅಂಡಮಾನ್ ಹೋಂಗಳನ್ನು ಮುಚ್ಚಲಾಯಿತು. 

   ಹೀಗೆ ತಮ್ಮ ಕುಲದ ಸಾವಿರಾರು ಹಿರಿಯರನ್ನು ಕಳೆದುಕೊಂಡ ಗ್ರೇಟ್ ಅಂಡಮಾನಿಗಳ ಸಂತತಿ ಇಂದು ವಿನಾಶದ ಅಂಚಿನಲ್ಲಿದೆ. ಅವರೀಗ ಪ್ರತ್ಯೇಕವಾಗಿ ಸ್ಟ್ರೈಟ್ ದ್ವೀಪದಲ್ಲಿ ವಾಸಿಸುತ್ತಿದ್ದಾರೆ. ಮೀನು, ನೀರಾನೆ, ಏಡಿ, ಆಮೆ, ಮೊಟ್ಟೆ, ಹಂದಿ, ಮೊಸಳೆ, ಆಕ್ಟೋಪಸ್, ಮೃದ್ವಂಗಿಗಳು, ಗೆಡ್ಡೆಗೆಣಸು ಆಹಾರವಾಗಿದ್ದ ಬೇಟೆಯ ಕುಲ ಈಗ ಅನ್ನ, ಚಪಾತಿ, ಮಸಾಲೆ ಸಾಂಬಾರ್, ಮೀನು ಫ್ರೈ ಮಾಡಿ ತಿನ್ನುವಷ್ಟು ನಾಗರಿಕರಾಗಿದ್ದಾರೆ. ನಾಗರಿಕರ ಎಲ್ಲ ದುರಭ್ಯಾಸ, ದುಶ್ಚಟ, ಕಾಯಿಲೆಗಳೂ ಅವರನ್ನು ಮುತ್ತಿಕೊಂಡಿವೆ. ಕುಡಿತಕ್ಕೆ ಅಂಟಿಕೊಂಡಿದ್ದಾರೆ. ನಾಗರಿಕ ಸಂಪರ್ಕ ಏರ್ಪಡುವ ಮೊದಲು ನಗ್ನರಾಗಿರುತ್ತಿದ್ದ ಗ್ರೇಟ್ ಅಂಡಮಾನಿಗಳು ಈಗ ಲಭ್ಯವಿರುವ ಯಾವ ಉಡುಪಾದರೂ ಸರಿ, ಧರಿಸುತ್ತಾರೆ. ಅಲಂಕಾರವನ್ನು ತುಂಬ ಇಷ್ಟಪಡುತ್ತಾರೆ. ಕೆಲವರಿಗೆ ಜೆಟ್ಟಿ-ಬಂದರಿನಲ್ಲಿ ಸಹಾಯಕರ ಕೆಲಸ ಕೊಡಲಾಗಿದೆ. 

ಪಾರಂಪರಿಕ ಜ್ಞಾನ ಹೊಂದಿದ್ದ, ತಮ್ಮಷ್ಟಕ್ಕೆ ತಾವು ಸಾವಿರಾರು ವರ್ಷ ಬದುಕಿದ್ದ ಅವರಿಗೆ ಗ್ರೇಟ್ ಅಂಡಮಾನಿಗಳೆಂಬ ಉದ್ದನೆಯ ಹೆಸರು ನೀಡಿ ನಾವು ಮಾಡಿರುವ ಉಪಕಾರ ಇಂಥದು.

ಒಂಗೇ

   ಲಿಟಲ್ ಅಂಡಮಾನ್ ದ್ವೀಪದ ಒಳ ಪ್ರದೇಶಗಳಲ್ಲಿ ಬದುಕುವ ಒಂಗೇಗಳು ನೀಗ್ರೋ ಲಕ್ಷಣ ಹೊಂದಿದ ಕುಳ್ಳ ಮೈಕಟ್ಟಿನ ಗಟ್ಟಿಜನರು. ೧೮೨೫ರಲ್ಲಿ ಬ್ರಿಟಿಷ್ ನೌಕಾಧಿಕಾರಿಯೊಬ್ಬ ಈ ಜನರ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿ ಭೀಕರ ಕಾಳಗವಾಯಿತು. ಅದು ನಾಗರಿಕ ಜಗತ್ತಿನೊಡನೆ ಅವರ ಪ್ರಥಮ ಮುಖಾಮುಖಿ. ನಂತರದ ಭೇಟಿಗಳೂ ರಕ್ತಮಯವಾಗೇ ಇದ್ದವು. ಈ ಆದಿವಾಸಿಗಳನ್ನು ಪರಿಚಯ ಮಾಡಿಕೊಳ್ಳಲು ಬ್ರಿಟಿಷರು ಮತ್ತೆ ಮತ್ತೆ ಪ್ರಯತ್ನಿಸಿ ಅಂತೂ ಕೊನೆಗೆ ಯಶಸ್ವಿಯಾದರು. ಆದರೆ ನಾಗರಿಕ ಜಗತ್ತಿನ ಸಂಪರ್ಕ ಹಲವು ಜೈವಿಕ, ದೈಹಿಕ ಬದಲಾವಣೆಗಳನ್ನುಂಟುಮಾಡಿ ಆ ಸಮುದಾಯಕ್ಕೆ ದೊಡ್ಡ ಹಾನಿ ಮಾಡಿದೆ. ಹಲವು ಕಾಯಿಲೆಗಳು ಮುತ್ತಿ ಎಷ್ಟೋ ಸಾವುನೋವುಗಳಾಗಿವೆ. ಈಗವರು ೯೯ ಜನ ಉಳಿದಿದ್ದಾರೆ. ಈ ಸಮುದಾಯ ಮತ್ತದರ ಅನನ್ಯತೆ ರಕ್ಷಿಸುವ ಸಲುವಾಗಿ ಅಂಡಮಾನ್ ಆಡಳಿತ ಲಿಟಲ್ ಅಂಡಮಾನ್ ಬಳಿ ಸೌತ್ ಬೇ ಹಾಗೂ ದುಗಾಂಗ್ ಕ್ರೀಕ್‌ಗಳಲ್ಲಿ ಎಲ್ಲ ಸೌಲಭ್ಯ ಒದಗಿಸಿ ಪುನರ್ವಸತಿ ಕಲ್ಪಿಸಿದೆ. ಶಾಲೆ ತೆರೆಯಲಾಗಿದೆ. ವಯಸ್ಕರ ಕಲಿಕಾ ಕೇಂದ್ರವೂ ಇದೆ.

ಸೆಂಟಿನೆಲೀಯರು

   ಪೋರ್ಟ್‌ಬ್ಲೇರ್ ಪಶ್ಚಿಮಕ್ಕಿರುವ ಉತ್ತರ ಸೆಂಟಿನೆಲ್ ದ್ವೀಪದ ಆದಿವಾಸಿ ಸಮುದಾಯ ಸೆಂಟಿನೆಲೀಯರು. ಇಡೀ ವಿಶ್ವದಲ್ಲೇ ತಮ್ಮ ಜೀವನಶೈಲಿ-ಪ್ರದೇಶವನ್ನು ನಾಗರಿಕ ಜಗತ್ತಿನಿಂದ ಸಂಪೂರ್ಣ ಬೇರೆಯಾಗಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಏಕೈಕ ಸಮುದಾಯ ಅದು. ಅವರ ವಾಸಸ್ಥಾನ ಭಾರತಕ್ಕೆ ಸೇರಿದ್ದರೂ ತಮ್ಮ ನೆಲದ ಮೇಲೆ ಅವರಿಗೆ ಸಂಪೂರ್ಣ ಸ್ವಾಮ್ಯವಿದೆ. ೬೦ ಸಾವಿರ ವರ್ಷ ಕೆಳಗಿನ ಶಿಲಾಯುಗ ಮನುಷ್ಯನ ಜೀವಂತ ಕೊಂಡಿ ಅವರು.

   ಆ ದ್ವೀಪ ಬಿಟ್ಟು ಬೇರೆಲ್ಲೂ ಹೋಗದ ಇವರಿಗೆ ಸಾವಿರಾರು ವರ್ಷಗಳಿಂದ ಇತರ ಮೂಲನಿವಾಸಿ ಕುಲಗಳ ಸಂಪರ್ಕವೂ ಇಲ್ಲ. ಬೇಟೆ ಮತ್ತು ಮೀನುಗಾರಿಕೆಯನ್ನೇ ಆಹಾರಕ್ಕಾಗಿ ಸಂಪೂರ್ಣ ಅವಲಂಬಿಸಿರುವ ಈ ಸಮುದಾಯಕ್ಕೆ ಕೃಷಿ ಗೊತ್ತಿಲ್ಲ. ಬೆಂಕಿ ಗೊತ್ತಿಲ್ಲ. ಲೋಹ ತಯಾರಿಕೆ, ಕುಲುಮೆ ಗೊತ್ತಿಲ್ಲ. ಕೆಲ ಆಯುಧ ಬಳಸುತ್ತಾರೆ. ಜಾವೆಲಿನ್, ಬಿಲ್ಲು, ಮೂರ‍್ನಾಲ್ಕು ತರಹದ ಬಾಣ ಉಪಯೋಗಿಸುತ್ತಾರೆ. ದ್ವೀಪದ ಹತ್ತಿರ ಒಡೆದ ಹಡಗುಗಳ ಲೋಹ ಬಳಸಿ ಆಯುಧ ಮಾಡಿಕೊಂಡಿದ್ದಾರೆ. ಕಡಲ ಜೀವಿಗಳೇ ಮುಖ್ಯ ಆಹಾರ. ತೆಂಗು ನೈಸರ್ಗಿಕವಾಗಿ ಬೆಳೆಯದಿದ್ದರೂ ತೇಲಿ ಬರುವ ಕಾಯಿ ಅವರಿಗೆ ಗೊತ್ತು. ಬಾಣದಲ್ಲಿ ಮೀನು ಹಿಡಿಯುತ್ತಾರೆ. ೧೦ ಮೀ. ದೂರದ ತನಕ ನಿಖರ ಗುರಿಯಿಟ್ಟು ಜಾವೆಲಿನ್ ಬಿಸಾಡುತ್ತಾರೆ.

    ಸೆಂಟಿನೆಲೀಯರನ್ನು ಪರಿಚಯ ಮಾಡಿಕೊಳ್ಳಲು ಆಧುನಿಕ ಮನುಷ್ಯ ಪ್ರಯತ್ನಿಸುತ್ತಲೇ ಇದ್ದರೂ ಅವರು ಸ್ನೇಹ ಹಸ್ತ ಚಾಚಿಲ್ಲ. ಸೆಂಟಿನೆಲೀಯರಷ್ಟೇ ಅಲ್ಲ, ಜಗತ್ತಿನ ಬಹುತೇಕ ಆದಿವಾಸಿ ಬುಡಕಟ್ಟುಗಳು ಹೊರಜಗತ್ತಿನೊಂದಿಗೆ ಶತ್ರುತ್ವ ಹೊಂದಿದ್ದರೆ ಅದಕ್ಕೆ ಕಾರಣ ನಾಗರಿಕ ಸಮಾಜದ ಅತ್ಯಾಚಾರ, ದೌರ್ಜನ್ಯವನ್ನು ಪರಂಪರಾಗತವಾಗಿ ಎದುರಿಸಿ ಉಳಿದುಕೊಂಡಿರುವ ಅವರು ಅದರ ನೆನಪನ್ನು ಮರೆಯದಿರುವುದು. ೧೮೭೯ರಲ್ಲಿ ಆದಿವಾಸಿಗಳನ್ನು ‘ಮನುಷ್ಯ’ರನ್ನಾಗಿ ಮಾಡುವ ಪ್ರಯತ್ನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಸೆಂಟಿನೆಲ್ ದ್ವೀಪಕ್ಕೆ ಹೋಗಿ ಸ್ವಲ್ಪ ವಯಸ್ಸಾದ ಒಂದು ಜೋಡಿಯನ್ನೂ ಕೆಲವು ಮಕ್ಕಳನ್ನೂ ಹಿಡಿದು ತಂದ. ಪೋರ್ಟ್‌ಬ್ಲೇರಿಗೆ ಬಂದ ಕೆಲ ದಿನಗಳಲ್ಲೇ ಹಿರಿಯ ಜೋಡಿಗೆ ಆರೋಗ್ಯ ಕ್ಷೀಣಿಸಿ ಅವರು ತೀರಿಕೊಂಡರು. ನಂತರ ಮಕ್ಕಳನ್ನು ವಾಪಸು ಬಿಟ್ಟುಬರಲಾಯಿತು. ಆ ಅಧಿಕಾರಿ ಸೆಂಟಿನೆಲೀಯರು ಆರೋಗ್ಯವಂತರಲ್ಲವೆಂದೂ, ಅವರ ಮುಖ ಒಂದೂ ಭಾವನೆಯಿಲ್ಲದ ಈಡಿಯಾಟಿಕ್ ಚಹರೆ ಹೊಂದಿದೆಯೆಂದೂ, ಅವರು ವರ್ತನೆಯೇ ಗೊತ್ತಿಲ್ಲದ ಕಾಡುಜನರೆಂದೂ ಜರೆದ. 

   ಆದರೆ ಭಾರತ ಸರ್ಕಾರ ದ್ವೀಪ ಸಂದರ್ಶಿಸಲು ಹತ್ತಿರ ಹೋದಾಗ ಕಂಡ ಸೆಂಟಿನೆಲೀಯರು ತುಂಬ ಆರೋಗ್ಯವಂತರಾಗಿದ್ದರಲ್ಲದೆ ಚುರುಕಾಗಿ ಕೈ ಬಾಯಿ ಆಡಿಸುತ್ತಾ ತಮ್ಮ ಭಾಷೆ ಮಾತನಾಡುವ ಬುದ್ಧಿವಂತರಾಗಿಯೂ ಇದ್ದರು. ೧೯೬೭ರಿಂದ ಅಂಡಮಾನಿ ಆಡಳಿತವು ಅವಶ್ಯವಿರುವ ವಸ್ತುಗಳನ್ನು ದೋಣಿಗಳಲ್ಲಿ ಒಯ್ದು ಅವರ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನಿಸಿದೆ. ಆದರೆ ಸ್ನೇಹ ಗಳಿಸುವುದಿರಲಿ, ಕೆಲವರು ಪ್ರಾಣ ಕಳೆದುಕೊಳ್ಳುವಂತಾಗಿ ೯೦ರ ದಶಕದ ನಂತರ ಈ ಕಾರ್ಯಕ್ರಮ ಕೈಬಿಡಲಾಯಿತು. ೨೦೦೬ರಲ್ಲಿ ಸೆಂಟಿನೆಲ್ ದ್ವೀಪದ ಬಳಿ ಅಕ್ರಮ ಮೀನುಗಾರಿಕೆಗೆ ತೆರಳಿದ ದೋಣಿಯ ಇಬ್ಬರು ಬೆಸ್ತರನ್ನು ಅವರು ಕೊಂದರು. ಮೃತರ ದೇಹ ತರಲು ಹೆಲಿಕಾಪ್ಟರ್ ಹೋದಾಗ ಪೈಲಟ್‌ಗಳ ಕಡೆ ಬಾಣಗಳ ಮಳೆ ಸುರಿಸಿದರು. ಹಿಂದೂ ಮಹಾಸಾಗರದ ಸುನಾಮಿ ಲಕ್ಷಾಂತರ ಜನರನ್ನು ಮುಳುಗಿಸಿದಾಗ ಸುನಾಮಿಯ ದಾರಿಯಲ್ಲೇ ಇದ್ದ ಸೆಂಟಿನೆಲ್ ದ್ವೀಪವಾಸಿಗಳು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು. ಸುನಾಮಿ ಅಲೆಗಳಿಂದ, ಭೂಕಂಪದಿಂದ ಹೇಗೆ ಬದುಕುಳಿದರೋ, ಎಷ್ಟು ಜನ ಸಾವನ್ನಪ್ಪಿದರೋ ತಿಳಿದಿಲ್ಲ. ಅವರು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂದು ನೋಡಹೋದ ಹೆಲಿಕಾಪ್ಟರನ್ನು ಬಾಣ ಬಿಟ್ಟು ಓಡಿಸಿದರು. ಹೊರಜಗತ್ತಿನ ಯಾವುದೇ ಸಂಪರ್ಕ, ಸಹಾಯ ಬಯಸದೆ ಒಬ್ಬಂಟಿಯಾಗಿ ನೈಸರ್ಗಿಕ ವಿಪತ್ತನ್ನೂ ಎದುರಿಸಿದ ಗಟ್ಟಿಗರ ಕುಲ ಅದು.

ದ್ವೀಪಕ್ಕೆ ಭೇಟಿ ಇತ್ತವರು ಗಮನಿಸಿರುವಂತೆ, ಅವರು ಮರದ ಕೊಡಲಿ ಹಿಡಿದಿರುತ್ತಾರೆ. ಅಪರಿಚಿತ ದೋಣಿ ಕಂಡೊಡನೆ ೩೦-೪೦ ಜನರ ಗುಂಪು ತೀರಕ್ಕೆ ಬಂದು ನಾಗರಿಕರನ್ನು ಎದುರಿಸುತ್ತದೆ. ಅವರಲ್ಲಿ ಅರ್ಧದಷ್ಟು ಜೋಡಿಗೆ ಮಕ್ಕಳಿದ್ದವು. ಹೆಂಗಸರ ಸಂಖ್ಯೆ ಗಂಡಸರಿಗಿಂತ ಕಡಿಮೆಯಿತ್ತು. ಅವರ ಗಣತಿ ಇಲ್ಲಿಯವರೆಗೂ ದೂರದಿಂದಲೇ ನಡೆದಿದೆ. ೨೦೦೧ರಲ್ಲಿ ೨೧ ಗಂಡು ೧೮ ಹೆಣ್ಣುಗಳನ್ನು ಗಮನಿಸಲಾಗಿದೆ. ಬೇಟೆ ಸಮುದಾಯಗಳು ಪ್ರತಿ ೧.೫ ಚ.ಕಿಮೀಗೆ ಒಬ್ಬ ವ್ಯಕ್ತಿಯನ್ನು ಹೊಂದುತ್ತವೆಂಬ ನಿಯಮದ ಪ್ರಕಾರ ಅವರ ಜನಸಂಖ್ಯೆ ೩೯ ಇರಬೇಕೆಂದು ನಿರ್ಧರಿಸಲಾಗಿದೆ. 

ದಕ್ಷಿಣ ಅಮೆರಿಕಾದ ಚಿಂಟಾಲಾರ್ಗಾ ಬುಡಕಟ್ಟುಗಳ ಕತೆ ನೆನಪಾಗುತ್ತಿದೆ: ನಾಗರಿಕ ಜಗತ್ತಿಗೆ ಅಪಾರ ಪ್ರತಿರೋಧ ತೋರಿದ್ದ ಬ್ರೆಜಿಲ್‌ನ ಈ ಬುಡಕಟ್ಟು ರಬ್ಬರ್ ಬೆಳೆಗಾರರ ದೌರ್ಜನ್ಯಕ್ಕೆ ಬಲಿಯಾದರು. ಒಬ್ಬ ಪ್ಲಾಂಟರ್ ಈ ಭಯಂಕರ ಕಾಡುಜನರನ್ನು ನಿರ್ನಾಮ ಮಾಡಲು ಹೆಲಿಕಾಪ್ಟರಿನಿಂದ ಡೈನಮೈಟ್ ಬಿಸಾಡುವ ಯೋಜನೆ ಹಾಕಿದ್ದ. ಸ್ಫೋಟದ ನಂತರ ಯಾರಾದರೂ ಉಳಿದರೇ ಎಂದು ನೋಡುತ್ತ ಹೊರಟವನಿಗೆ ಒಬ್ಬ ಚಿಂಟಾ ತಾಯಿ ಮಗುವಿಗೆ ಹಾಲೂಡಿಸುತ್ತಿರುವುದು ಕಾಣಿಸಿತು. ಕೂಡಲೇ ಆ ಮಗುವಿನ ತಲೆ ಹಾರಿಸಿ, ತಾಯಿಯನ್ನು ತಲೆಕೆಳಗಾಗಿ ಮರಕ್ಕೆ ನೇತಾಡಿಸಿ ಅರ್ಧರ್ಧ ಸೀಳಿದ್ದಾಗಿ ಆತ ಹೆಮ್ಮೆಯಿಂದ ಹೇಳಿಕೊಂಡ . ಕೆಲವರು ಈ ಘಟನೆ ವಿರೋಧಿಸಿ ಕೋರ್ಟಿಗೆ ಹೋದರು. ಪ್ರಕರಣ ಹಲವು ವರ್ಷ ನಡೆದು ಅಂತೂ ಕೊನೆಗೆ ಒಬ್ಬನಿಗೆ ೧೦ ವರ್ಷ ಜೈಲಾಯಿತು. ಆದರೆ ಆತನಿಗೂ ಕ್ಷಮಾದಾನ ನೀಡಲಾಯಿತು. ಬಿಡುಗಡೆಯಾಗಿ ಹೊರಬಂದವನೇ ಆತ, ‘ಈ ಆದಿವಾಸಿ ಜನ ಸೋಮಾರಿಗಳು ಮತ್ತು ದ್ರೋಹಿಗಳು, ಅವರನ್ನು ಕೊಲ್ಲುವುದೇ ಸೂಕ್ತ’ ಎಂದು ಹೇಳಿದ! 

ದಕ್ಷಿಣ ಅಮೆರಿಕಾದ ಚಿಂಟಾಲಾರ್ಗಾಗಳಂತೆಯೇ ತಮ್ಮ ಪ್ರದೇಶವನ್ನು ಇಂದಿಗೂ ಕಾಯ್ದುಕೊಂಡಿರುವ ಸೆಂಟಿನೆಲೀಯರಿಗೆ ಸದ್ಯಕ್ಕೆ ಕ್ರೂರಪ್ರಾಣಿಗಳಿಂದಾಗಲೀ, ಪ್ರಕೃತಿಯಿಂದಾಗಲೀ ಅಪಾಯವಿಲ್ಲ. ಅಪಾಯವೇನಿದ್ದರೂ ನಾಗರಿಕ ಮನುಷ್ಯನದೇ. 

ಓ ದೇವರೇ, ಉತ್ತರ ಸೆಂಟಿನೆಲ್ ಎಂಬ ‘ಈಡನ್ ಗಾರ್ಡನ್’ನ ಈ ಆಡಂ-ಈವ್‌ರನ್ನು ರಕ್ಷಿಸು..

ಶೊಂಪೇನರು

ಇದು ಮಂಗೋಲಾಯ್ಡ್ ಆದಿವಾಸಿ ಕುಲ. ಗ್ರೇಟ್ ನಿಕೋಬಾರ್ ದ್ವೀಪದ ಒಳಭಾಗಗಳಲ್ಲಿ ಜೀವಿಸುತ್ತಾರೆ. ಈಗಲೂ ಅರೆ ಅಲೆಮಾರಿಗಳಾಗಿರುವ, ತುಂಬ ನಾಚಿಕೆ ಸ್ವಭಾವದ ಈ ಜನರ ಜನಸಂಖ್ಯೆ ೨೦೦ರ ಆಸುಪಾಸು. 

ನಿಕೋಬಾರಿಗಳು

ತಾರಿಕ್, ಸೊಂಪಾಯ್, ಸೊಮ್ಲುರು, ಸೊಮಿತ, ಸೊಪಿಮ್ಯುನ್, ಸೊಪನ್‌ಜಾನ್ಸ್, ಸೊಪ್ಲಾಮಾಂಗ್, ಸೊಪ್‌ಕಾನೊಲ್ಡ್ ಹೀಗೆ ವಿವಿಧ ಹೆಸರುಗಳಿಂದ ಕರೆದುಕೊಳ್ಳುವ ಒಟ್ಟೂ ೧೨ ನಿಕೋಬಾರ್ ದ್ವೀಪಗಳಲ್ಲಿ ವಾಸಿಸುವ ಮಂಗೋಲಾಯ್ಡ್ ಬುಡಕಟ್ಟುಗಳ ಸಮೂಹವೇ ನಿಕೋಬಾರಿಗಳದ್ದು. ಆಫ್ರಿಕಾದ ಗುಡ್ ಹೋಪ್ ಭೂಶಿರದ ನೌಕಾಮಾರ್ಗ ಕಂಡುಹಿಡಿದ ಮೇಲೆ ಯೂರೋಪಿನ ನೌಕೆಗಳು ಪೌರ್ವಾತ್ಯ ದೇಶಗಳಿಗೆ ವಾಣಿಜ್ಯ, ವ್ಯವಹಾರ ಸಂಬಂಧಗಳಿಗೆ ಬರುವುದು ಹೆಚ್ಚಾಯಿತು. ಆಗೆಲ್ಲ ಅವರು ನಿಕೋಬಾರ್ ದ್ವೀಪಗಳನ್ನು ಭೇಟಿಮಾಡಿದ್ದಾರೆ. ಈ ಕಾರಣದಿಂದ ಅಂಡಮಾನಿನ ದ್ವೀಪವಾಸಿಗಳಿಗಿಂತ ನಿಕೋಬಾರಿಗಳು ಕೊಂಚ ಮುಂದಿದ್ದಾರೆಂದು ಹೇಳಬಹುದು. ೩೦ ಸಾವಿರದಷ್ಟು ಜನಸಂಖ್ಯೆಯಿರುವ ನಿಕೋಬಾರಿಗಳು ಬಹುಪಾಲು ಕ್ರಿಶ್ಚಿಯನ್ನರು. ಅವರದೇ ಸಮುದಾಯದ ಬಿಷಪ್ ಜಾನ್ ರಿಚರ್ಡ್‌ಸನ್ ಶ್ರಮದ ಪ್ರತಿಫಲವಾಗಿ ನಿಕೋಬಾರಿಗಳ ಹಲವು ಸಮುದಾಯಗಳು ಇಂದು ಒಗ್ಗೂಡಿವೆ. ಅವರು ನಾಗರಿಕ ಜಗತ್ತಿನೊಂದಿಗೆ ಪೈಪೋಟಿಗಿಳಿಯಲು ಸಮರ್ಥರಾಗಿದ್ದಾರೆ. ರಿಚರ್ಡ್‌ಸನ್ ನಂತರ ಎಡ್ವಿನ್ ಮೋಸೆಸ್ ಮತ್ತು ಹೆನ್ರಿ ಲಾರೆನ್ಸ್ ಅವರೂ ಸಮುದಾಯದ ಪರವಾಗಿ ಕೆಲಸ ಮಾಡಿದ್ದಾರೆ. 

ಬಿಷಪ್ ಜಾನ್ ರಿಚರ್ಡ್‌ಸನ್ ನಿಕೋಬಾರ್ ಆದಿವಾಸಿಗಳ ಪಿತಾಮಹ ಎನ್ನಬಹುದು. ೧೮೮೪ರಲ್ಲಿ ಕಾರ್ ನಿಕೋಬಾರಿನ ಮುಸ್ ಹಳ್ಳಿಯಲ್ಲಿ ಹುಟ್ಟಿದ ಅವರು ಆದಿವಾಸಿ ಸಮುದಾಯಕ್ಕೆ ಸೇರಿದವರು. ಚುರುಕು ಹುಡುಗನನ್ನು ಗುರುತಿಸಿದ ಮಿಷನರಿಗಳು ಪ್ರಾಥಮಿಕ ಶಿಕ್ಷಣ ಕೊಡಿಸಿ ನಂತರ ಧಾರ್ಮಿಕ ಶಿಕ್ಷಣ ಕೊಡಲು ಮರ್ಬಾಗೆ ಕಳಿಸಿದರು. ಅಲ್ಲಿಂದ ಬಂದ ರಿಚರ್ಡ್‌ಸನ್ ಪಾದ್ರಿಯಾಗಿ, ಸಮಾಜಸೇವಾ ಕಾರ್ಯಕರ್ತನಾಗಿ ರೂಪುಗೊಂಡರು. 

ಕ್ರಿಶ್ಚಿಯನ್ ಧರ್ಮ ಬೋಧಿಸುತ್ತಾ ಹಳ್ಳಿಹಳ್ಳಿ ತಿರುಗಿದ ಎಳೆಯ ಪಾದ್ರಿ ಹಲವು ಗುಂಪುಗಳಲ್ಲಿ ಹಂಚಿಹೋಗಿದ್ದ ಸಮುದಾಯವನ್ನು ಒಟ್ಟಿಗೆ ತಂದರು. ಮೂಢನಂಬಿಕೆಗಳಲ್ಲಿ ಮುಳುಗಿದವರಿಗೆ ವಿಜ್ಞಾನ ಬೋಧಿಸಿ ಅರ್ಥ ಮಾಡಿಸಿದರು. ನಿಕೋಬಾರಿ ಭಾಷೆಗೆ ರೋಮನ್ ಲಿಪಿ ಅಳವಡಿಸಿದರು. ಬೈಬಲ್ ಅನ್ನು ನಿಕೋಬಾರಿ ಭಾಷೆಗೆ ಭಾಷಾಂತರಿಸಿದರು. ಶಿಕ್ಷಣದ ಮಹತ್ವ ಹೇಳಿದರು. ಶಾಲೆಗಳನ್ನು ತೆರೆದರು. ಅವರು ಅಂಡಮಾನ್ ನಿಕೋಬಾರ್ ದ್ವೀಪಗಳ ಮೊತ್ತಮೊದಲ ನಾಮಕರಣಗೊಂಡ ಸಂಸತ್ ಸದಸ್ಯರು. ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ, ಶ್ರೀರಾಂಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. 

ನಿಕೋಬಾರಿಗಳ ಪಾಲಿಗಂತೂ ರಿಚರ್ಡ್‌ಸನ್ ನಿಜವಾದ ಉದ್ಧಾರಕರೇ ಆಗಿದ್ದಾರೆ.  

ಕರೇನರು

ಅಂಡಮಾನಿನ ಮೂಲನಿವಾಸಿಗಳಲ್ಲದಿದ್ದರೂ ಅಲ್ಲಿರುವ ಬುಡಕಟ್ಟು ಸಮುದಾಯವೆಂದು ಗುರುತಿಸಬಹುದಾದ ಸಮುದಾಯಗಳೂ ಕೆಲವಿವೆ. ಅಂಥ ಒಂದು ಕುಲ ಕರೇನರದ್ದು. ಬರ್ಮಾ ಮೂಲದ ಕರೇನರು ಭಾರತಕ್ಕೆ ೧೯೨೫ರ ಸುಮಾರಿಗೆ ಬಂದರು. ಮೂಲತಃ ಮಂಗೋಲಿಯಾದ ಕರೇನರು ಕ್ರಿ.ಪೂ ಕಾಲದಲ್ಲಿ ಟರ್ಕಿ, ಚೀನಾಗಳಿಗೆ ವಲಸೆ ಹೋದರು. ಚೀನಾ ರಾಜನ ತೊಂದರೆ ಸಹಿಸಲಾರದೇ ಟಿಬೆಟ್, ಬರ್ಮಾ, ಕಾಂಬೋಡಿಯಾ, ವಿಯೆಟ್ನಾಂಗಳತ್ತ ವಲಸೆ ಬಂದರು. ಕ್ರಿ.ಪೂ ೧೦೦೦ದ ಹೊತ್ತಿಗೆ ಬರ್ಮಾಗೆ ಬಂದರು. ಬರ್ಮಾದ ಪೂರ್ವ ಕರಾವಳಿ ಮತ್ತು ನದಿಮುಖಜ ಭೂಮಿಗಳಲ್ಲಿ ವಾಸಿಸುವ ಅವರು ಉಳಿದ ಬರ್ಮೀಯರಿಗಿಂತ ಭಿನ್ನವೂ, ವಿಶಿಷ್ಟವೂ ಆಗಿದ್ದಾರೆ. ಅವರು ಅಂಡಮಾನಿಗೆ ವಲಸೆ ಬಂದ ಕತೆ ಹೀಗಿದೆ: 

೧೯೨೫. ಅಂಡಮಾನಿನ ಚೀಫ್ ಕಮಿಷನರ್ ಫೆರಾರ್ ಅವರ ಕಸಿನ್ ಮಾರ್ಷಲ್ ಅಂಡಮಾನಿಗೆ ಬಂದರು. ಮಾತುಕತೆಯ ಸಮಯದಲ್ಲಿ ಜಂಗಲಿನಲ್ಲಿ ಕೆಲಸ ಮಾಡಲು ತನಗೆ ಗಟ್ಟಿಮುಟ್ಟಾದ ನಂಬಿಕಸ್ಥ ಜನರು ಬೇಕೆಂದೂ, ಬರುವವರಿಗೆ ಒಂದು ವರ್ಷ ಉಚಿತ ರೇಷನ್ ಹಾಗೂ ಸಾಗುವಳಿ ಮಾಡಲು ಭೂಮಿ ಕೊಡುವುದಾಗಿಯೂ ಫೆರಾರ್ ಹೇಳಿದರು. ಇದನ್ನು ಕೇಳಿದ ಮಾರ್ಷಲ್ ಬರ್ಮಾಕ್ಕೆ ಹೋದನಂತರ ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ವಿಷಯ ಕುರಿತು ಪ್ರಕಟಣೆ ನೀಡಿದರು. ಅದನ್ನು ಓದಿದ ಸ್ಥಳೀಯ ಪಾದ್ರಿ ತಮ್ಮ ಗೆಳೆಯರೊಟ್ಟಿಗೆ ಹೋಗಿ ಅಂಡಮಾನನ್ನು ನೋಡಿಬಂದರು. ೧೯೨೫ ಏಪ್ರಿಲ್‌ನಲ್ಲಿ ೧೨ ಕುಟುಂಬಗಳನ್ನು ತಮ್ಮೊಟ್ಟಿಗೆ ಕರೆದೊಯ್ದರು. ನಂತರ ಹಲವು ಕುಟುಂಬಗಳು ಬಂದವು. ಜಂಗಲ್ ಕೆಲಸ ಮುಗಿದ ಮೇಲೆ ಕೆಲವರು ತಮ್ಮ ದೇಶಕ್ಕೆ ವಾಪಸಾದರೆ ಹಲವರು ಇಲ್ಲೇ ಉಳಿದರು. ಅವರಿಗೆಲ್ಲ ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಪೌರತ್ವ ನೀಡಿತು. ಈಗ ಅಂಡಮಾನಿನಲ್ಲಿ ೨೦೦೦ ಜನಸಂಖ್ಯೆಯಷ್ಟಿರುವ ಕರೇನರು ಉತ್ತರ ಅಂಡಮಾನಿನ ಕರ್ಮಟಾಂಗ್ ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಸಂಕೋಚ ಸ್ವಭಾವದ, ಪ್ರಾಮಾಣಿಕ ಶ್ರಮದ ದುಡಿಮೆಗಾರರಾದ ಅವರು ಕೃಷಿ, ಮೀನುಗಾರಿಕೆ, ಬೇಟೆಗಳಲ್ಲಿ ತೊಡಗಿದ್ದಾರೆ. ಬರ್ಮಾದಿಂದ ಬಂದು ೭೫ ವರ್ಷವಾದರೂ ಶೈಕ್ಷಣಿಕವಾಗಿ, ಸಾಮಾಜಿಕ-ಆರ್ಥಿಕವಾಗಿ ಅವರು ಹಿಂದುಳಿದ ಸಮುದಾಯವೇ ಆಗಿದ್ದಾರೆ. ತಮ್ಮ ಮೂಲ ಆಚರಣೆ, ಸಂಸ್ಕೃತಿ ಉಳಿಸಿಕೊಂಡಿದ್ದಾರೆ. 

  ಇಷ್ಟೇ ಅಲ್ಲದೆ ಅಂಡಮಾನಿನಲ್ಲಿ ಜಾರ್ಖಂಡ್ ಕಡೆಯಿಂದ ವಲಸೆ ಹೋದ ಆದಿವಾಸಿಗಳೂ, ಬ್ರಿಟಿಷರು ಅಪರಾಧಿ ಬುಡಕಟ್ಟು ಎಂದು ಹೆಸರಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ ಭಂಟು ಸಮುದಾಯವೂ ಇವೆ.

ಈಗ:

ಇಂದಿನ ಅಂಡಮಾನಿನಲ್ಲಿ ಬೇರೆಬೇರೆ ಸಮುದಾಯಗಳು ಬೇರೆಬೇರೆ ಕಾಲಮಾನದಲ್ಲಿ ಬದುಕುತ್ತಿದ್ದು ಅದು ಭಾರತದ ವಸಾಹತುವಿನಂತೆ ಬೆಳೆಯುತ್ತಿದೆ. ಆದರೆ ಜರವಾ, ಒಂಗೇ, ಸೆಂಟಿನೆಲೀಯರಿಗೆ ಭಾರತೀಯತೆ, ರಾಷ್ಟ್ರೀಯತೆ, ಸ್ವಾತಂತ್ರ್ಯ ಸಂಗ್ರಾಮ, ಇತಿಹಾಸ ಎಂಬ ಪದಗಳು ಅರ್ಥವಾದರೆ ಅವರು ನಕ್ಕುಬಿಡುತ್ತಾರೇನೋ? ಅವರು ಭಾರತೀಯ ವಲಸಿಗರನ್ನು ‘ವಸಾಹತುಶಾಹಿ’ ಎಂದೂ, ವಲಸೆಯನ್ನು ಅತಿಕ್ರಮಣ ಎಂದೂ, ವಲಸೆಯನ್ನು ಪ್ರೋತ್ಸಾಹಿಸುವ ಸರ್ಕಾರದ ನೀತಿಯನ್ನು ಅಕ್ರಮ-ಸಕ್ರಮ ಎಂದೂ ಕರೆಯಬಹುದೇನೋ? ಒಂದೇ ಪದಪುಂಜ ಒಂದೇ ಪ್ರದೇಶದಲ್ಲಿ ವಾಸಿಸುವ ಬೇರೆಬೇರೆ ಜನರಲ್ಲಿ ಹೇಗೆ ವಿರುದ್ಧ ಅರ್ಥಗಳನ್ನು ಸ್ಫುರಿಸಬಹುದಲ್ಲವೆ!? 

ಮಹುವಾ ಮರ ಹೂಬಿಟ್ಟಾಗ ಅಥವಾ ಜೇನು ದೊರೆತಾಗಲಷ್ಟೇ ಮದ್ಯ ತಯಾರಿಸಿ ಕುಡಿಯುತ್ತಿದ್ದವರಿಗೆ ಕ್ರೇಟುಗಟ್ಟಲೆ ಮದ್ಯ ಕಣ್ಣೆದುರು ಕುಣಿಯತೊಡಗಿದರೆ? ಬೇಟೆಗಾರ ಕುಲಗಳಿಗೆ ಅಕ್ಕಿ, ಗೋಧಿ, ಸಕ್ಕರೆ ಪರಿಚಯಿಸಿ, ರೇಷನ್ನಿನಲ್ಲಿ ಪೂರೈಸಿ ಆಹಾರ ಭದ್ರತೆ ದೊರಕಿದರೆ? ಮೈಕೈಗೆ ಬಳಿದ ಜೇಡಿಮಣ್ಣೇ ಉಡುಪಾದ ಅರೆನಗ್ನ ಅರಣ್ಯವಾಸಿಗಳಿಗೆ ಅಂದಚಂದದ ಉಡುಪು, ಅದರಿಂದ ಉತ್ಪ್ರೇಕ್ಷೆಗೊಳ್ಳುವ ದೇಹ ಸೌಂದರ್ಯ ನೋಡಿಕೊಳ್ಳಲೊಂದು ಕನ್ನಡಿ ಸಿಕ್ಕರೆ? ತನ್ನ ನಿಯಂತ್ರಣಕ್ಕೆ ಸಿಗದ ಕಾಯಿಲೆ ಕಸಾಲೆಗಳಿಗೆ ಜೀವಗಳ ಬಲಿಕೊಡುತ್ತಿದ್ದ, ಹಲ್ಲುಕಚ್ಚಿ ನೋವು ಸಹಿಸುತ್ತಿದ್ದ ಜನರಿಗೆ ತಕ್ಷಣದ ಪರಿಹಾರವೊಂದು ಮಾತ್ರೆ ಔಷಧಿಯ ರೂಪದಲ್ಲಿ ಗೋಚರಿಸಿದರೆ? ಹಗಲು ಹೊತ್ತಿನ ವಿರಾಮ ಕಳೆಯಲು ಹಾಡು, ನರ್ತನ, ವಾದನದಲ್ಲಿ ತೊಡಗುತ್ತಿದ್ದ ಸಂಗೀತಪ್ರಿಯ ಬುಡಕಟ್ಟುಗಳಿಗೆ ರಾತ್ರಿಹಗಲೆನ್ನದೆ ಕೂಗುವ ಟಿವಿ ಒಂದು ಬಟನಿನಷ್ಟೇ ದೂರವೆಂದಾದರೆ?

ಆಹಾರ, ಆರೋಗ್ಯ, ಪ್ರಸಾಧನ, ಮನರಂಜನೆ ಎಲ್ಲವೂ ಕೈಗಾರಿಕೀಕರಣಗೊಂಡ ಜಗತ್ತಿನ ಆಮಿಷಗಳಾಗಿ ಬುಡಕಟ್ಟುಗಳನ್ನು ಅಯಸ್ಕಾಂತದಂತೆ ಸೆಳೆಯುತ್ತವೆ. ಬದಲಾದ ಆಹಾರ ಸಂಸ್ಕೃತಿ ಮಿಕ್ಕ ಬದಲಾವಣೆಗೆ ನಾಂದಿಯಾಗುತ್ತದೆ. ನಾಲಿಗೆ ಮತ್ತು ಹೊಟ್ಟೆಯ ಒತ್ತಡಕ್ಕೆ ಕೈಕಾಲು ತಲೆ ಹೇಗೆ ಬೇಕಾದರೂ ಕುಣಿಯುತ್ತವೆ. ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಅಂಡಮಾನ್ ದ್ವೀಪದ ಆದಿಮ ಬುಡಕಟ್ಟುಗಳು ಉದಾಹರಣೆಯಾಗಿವೆ. ಒಂಗೇ ಮತ್ತು ಗ್ರೇಟ್ ಅಂಡಮಾನಿಗಳು ನಾಗರಿಕಗೊಳ್ಳಲು ಮೊದಲು  ಅಪಾರ ಪ್ರತಿರೋಧ ತೋರಿದರೂ ಈಗ ನಾಗರಿಕರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಹಾಗೆಯೇ ಇದೆಲ್ಲವನ್ನು ನಿರಾಕರಿಸಿ ಒಂಟಿ ದ್ವೀಪದಲ್ಲಿ ಯಾರ ಸಂಪರ್ಕವಿಲ್ಲದೆ ಬದುಕುತ್ತಿರುವ ಸೆಂಟಿನೆಲೀಯರೂ ಇದ್ದಾರೆ. ಇವೆಲ್ಲದರಿಂದ ಅವರು ಪಡೆದಿದ್ದೆಷ್ಟು, ತೆತ್ತಿದ್ದೆಷ್ಟು? ಕಾಲವೇ ಹೇಳಬೇಕು. 

ಬುಡಕಟ್ಟು ಜನರ ಕಲ್ಯಾಣಕ್ಕಾಗಿಯೇ ಅಂಡಮಾನಿನಲ್ಲಿ ಒಂದು ಇಲಾಖೆಯಿದೆ. ಸೋನಿಯಾ ಗಾಂಧಿ ಆದಿವಾಸಿಗಳ ಬಗೆಗೆ ಖುದ್ದು ಆಸಕ್ತರಾಗಿದ್ದಾರೆ. ಸೆಂಟಿನೆಲೀಯರನ್ನು ಹೊರತುಪಡಿಸಿ ಉಳಿದವರಿಗೆ ವಯಸ್ಕರ ಶಿಕ್ಷಣ ಕೇಂದ್ರಗಳು ತೆರೆಯಲ್ಪಟ್ಟಿವೆ. ಜರವಾಗಳಿಗೆ ಕದಂತಲಾದಲ್ಲಿ, ಒಂಗೇಗಳಿಗೆ ದುಗಾಂಗ್ ಕ್ರೀಕ್‌ನಲ್ಲಿ, ಶೊಂಪೆನ್‌ಗಳಿಗೆ ಗ್ರೇಟ್ ನಿಕೋಬಾರಿನಲ್ಲಿ ವಯಸ್ಕರ ಕಲಿಕಾ ಕೇಂದ್ರಗಳಿವೆ. ನಿಕೋಬಾರಿಗಳು ಶಿಕ್ಷಣದ ಮಹತ್ವ ಅರಿತು ಶಾಲಾಕಾಲೇಜಿಗೆ ಹೋಗತೊಡಗಿದ್ದಾರೆ ಹಾಗೂ ಅವರನ್ನು ವಿದ್ಯಾವಂತರನ್ನಾಗಿಸುವಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪಾತ್ರ ದೊಡ್ಡದಿದೆ. ಅವರಿಗಾಗಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.   

ನಾಗರಿಕ ಸಮಾಜದಲ್ಲಿ ವಿಲೀನಗೊಳಿಸಿದರೂ ನಾವು ಅವರಿಗೆ ಯಾವ ಸ್ಥಾನ ಕೊಟ್ಟೇವು? ಕಡಿಮೆ ಸಂಖ್ಯೆಯ ಜನರಿಗೊಂದು ಹೆಸರಿಟ್ಟು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಮಾಜ; ಕಲ್ಲುಮಣ್ಣನ್ನೂ ಕರಗಿಸಿ ನೆಕ್ಕುವ ಆಧುನಿಕತೆ - ಈ ಪುಟ್ಟ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಬಹುದೆ?

ಇನ್ನೂ ಒಂದು ಸೂಕ್ಷ್ಮವಿದೆ: ಬುಡಕಟ್ಟು ಪ್ರದೇಶಗಳು ಪ್ರವಾಸಿಗರಿಗೆ ಮ್ಯೂಸಿಯಂಗಳಾಗುವ ಅಪಾಯವಿದೆ. ಡಿಆರ್ ಹೇಳುವಂತೆ, ಆಧುನಿಕ ಪ್ರವಾಸಿಗೆ ಯಾವುದೂ ಪವಿತ್ರವಲ್ಲ. ಆತ ಶಾಶ್ವತ ಉದ್ರೇಕದ ಹುಡುಕಾಟದಲ್ಲಿ ಇರುತ್ತಾನೆ. ಎಲ್ಲವೂ ಸಲೀಸಾಗಿ ಬೇಗ ಸಿಗಬೇಕು. ಸಂಸ್ಕೃತಿಯೊಂದು ನೂರಾರು ವರ್ಷ ನಿರಂತರ ಏಕಾಗ್ರತೆಯಲ್ಲಿ ರೂಢಿಸಿಕೊಂಡಿದ್ದು ಒಂದು ಸಂಜೆಯಲ್ಲಿ ಸಿಗಬೇಕು. ಈ ಮನಸ್ಥಿತಿ ಬುಡಕಟ್ಟುಗಳನ್ನು ಪ್ರದರ್ಶನದ ಆರ್ಟಿಫ್ಯಾಕ್ಟ್‌ಗಳಂತೆ ನೋಡುವ, ಕಾನೂನುಬಾಹಿರವಾಗಿ ಅವರ ಸಂಪರ್ಕ ಬೆಳೆಸುವ ಪ್ರಯತ್ನಗಳಿಗೆ ಕಾರಣವಾಗುತ್ತದೆ. ಪ್ರವಾಸಿಗಳ ಹಸಿವು, ಅದನ್ನು ತಣಿಸುವವರ ಮಾರುಕಟ್ಟೆ ಬುದ್ಧಿ, ನಾಗರಿಕ ಜಗತ್ತಿನ ದುಶ್ಚಟಗಳು, ಆಮಿಷಗಳೆಲ್ಲ ಆಧುನಿಕತೆ ಒಡ್ಡುವ ಕಲ್ಚರಲ್ ಶಾಕ್ ಆಗಿ ಈ ಸಮುದಾಯಗಳನ್ನು ಬಾಧಿಸಬಹುದಾಗಿದೆ.  

ಮಗಳು ಹೇಳಿದಳು: ‘ನಾವು ನಮ್ಮ ಮಕ್ಕಳೊಂದಿಗೆ ಅಂಡಮಾನಿಗೆ ಬರುವಾಗ ಬಹುಶಃ ಪೋರ್ಟ್‌ಬ್ಲೇರ್ ಡಿಸಿ ಒಬ್ಬ ಜರವಾ ಆಗಿರಬಹುದು’ ಎಂದು. ಆದರೆ ಇಲ್ಲ. ಒಬ್ಬ ಜರವಾ ಎಂಪಿ, ಜರವಾ ಮಂತ್ರಿ ಇನ್ನು ಇಪ್ಪತ್ತೈದು ವರ್ಷದಲ್ಲಿ ಹುಟ್ಟಿಬರಬಹುದು. ರಾಜಕಾರಣದ ಕಾರ್ಖಾನೆ ಬಹು ವೇಗವಾಗಿ ಉತ್ಪಾದಿಸುತ್ತದೆ. ಆದರೆ ಶಿಕ್ಷಣವೆಂಬ ಕಾರ್ಖಾನೆಯ ಉತ್ಪಾದನಾ ಗತಿ ನಿಧಾನ. ಒಬ್ಬ ಜರವಾ ರಾಜಕಾರಣಿ ಬಂದಷ್ಟು ಬೇಗ ಒಬ್ಬ ಜರವಾ ವೈದ್ಯ, ಇಂಜಿನಿಯರ್ ಅಥವಾ ಟೀಚರ್ ಬರಲಾರ. ನಾವು ಕಲಿಯುವ ವಿಜ್ಞಾನ, ಗಣಿತ, ಇತಿಹಾಸ, ವ್ಯಾಕರಣ, ಭೂಗೋಳ ಇವೆಲ್ಲ ಅವರಿಗೆ ತಲೆಕೆಟ್ಟ ನಾಗರಿಕ ಮನುಷ್ಯರ ರಗಳೆ ಎನಿಸಬಹುದು. ಓದು, ಬರಹ, ಲಿಪಿಯೇ ಗೊತ್ತಿರದ ಸಮುದಾಯಕ್ಕೆ ಆಧುನಿಕ ಶಿಕ್ಷಣ ಪದ್ಧತಿಯೇ ಹಾಸ್ಯಾಸ್ಪದವೆನಿಸಬಹುದು. ಕಾನೂನು, ಕೋರ್ಟು, ಅರ್ಥಶಾಸ್ತ್ರ, ಸೈನ್ಯ, ರಾಜ್ಯಶಾಸ್ತ್ರ ಅರ್ಥವಾಗದೇ ಉಳಿಯಬಹುದು. ಔಪಚಾರಿಕ ಶಿಕ್ಷಣದ ಅಗತ್ಯ, ಪ್ರಾಮುಖ್ಯತೆ ತಿಳಿಯಲು ಆ ಸಮುದಾಯಗಳು ಕ್ರಮಿಸಬೇಕಾದ ದೂರ ಇನ್ನೂ ಬಹಳವಿದೆ.

ಹೀಗಿರುವಾಗ ಸಹಜತೆ, ಮುಗ್ಧತೆ ಕಳೆದುಕೊಳ್ಳದೇ ನಾಗರಿಕ ಸಮಾಜದೊಂದಿಗೆ ತಮಗೆ ವಿಲೀನ ಬೇಕೋ ಅಥವಾ ಸ್ವಾಯತ್ತತೆ ಬೇಕೋ ಎಂದು ತಾವೇ ನಿರ್ಧರಿಸುವಷ್ಟು ಆ ಸಮುದಾಯ ಸುಸಜ್ಜಿತವಾಗಲಿ ಎಂದಷ್ಟೇ ಹಾರೈಸಬಹುದಾಗಿದೆ.. 

http://ladaiprakashanabasu.blogspot.in/2013/11/blog-post_29.html

courtesy : ladai prakashan

Wednesday, November 27, 2013

ಆತ್ಮೀಯರೊಡನೆ 'ಅಮತ್ಸರತ್ವ'ದೊಡನೆ ಅಮರತ್ವಕ್ಕೆ.-Vasudeva Sharma




ಎಲ್ಲರ ಬದುಕಿನಲ್ಲೂ ನೂರಾರು ಸಾವಿರಾರು ಜನ ಹಾದು ಹೋಗಿರುತ್ತಾರೆ. ಬದುಕನ್ನು ನದಿಯಂತೆ ಕಲ್ಪಿಸಿಕೊಂಡರೆ, ಆಕಾಶದಿಂದ ಬಿದ್ದ ಹನಿಯೋ ನೆಲದಿಂದ ಜಿನುಗಿದ ಪಸೆಯೋ ಮುಂದೆ ಸಾಗಿದಂತೆ ಅದರೊಡನೆ ಬೆರೆಯುವ ಇತರ ಹನಿಗಳು ಅಸಂಖ್ಯಾತ. ಹನಿಗಳೆಲ್ಲವೂ ಜೊತೆಯಾಗಿ ಹರಿದು ಮಡುವಾಗಿ, ಕೆರೆಯಾಗಿ, ಧಾರೆಯಾಗಿ, ಮುಂದೆ ಸಾಗಿ ಕಡಲನ್ನು ಸೇರುವ ತನಕ ಅದೆಷ್ಟು ಸಂಭ್ರಮ, ವಿರಾಮ, ವೇಗ, ಸರಾಗ, ಹೀಗೆ ಏನೇನೋ. ಎಲ್ಲ ಹನಿಗಳೂ ಕಡಲು ಸೇರದಿರಬಹುದು, ಅಥವಾ ಮತ್ತಲ್ಲೋ ಹೋಗಿ ಮತ್ತೆ ನದಿಯ ಸೇರಬಹುದು. ಜೊತೆಯಾಗಬಹುದು. ಹಿರಿಯರಾದ ಸಮಾಜಕಾರ್ಯ ವಿಜ್ಞಾನಿ ನಮ್ಮ ಗುರುಗಳಾದ ಪ್ರೊ. ಎಚ್.ಎಂ.ಮರುಳಸಿದ್ಧಯ್ಯನವರ ಹೊಸ ಕೃತಿ, “ಆತ್ಮೀಯರು”ವಿನಲ್ಲಿ ಇಂತಹದೊಂದು ಸಂಚಾರಿ ಭಾವ ವ್ಯಕ್ತವಾಗುತ್ತದೆ. ಏಲ್ಲೋ ಆರಂಭವಾಗಿ, ಎಲ್ಲೋ ಸೇರಿ, ಎಲ್ಲೋ ಮುಗಿದಿರುವ ಕೆಲವು ಪಯಣಗಳನ್ನು ನೆನಪಿನ ಮೂಸೆಯಿಂದ ಹೊರತೆಗೆದು ಅನುಸರಣೆಯ ಮರುಪಯಣದ ಅನುಭವವನ್ನು ಎಚ್.ಎಂ.ಎಂ. ನಮ್ಮೆದುರು ಇಟ್ಟಿದ್ದಾರೆ.
ಹುಟ್ಟಿದ ಊರು ಹಿರೇಕುಂಬಳಗುಂಟೆಯಿಂದ, ಬಳ್ಳಾರಿ, ಮೈಸೂರು, ದೆಹಲಿ, ತಮಿಳುನಾಡು, ಗುಲ್ಬರ್ಗಾ, ಧಾರವಾಡ, ಬೆಂಗಳೂರು, ಸ್ವೀಡನ್, ಇಸ್ರೇಲ್, ಅಮೇರಿಕಾ, ಕೆನಡಾ ಹೀಗೆ ಹತ್ತಾರು ಕಡೆ ಓಡಾಡಿರುವ ಎಚ್.ಎಂ.ಎಂ. ಬದಕಿನಲ್ಲಿ ತಮಗೆ ಅನ್ನ ಕೊಟ್ಟವರು, ಶಿಕ್ಷಣ ನೀಡಿದವರು, ಕಲ್ಪನೆಗಳನ್ನು ಹಚ್ಚಿದವರು, ಬೆನ್ನು ತಡವಿದವರು, ತಮ್ಮೊಡನೆ ಹೆಜ್ಜೆ ಹಾಕಿದವರು, ತೊಡರಾದವರು, ಎಲ್ಲರನ್ನೂ ಮುಟ್ಟುವ ಯತ್ನ ಮಾಡಿದ್ದಾರೆ. ಕಾಲದಲ್ಲ ಸಾಕಷ್ಟು ದೂರ ಬಂದ ಮೇಲೂ ಹಿಂದಿನ ಅನುಭವಗಳ ವಿವರಗಳನ್ನು ಹಿಡಿದಿಟ್ಟಿರುವುದು, ವ್ಯಕ್ತಿ ಚಿತ್ರಣದೊಂದಿಗೆ ಚಾರಿತ್ರಿಕ ಸತ್ಯಗಳ ದಾಖಲೆಯಾಗಿದೆ. ಸ್ವಾನುಭವದೊಡನೆ ಸಂಶೋಧನೆಯ ರಸಪಾಕವನ್ನು ನಮ್ಮೆದುರು ಉಣಬಡಿಸಿದ್ದಾರೆ. ಉದಾಹರಣೆಗೆ: ಬೆಂಗಳೂರಿನಲ್ಲಿ ಸಮಾಜಕಾರ್ಯ ಶಿಕ್ಷಣವನ್ನು ಅಧಿಕೃತವಾಗಿ ಆರಂಭಿಸಿದ್ದ ಶ್ರೀಧರನ್ ಮತ್ತು ಅವರ ಪತ್ನಿ ಉಮಾ ಅವರ ಪರಿಚಯ (ಪುಟ 103-107) ಮತ್ತು ಬಳ್ಳಾರಿಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ ಡಾ. ಟಿ. ತಿಪ್ಪೇಸ್ವಾಮಿ ಅವರ ಚಿತ್ರಣ ಮರೆಯಬಾರದ ಚರಿತ್ರೆಯ ನಿರೂಪಣೆ.
'ಆತ್ಮೀಯರು'ವಿನಲ್ಲಿರುವುದು ಒಟ್ಟು 31 ನುಡಿಚಿತ್ರಗಳು. ಆದರೆ, ಪ್ರತಿಯೊಬ್ಬರನ್ನು ಕುರಿತು ನಿರೂಪಣೆ ಮಾಡುವಾಗ ಅವುಗಳಲ್ಲಿ ಬಂದು ಹೋಗುವವರ ಸಂಖ್ಯೆ ಬಹು ದೊಡ್ಡದು. (ನಾನು ಲೆಕ್ಕ ಇಡುವ ಪ್ರಯತ್ನ ಮಾಡಿದೆ, ಸುಮಾರು 200 ಹೆಸರುಗಳನ್ನು ದಾಟುವಾಗ ಲೆಕ್ಕ ತಪ್ಪಿತು. ಕೈಬಿಟ್ಟೆ). ಜೊತೆಗೆ ಆಯಾ ಕಾಲದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಲೋಕವೂ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಉದಾಹರಣೆಗೆ, ಧಾರವಾಡದಲ್ಲಿ ಎಚ್.ಎಂ.ಎಂ. ಸಮಾಜಕಾರ್ಯ ವಿಭಾಗದಲ್ಲಿದ್ದಾಗ, ಅಲ್ಲಿಗೆ ಉಪಕುಲಪತಿಗಳಾಗುವ ಪ್ರೊ.ಜಯಲಕ್ಷಮ್ಮಣ್ಣಿಯವರನ್ನು ಕುರಿತು ಬರೆಯುವಾಗ, ಉಪಕುಲಪತಿಗಳ ನೇಮಕದಲ್ಲಾದ ಬದಲಾವಣೆ, ಮಹಿಳೆಯೊಬ್ಬರು ಉಪಕುಲಪತಿಯಾದದ್ದು, ಅವರ ಮೇಲಿದ್ದ ಒತ್ತಡ, ಡಾ.ಚೆನ್ನವೀರ ಕಣವಿಯರಿಂದ ಸಿಕ್ಕ ಪ್ರೋತ್ಸಾಹ, ರಾಜಕಾರಣಿಗಳ ಪೊಳ್ಳು ಭರವಸೆಗಳು, ಅಂದಿನ ಬರಹಗಾರರು, ಚಿಂತಕರು, ಇದೆಲ್ಲದರ ನಡುವೆ ವಿವಿಗಳ ರಾಜಕೀಯ, ಜಾತಿಗಳ ಮೇಲಾಟ, ಕೀಳಾಟ, ಇದರಿಂದ ಸಾಮಾನ್ಯರ ಮನದ ತೊಳಲಾಟ, ಹೀಗೆ ವಿವಿಧ ರೀತಿಯ ಅನುಭವಗಳನ್ನು ನುಡಿಚಿತ್ರಗಳು ಕಟ್ಟಿಕೊಡುತ್ತವೆ.  
ಒಂದೆಡೆ, ಸಾಹಿತ್ಯದ ವಿವಿಧ ಶೈಲಿಗಳ ನೇರ ನಿರೂಪಣೆಯ ಭಾವವಿದ್ದರೆ, ಗುಪ್ತಗಾಮಿನಿಯಂತೆ ಎಲ್ಲ ನುಡಿಚಿತ್ರಗಳಲ್ಲಿ ಕಂಡುಬರುವುದು ಅವರ ಸಮಾಜಕಾರ್ಯದ ಸಿದ್ಧಾಂತಗಳ ಸರಳ ಪಾಠಗಳು. ಒಬ್ಬ ವ್ಯಕ್ತಿಯ ಕತೆಯೇನೋ ಎಂದು ಕಾಣುವ ಸೇಂಟ್ ಫಿಲೋಮಿನಾ ಕಾಲೇಜಿನ ಗೆಳೆಯ 'ರಾಮಚಂದ್ರನ ಚಿತ್ರ' (ಪುಟ 11-32) ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಪರಿಚಯಿಸುವುದು ಅವನ ಜೀವನ ದರ್ಶನವಾಗಿದೆ. ರಾಮಚಂದ್ರನಂತಹ ಶಕ್ತಿಶಾಲಿ ಕವಿಯನ್ನು ನಮ್ಮಿಂದ ಉಳಿಸಿಕೊಳ್ಳಲಾಗಲಿಲ್ಲವಲ್ಲ, ಅವನ ಸಾವು (1955) ಎಚ್.ಎಂ.ಎಂ ಬದುಕಿನಲ್ಲಿ ಇದ್ದಕ್ಕಿದ್ದ ಹಾಗೆ ಶೂನ್ಯವನ್ನು ಸೃಷ್ಟಿಸಿತಲ್ಲಾ ಎಂದು ಓದುಗರಾದ ನಾವು ಕೊರಗುವಂತಾಗುತ್ತದೆ. ಅದೊಂದು ರೀತಿಯ 'ಕೇಸ್ ವರ್ಕ್' (ಪ್ರಕರಣಾಧ್ಯಯನ) ಜೊತೆಗೆ ಹಲವು ಗೆಳೆಯರ ಸಾಮೂಹಿಕ ಕೆಲಸ ಮತ್ತು ಹೊಸ ಸಮುದಾಯದ ಸೃಷ್ಟಿಯ ಯತ್ನ. 1955ರಲ್ಲೇ ಮುಗಿಯಿತೇನೋ ಎಂದುಕೊಂಡರೆ, ತೀರಾ ಇತ್ತೀಚೆಗೆ 2003ರಲ್ಲಿ ದಿ.ರಾಮಚಂದ್ರರನ್ನು ಕುರಿತು, ಆತ ಬರೆದ ಕವನವೊಂದರ ಸಾಲನ್ನೇ ಹಿಡಿದು, 'ಬಿದ್ದದ್ದು ಗರಿಯಲ್ಲ, ಹಕ್ಕಿಯೇ!' ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ
ಬಂಧುಗಳು, ಗೆಳೆಯರು, ಸಹಪಾಟಿಗಳು, ಪ್ರಾಥಮಿಕ ಶಾಲೆಯಿಂದ ವಿವಿವರೆಗಿನ ಗುರುಗಳು, ಸಹವರ್ತಿಗಳು, ಸಹಚಿಂತಕರು, ರಾಜಕೀಯ ಮುತ್ಸದಿಗಳು, ಸ್ವಾತಂತ್ರ್ಯ ಯೋಧರು, ತಮ್ಮ ವಿದ್ಯಾರ್ಥಿಗಳು, ಎಲ್ಲರನ್ನೂ ಉಲ್ಲೇಖಿಸುತ್ತಾ ಸಾಗುವ ಲೇಖನಗಳ ಸರಮಾಲೆ, ಆತ್ಮ ಚರಿತ್ರೆಯ ನೆರಳನ್ನು ಹಿಡಿದಿದ್ದರೂ, ಎಲ್ಲೂ ತನ್ನನ್ನು ವೈಭವೀಕರಿಸಿಕೊಳ್ಳುವ ಅಥವಾ ತನ್ನನ್ನು ಸಮರ್ಥಿಸಿಕೊಳ್ಳುವ ದನಿ ಕಾಣುವುದಿಲ್ಲ. ಅಲ್ಲಲ್ಲಿ ನಾನು ಅಂದುಕೊಂಡದ್ದು ಸರಿಯಲ್ಲವೇನೋ, ಇಂತಹದನ್ನು ಇಲ್ಲಿ ಕಲಿತೆ, ತಿಳಿದೆ, ಅದು ಸಮಾಜಶಾಸ್ತ್ರದ ಅಂಶ ಎನ್ನುವುದು ಕಂಡುಬರುತ್ತದೆ. ಉದಾಹರಣೆಗೆ, ಗುರು ಡೇವಿಡ್ ಹಾರ್ಸ್ ಬ್ರೋ ಅವರೊಡನೆಯ, ಅಂದಿನ ಕಾಲಕ್ಕೆ ಹೊಸತೂ, ವಿಚಿತ್ರವೂ ಆದ ಸಂಭಾಷನೆ. ಡೇವಿಡ್ ಹಾರ್ಸ್ ಬ್ರೋ ತಮ್ಮ ಪತ್ನಿಯನ್ನು ಪರಿಚಯಿಸಿ, “ಇವರು ನನಗೆ ಎರಡನೇ ಸಂಬಂಧ, ಅವರಿಗೆ ನನ್ನದು ಎರಡನೇ ವಿವಾಹ!” ಎನ್ನುವುದು. ಆಗ ಇನ್ನೂ ಕಾಲೇಜಿಗೆ ಕಾಲಿರಿಸಿದ್ದ ಹುಡುಗ ಎಚ್.ಎಂ.ಎಂ. “ಇದು ಅನೈತಿಕ” ಎಂದು ಪ್ರತಿಕ್ರಿಯಿಸಿದ್ದೂ, ಹಾರ್ಸ್ ಬ್ರೋ, ಕುರಿತು ವಿವರಿಸಿದ್ದು, ಈಗ ಕುರಿತು ಓದುವ ನಮಗೆ ನಮ್ಮ ಮುಂದಿನ ಪೀಳಿಗೆಗೂ ರೋಚಕವಾಗದಿರದು. (ಪುಟ 134-141). ಇನ್ನೊಂದು ಮಗ್ಗುಲಿನಲ್ಲಿ ಸಮಾಜಶಾಸ್ತ್ರ ಮತ್ತು ಸಂಶೋಧನೆಯ ಭಾಷೆ, ಅದಕ್ಕೆ ಬೇಕಾದ ಶೋಧ ಬಿಚ್ಚಿಕೊಳ್ಳುವುದು ಬಸವರಾಜ ಕಟ್ಟೀಮನಿ (ಪುಟ 33-47); ಶಬ್ದಗಳೊಡನೆಯ ಸರಸ/ಆಟ, ಅವರ ಆಳವಾದ ಸಾಹಿತ್ಯಾಧ್ಯಯನ ಕಾಣುವುದು ಡಾ. ಚೆನ್ನವೀರ ಕಣವಿ (ಪುಟ 50-60); ಸಾಧಕರನ್ನು ತುಂಬುಹೃದಯದಿಂದ ಗುರುತಿಸುವ ಭಾವ ಡಾ. ಚಿದಾನಂದ ಮೂರ್ತಿ (ಪುಟ 61-65) ಮತ್ತು ಎಚ್.ಎಸ್. ದೊರೆಸ್ವಾಮಿ (ಪುಟ 90-94) ಅವರನ್ನು ಕುರಿತ ವಿವರಣೆ.
ಸಮಾಜಕಾರ್ಯ ಶಿಕ್ಷಣದ ಪ್ರಯಕ್ತ ಒಂದು ತಿಂಗಳು ನಿರ್ದಿಷ್ಟ ಸಂಸ್ಥೆ, ಕ್ಷೇತ್ರದಲ್ಲಿ ದುಡಿದು ಅನುಭವ ಗಳಿಸುವುದು ಕಡ್ಡಾಯ. ಎಚ್.ಎಂ.ಎಂ. ಅವರ ವಿದ್ಯಾರ್ಥಿಯಾದ ನನಗೆ ಅವರು ಹೇಳಿದ್ದು ಹಳ್ಳಿಯೊಂದರಲ್ಲಿ ಕ್ಷೇತ್ರಾನುಭವ ಪಡಿ ಎಂದು (1989). ನಿಜ ಹೇಳುತ್ತೇನೆ, ಗೊಣಗಿಕೊಂಡೇ ಹೋದೆ. ಆದರೆ, ಸಾಕಷ್ಟು ಧನಾತ್ಮಕ ಅನುಭವಗಳನ್ನು ಹೊಂದಿದೆ. ಒಂದು ತಿಂಗಳು ಅತ್ತತ್ತ ಹೋಗೆಂದರೆ, ಹೆಣಗಾಡಿದವನು ನಾನು. ಆದರೆ, ಎಚ್.ಎಂ.ಎಂ. ಕನ್ನಡ ಅಧ್ಯಯನ ಮಾಡುವ ಉತ್ಸಾಹದಲ್ಲಿದ್ದಾಗ, “ಬೇಡ, ಸಮಾಜಶಾಸ್ತ್ರ/ಸೋಷಿಯಾಲಜಿ ಓದು, ಅದಾದ ನಂತರ, ಸಮಾಜಕಾರ್ಯ ಓದಲು ದೆಹಲಿಗೆ ಹೋಗು” ಎಂದು ಆದೇಶಿಸಿದವರು ಡಾ.ಬಿ.ಎಲ್. ಮಂಜುನಾಥ. ಹೀಗೊಂದು ಬದುಕಿನ ತಿರುವು ನೀಡಿದವರನ್ನು ಕುರಿತು ಎಚ್.ಎಂ.ಎಂ. ದಾಖಲಿಸುವುದು ನಿಜಕ್ಕೂ ರೋಚಕ. ಹೀಗೆ ಎಚ್.ಎಂ.ಎಂ. ಎಂಬ ನದಿಗೆ ತಿರುವು ನೀಡಿದ ಡಾ. ಮಂಜುನಾಥ್ ರವರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು. (ಪುಟ 184-190).
ಹಿಂದಿನ ಎಷ್ಟೋ ಸಂಗತಿಗಳಿಗೆ ಇಂದಿನ ಕೊಂಡಿ ಹಾಕುವ ಹೊಸ ಬರಹದ ಶೈಲಿ 'ಆತ್ಮೀಯರು'ವಿನಲ್ಲಿ ಕಾಣುತ್ತದೆ. ಭೂತಕಾಲದ ವಿಚಾರಲಹರಿಯಲ್ಲಿ ವರ್ತಮಾನದ ಮಾತು, ಭವಿಷ್ಯದಲ್ಲಿ ಹೀಗಾದೀತು ಎನ್ನುವ ಪ್ರವಾದಿಯ ಮಾತು ಸಮಾಜಕಾರ್ಯದ ಹಿನ್ನೆಲೆಯಲ್ಲಿ ಬಹಳ ಪ್ರಮುಖವಾಗುತ್ತದೆ. ಎಲ್ಲ ನೇರ ನಿರೂಪಣೆಯಲ್ಲಿ ಎಲ್ಲದರಲ್ಲೂ, ಎಲ್ಲರಲ್ಲೂ ಧನಾತ್ಮಕ ಭಾವನೆ ತೋರುವ ಎಚ್.ಎಂ.ಎಂ. ಬಗ್ಗೆ ಅಚ್ಚರಿಯೆನಿಸುತ್ತದೆ. ಆದರೂ, ಹೆಕ್ಕಿ ಹೆಕ್ಕಿ ಹುಡುಕಿದರೆ, ಒಂದೆರೆಡು ವಿಷಾದವೂ ಎಡತಾಕುತ್ತದೆ. ತಮ್ಮ ಸ್ವಸ್ತಿಯೊಂದಿಗೆ ನಡೆಸಿದೆ ಸಾಧನೆಯ, 'ನಿರ್ಮಲ ಕರ್ನಾಟಕ' ಕಲ್ಪನೆಯನ್ನು ಸರ್ಕಾರದಲ್ಲಿದ್ದ, ಎಂ.ಪಿ. ಪ್ರಕಾಶ್ ರವರು ತಮ್ಮ ಕಿರೀಟಕ್ಕೆ ಗರಿ ಸಿಕ್ಕಿಸಿಕೊಂಡಾಗ, ಆಗಲಿ ಬಿಡು, ಕರ್ನಾಟಕಕ್ಕೆ ಸಿಕ್ಕ ಉಡುಗೊರೆ ಇದು ಎಂದು ಸಮಾಧಾನ ಮಾಡಿಕೊಂಡಿದ್ದಾರೆ ಎಚ್.ಎಂ.ಎಂ. (ಪುಟ ) ಸಹಪ್ರಾಧ್ಯಾಪಕರು ಕುಹಕವಾಡಿದಾಗ, ನಿಮಗೆ ಡಾಕ್ಟರೇಟ್ ಇಲ್ಲದೆ ವಿಭಾಗ ಮುಖ್ಯಸ್ಥರು ಎಂದು ಹೇಳುತ್ತಾರೆ ಎಂದಾಗ, ಹೌದು. ಅವರು ಹೇಳಿದ್ದು ನಿಜ ಎಂದು ಯಾರ ಮುಖ ಮುರಿಯದೆ ಒಪ್ಪಿಕೊಂಡಿದ್ದಾರೆ. (ಪುಟ  ). ಸಮಾಜವನ್ನು ಕುರಿತು ಅವರ ಕಾಳಜಿ ವ್ಯಕ್ತವಾಗುವುದು,  “ಬಂಧುಗಳಲ್ಲೂ ಹಳೆಯ ಬಾಂಧವ್ಯದ ಬೆಸುಗೆ ಸಡಿಲುತ್ತಾ ಇದ್ದು, ಏನೋ ನಾಟಕೀಯತೆಯು ಪ್ರವೇಶಿಸಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸುತ್ತಲಿದೆ ಎನ್ನಿಸುತ್ತಿದೆ” ಎನ್ನುವ ಮಾತುಗಳು (ಪುಟ 83).
ಬರವಣಿಗೆ ಮತ್ತು ನಿರೂಪಣೆಯ ವಿವಿಧ ತಂತ್ರಗಳನ್ನು (ಪ್ರಾಯಶಃ ಅವರಿಗರಿವಿಲ್ಲದೆ) ಇಲ್ಲಿನ ವಿವಿಧ ನುಡಿಚಿತ್ರಗಳ ಕತೆಗಳಲ್ಲಿ ಎಚ್.ಎಂ.ಎಂ. ಬಹಳ ಸಮರ್ಥವಾಗಿ ಬಳಸಿದ್ದಾರೆ. ಒಂದೆಡೆ ನೇರ ನಿರೂಪಣೆ, ಪ್ರಶ್ನೋತ್ತರ, ವಿಶ್ಲೇಷಣೆ, ಸಂಭಾಷಣೆ ಇತ್ಯಾದಿ. ಬಹಳ ಸೊಗಸಾಗಿ ಎದ್ದು ಕಾಣುವುದು ಫ್ಲಾಷ್ ಬ್ಯಾಕ್ ತಂತ್ರ (ರಾಮಚಂದ್ರನ ಚಿತ್ರ, ಡಾ. ಸಿದ್ಧರಾಮಣ್ಣ, ಪ್ರೊ.ಜಯಲಕ್ಷಮ್ಮಣ್ಣಿ, ಬಸಕ್ಕ, ಇತ್ಯಾದಿ). ಅಲ್ಲಲ್ಲಿ ಚೇತೋಹಾರಿಯಾಗಿ ಬರುವ ಹಾಸ್ಯ, 'ದ್ರೋಣಾಚಾರ್ಯ ಪದವಿ ಒಪ್ಪಿಕೊಳ್ಳುತ್ತೇನೆ ಆದರೆ, ಯಾರ ಬೆರಳನ್ನೂ ಕೇಳುವುದಿಲ್ಲ’ ಎಂದ ಪ್ರೊ. ವಾಸುದೇವ ಮೂರ್ತಿಗಳ ಮಾತು.
ಕೆಲವು ವರ್ಷಗಳ ಹಿಂದೆ ಪ್ರೊ. ಎಚ್.ಎಂ.ಎಂ. ಅವರ ಬದುಕನ್ನು ಕುರಿತು ಪುಸ್ತಕ ಮಾಡುವ ಉತ್ಸಾಹದಿಂದ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದೆ. ಅವರಿಂದ, ಇತರರಿಂದ ಎಚ್.ಎಂ.ಎಂ. ಅವರ ಬದುಕನ್ನು ಕುರಿತು ಅದೆಷ್ಟೊ ಸಂಗತಿಗಳು, ವಿಚಾರಗಳನ್ನು ಕೇಳಿದ್ದೆ. ಅಲ್ಲಿ ದಾಖಲಿಸಲಾಗದಿದ್ದದ್ದು, ಅಥವಾ ಬಹಳ ಚುಟುಕಾಗಿ ಹೇಳಿದ್ದು ಇಲ್ಲಿ ವಿವರವಾಗಿದೆ. ಎಚ್.ಎಂ.ಎಂ. ಅವರಿಗಿರುವ ಜನರನ್ನು ಕುರಿತು ಪ್ರೀತಿ, ಅಭಿಮಾನ, ಕೃತಜ್ಞತೆ, ಅವರಿಂದ ಕಂಡುಕೊಂಡದ್ದು, ತೆರೆದುಕೊಂಡದ್ದು ಎಲ್ಲವೂ ಇಲ್ಲಿ ಹರಿದು ಬಂದಿದೆ. ಇಂತಹದೊಂದು ಅಪೂರ್ವ ಕೃತಿಯನ್ನು ನಮಗೆ ಕೊಟ್ಟಿರುವ ಎಚ್.ಎಂ.ಎಂ. ಅವರಿಗೆ ಮತ್ತು ಪುಸ್ತಕ ಪ್ರಕಟನೆಗೆ ನೆರವಾಗಿರುವ ಎಲ್ಲರೂ, ಮತ್ತು ಬಹಳ ಮುಖ್ಯವಾಗಿ ಗೆಳೆಯ ರಮೇಶ್ ಮತ್ತವರ ಸಂಗಡಿಗರ 'ನಿರುತ ಪ್ರಕಾಶನ'ಕ್ಕೆ ಕೃತಜ್ಞತೆ ಹೇಳಬೇಕೆಂದರೆ ನಾವೆಲ್ಲಾ ಪುಸ್ತಕ ಕೊಂಡು ಓದಬೇಕು.

ಮುಗಿಸುವ ಮುನ್ನ


ಎಚ್.ಎಂ.ಎಂ. ಅವರ ಅನುಭವ, ನೆನಪಿನ ಮೂಸೆಯಲ್ಲಿ ಇನ್ನೂ ಎಷ್ಟು ಜನ ಹೊರಗಿಣಕಲು ಕಾದಿದ್ದಾರೋ ಗೊತ್ತಿಲ್ಲ. ಮೇಷ್ಟ್ರು ಇನ್ನೂ ಬರೆಯಬೇಕು, ಬರೆಸಬೇಕು.  ಮೇಷ್ಟ್ರು ಮಾಡಿರುವ ಕನ್ನಡ ಪೂಜೆಯಲ್ಲಿ ಬಂದಿರುವ ವ್ಯಕ್ತಿಗಳನ್ನು, ಅವರ ವಿವರಣೆಗಳನ್ನು ಓದಿದಾಗ ಸ್ವಲ್ಪ ಹೊಟ್ಟೆ ಕಿಚ್ಚಾದರೆ ಆಶ್ಚರ್ಯವಿಲ್ಲ. ನಾವೂ ಸೇರಿದ್ದರೆ ಅಂದುಕೊಂಡರೆ ತಪ್ಪೇನಿಲ್ಲ!

Vasudeva Sharma 
Executive Director, CRT-Child Rights Trust,
4606, 6th floor, High Point IV, Palace Road, Bangalore 560 001

Off. 080- 41138285 Res. 080 26322513 Mob. 09448472513