Sunday, December 1, 2013

ಶಾಲಾ ಜೋಡಣೆ ಯೋಜನೆಯ ಪರಿಣಾಮಗಳು, ಸವಾಲುಗಳು ಮತ್ತು ಪರಿಹಾರಗಳು


            56ನೆಯ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಬಣೆಯಿಂದ ಕರ್ನಾಟಕದ ಜನತೆ ಆಚರಣೆ ಮಾಡಿಕೊಂಡಿದ್ದರೆ ಇದರ ಜೊತೆಗೆ ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕಂಬಾರರಿಗೆ ಸನ್ಮಾನ ಸಮಾರಂಭಗಳು ಆಚರಿಸುತ್ತಿರುವ ಸಂತೋಷದ ಸಮಯದಲ್ಲಿ, ಕರ್ನಾಟಕ ಸರ್ಕಾರವು ಬಹಳ ಮಹತ್ತರವಾದ ಬಹುಮಾನವನ್ನು ಕನ್ನಡ ಜನತೆಗೆ ನೀಡಿದೆ. ಅದೇನೆಂದರೆ 2012 ವರ್ಷಾಂತ್ಯಕ್ಕೆ 3178 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಆದೇಶ ಮಾಡಿದೆ. ಇದಕ್ಕೆ ವಿರೋಧವಾಗಿ 56ನೆಯ ಕನ್ನಡ ರಾಜ್ಯೋತ್ಸವದ ಸಮಾರಂಭಗಳಲ್ಲಿ ಸಾಮಾಜಿಕ ಚಿಂತಕರು, ಶಿಕ್ಷಣತಜ್ಞರು, ಕನ್ನಡ ಪರ ಹೋರಾಟಗಾರರು, ಸಮಾಜಕಾರ್ಯಕರ್ತರು ಮುಚ್ಚಲಿರುವ ಶಾಲೆಗಳ ಬಗ್ಗೆ ವಿರೋದ ವ್ಯಕ್ತಪಡಿಸಿದರೆ ವಿನಃ ಏಕೆ ಮುಚ್ಚುತ್ತಿದ್ದಾರೆ? ಅದರ ಪರಿಣಾಮಗಳೇನು? ಯಾರ ಮೇಲೆ ಹೊರೆ ಬೀಳುತ್ತದೆ? ಇದರ ಹಿಂದಿನ ಹುನ್ನಾರವೇನು? ಮಕ್ಕಳ ಹಾಗೂ ಕುಟುಂಬಗಳ ಮೇಲೆ ಆಗುವ ಮನೋ-ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೇನು? ಎಂಬ ಹಲವಾರು ಪ್ರಶ್ನೆಗಳಿಗೆ ಯಾರೂ ಉತ್ತರ ನೀಡದಿದ್ದುದು ವಿಪರ್ಯಾಸವೇ ಸರಿ.

            ಸರ್ಕಾರವು 1 ರಿಂದ 5 ಮಕ್ಕಳಿರುವ 595 ಪ್ರಾಥಮಿಕ ಶಾಲೆಗಳನ್ನು  6 ರಿಂದ 10 ಮಕ್ಕಳಿರುವ 1,500 ಮಾಧ್ಯಮಿಕ ಶಾಲೆಗಳನ್ನು ಮುಚ್ಚಲು ಆದೇಶ ಮಾಡಿದ್ದು, ಅಲ್ಲಿರುವ ಮಕ್ಕಳಿಗೆ ಪರ್ಯಾಯ ವ್ಯವಸ್ಧೆ ಅಂದರೆ ಮಕ್ಕಳನ್ನು ಸದರಿ ಹತ್ತಿರದ ಶಾಲೆಗೆ ಸೇರಿಸುವ ಶಾಲಾ ಜೋಡಣೆ ಯೋಜನೆ ಕೈಗೊಳ್ಳಲು ಜಿಲ್ಲಾ ಮಟ್ಟದ ಜಿಲ್ಲಾ ಪಂಚಾಯ್ತಿ ಸಿ.. ನೇತೃತ್ವದ ಸಮಿತಿಗೆ ಸೂಚಿಸಿದೆ. ಮೇಲಿನ ಸರ್ಕಾರದ ಆದೇಶ ಮತ್ತು ಮಾಹಿತಿಯ ಪ್ರಕಾರ ಹಳ್ಳಿಗಳಲ್ಲಿ ಮಕ್ಕಳಿಲ್ಲವೆಂಬುದಲ್ಲವಂತೆ, ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಾಲಾತಿ ಕಡಿಮೆ ಆಗುತ್ತಿದೆ ಎಂಬುದು. ಸರಕಾರಿ ಶಾಲೆಗಳಲ್ಲಿ ದಾಖಾಲಾತಿ ಕಡಿಮೆಯಾಗಲು ಕಾರಣ ಮೂಲಸೌಕರ್ಯದ ಕೊರತೆ ಕಾಡುತ್ತಿರುವುದರಿಂದ ಮತ್ತು ಆಂಗ್ಲಭಾಷೆಯ ವ್ಯಾಮೋಹದಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಮುಖ್ಯವಾಗಿ ಉನ್ನತ ಶಿಕ್ಷಣ, ಉತ್ತಮ ಉದ್ಯೋಗ ಖಾತರಿಯ ದೃಷ್ಠಿಯಿಂದ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ದೊರೆಯಲೆಂದು ಭಾವಿಸುವುದು ತಪ್ಪೇನಲ್ಲ ಬಿಡಿ.

            ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿ ನಿಂತ್ತಿವೆ-ನಿಲ್ಲುತ್ತಿವೆ, ಅದಕ್ಕೆ 'ಕಾನ್ವೆಂಟ್' ಎಂಬ ಆಂಗ್ಲಭಾಷೆಯ ನಾಮಧೇಯ ಇರುವುದರಿಂದ ಇದರ ವ್ಯಾಮೋಹಕ್ಕೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರೂ ಬಲಿಯಾಗಿದ್ದು ಅವರ ಮಕ್ಕಳನ್ನು ಕಾನ್ವೆಂಟ್ ಎಂಬ ಖಾಸಗಿ ಶಾಲೆಯ ಸಿಂಹದ ಬಾಯಿಗೆ ಸೇರಲು ಇಚ್ಛೀಸುತ್ತಿದ್ದಾರೆ. ಶಾಲೆಗಳ ಸೌಲಭ್ಯಗಳು ಮತ್ತು ಬೋಧನೆಯು ಅಷ್ಟಕ್ಕಷ್ಟೆ. ಆದರೂ ಇದರ ಹಿಂದೆ ಸರ್ಕಾರದ ಕೈವಾಡವು ಸಹ ಇದೆ ಎಂಬುದನ್ನು ನಾವು ಅರಿಯಲು ಬೇಕು. ಅದೇನೆಂದರೆ ಸರ್ಕಾರಿ ಶಾಲೆ ತೆರೆದಂತೆಲ್ಲ ಶಾಲೆಗೆ ಒಬ್ಬ ಶಿಕ್ಷಕನನ್ನು ನೇಮಕ ಮಾಡಬೇಕು ಮತ್ತು ಶಾಲೆಗೆ ಮೂಲ ಸೌಕರ್ಯ ಮತ್ತು ಸಲಕರಣೆಗಳನ್ನು ನೀಡಬೇಕು ಅದೇ ಖಾಸಗೀಕರಣ ಮಾಡಿದಾಗ ಸರ್ಕಾರಕ್ಕೆ ಯಾವುದೇ ಹೊರೆ ಬೀಳದೆ ಎಲ್ಲಾ ವಿಷಯಗಳನ್ನು ಖಾಸಗಿಯವರೇ ನೋಡಿಕೊಂಡು ಸರ್ಕಾರಕ್ಕೆ ಇಂತಿಷ್ಟು ಎಂಬ ಹಣವನ್ನು ಪರವಾನಗಿ ಮತ್ತು ತೆರಿಗೆ ರೂಪದಲ್ಲಿ ನೀಡುತಿರುತ್ತಾರೆ. ಆಗ ಸರ್ಕಾರಕ್ಕೆ ಸಾರ್ವಜನಿಕರಿಂದ ಯಾವುದೇ ಹೋರಾಟ, ಧರಣಿಗಳ ತೊಂದರೆಗಳಿಲ್ಲದೆ, ಸರ್ಕಾರದ (ರಾಜಕೀಯ ವ್ಯಕ್ತಿಗಳ) ಬೊಕ್ಕಸಕ್ಕೆ ಹಣ ಸಂದಾಯವಾಗುವುದರಲ್ಲಿ ಅನುಮಾನವೇ ಇಲ್ಲ. ಇದರ ಜೊತೆಯಲ್ಲಿಯೇ ನಿರುದ್ಯೋಗಕ್ಕೆ ದಾರಿಯನ್ನು ಮಾಡಿಕೊಡುತ್ತಾರೆ ಏಕೆಂದರೆ ಖಾಸಗೀಕರಣ ಮಾಡಿದ ನಂತರ ಖಾಸಗಿಯವರು ಅವರ ಶಾಲೆಗಳಲ್ಲಿ ಅವರ ಬಂಧುಗಳನ್ನು ಅವರದೇ ಜಾತಿ/ಧರ್ಮದವರನ್ನು ನೇಮಕ ಮಾಡಿಕೊಂಡು ಪ್ರತಿಭಾವಂತರಿಗೆ ಮತ್ತು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ನಿರಾಸೆ ಉಂಟುಮಾಡಿ ನಿರುದ್ಯೋಗಿಗಳನ್ನಾಗಿ ಮಾಡುವುದು ಸರ್ಕಾರದ ಸಾಧನೆ ಅಥವಾ ಹುನ್ನಾರವೇ ಇರಬೇಕು. ಸರ್ಕಾರಿ ಶಾಲೆಯನ್ನು ಮುಚ್ಚಿದನಂತರ ಮಕ್ಕಳನ್ನು ಶಾಲಾ ಜೋಡಣೆ ಯೋಜನೆ ಮುಖಾಂತರ ಸದರಿ ಶಾಲೆಗಳಿಗೆ ದಾಖಾಲಿಸುವುದು, ಇದರ ಹುನ್ನಾರವೇ ಶಾಲಾ ಮುಚ್ಚುವುದು ಮತ್ತು ಖಾಸಗೀಕರಣಕ್ಕೆ ಕೈಚಾಚುವುದು ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ ಇಂದಿನ ಆಧುನಿಕ ಮತ್ತು ರಾಸಾಯನಿಕ ಆಹಾರ ಪದ್ಧತಿಯಲ್ಲಿ ಒಬ್ಬ ಯುವಕ ಒಂದು ಕಿ.ಮೀ.ನಡೆದಾಡಿದರೆ ನಿಶ್ಯಕ್ತಿಗೊಳಗಾಗಿ ಆರೋಗ್ಯ ಸುಧಾರಿಸಿಕೊಳ್ಳುವಂತಹ ಸ್ಥಿತಿ ಇರುವಾಗ ಮಕ್ಕಳು ದಿನಾಲು ದೂರದ ಶಾಲೆಗೆ ಹೋಗಿಬರುವುದಾದರೆ ಮಗುವಿನ ಮುಂದಿನ ಆರೋಗ್ಯದ ಪರಿಣಾಮವೇನು? ಅಷ್ಟೇ ಅಲ್ಲದೇ ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಮನೆಕೆಲಸ (Home Work) ಮಗು ಮಾಡುವುದಾದರು ಹೇಗೆ? ಏಕೆಂದರೆ ಮಗು ದೂರದಿಂದ ನಡೆದುಕೊಂಡು ಬಂದು ಸುಸ್ತಾಗಿರುತ್ತದೆ, ಆಟವಾಡುವ ಹಂಬಲ ಇದ್ಯಾವುದಕ್ಕು ವೇಳೆ ಎಂಬುದು ಇರುವುದಿಲ್ಲ ಇದೆಲ್ಲದರ ನಡುವೆ ಪೋಷಕರು ಹೇಳುವ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡಬೇಕು. ಇದರಿಂದ ಮಕ್ಕಳ ಆಸೆಗಳಿಗೆ ಸುನಾಮಿ ಬಡಿದಂತೆಯೇ ಸರಿ. ಯಾವ ರೀತಿ ಮಕ್ಕಳ ಮೇಲೆ ಮನೋ-ಸಾಮಾಜಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ ಎಂಬುದನ್ನು ಯಾರೂ ಯೋಚಿಸಲಾರರು.

            ಇಷ್ಟಕ್ಕೂ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದಲ್ಲ ಕೇಂದ್ರ ಸರ್ಕಾರದಿಂದ ಸುಮಾರು ಸಾವಿರಾರು ಕೋಟಿ ಅನುದಾನ ದೊರೆಯುತ್ತಿದೆ. 2010-11ನೆ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನದಡಿ ರಾಜ್ಯಕ್ಕೆ 1268 ಕೋಟಿ ರೂಪಾಯಿ ಮಂಜೂರಾಗಿದೆ. ಶಿಕ್ಷಕರಿಗೆ ತರಬೇತಿ, ಪೀಠೋಪಕರಣಗಳು, ಶಿಕ್ಷಕರ ಸಂಬಳ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಬಹುದು. ಇಂತಹ ಸೌಲಭ್ಯಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಎಷ್ಟು ಸರಿ? ರಾಜ್ಯ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೆ ಸಾಲಿನ ಬಜೆಟ್ ನಲ್ಲಿ 7,700 ಕೋಟಿ, ಅಂದರೆ ಒಟ್ಟು ಬಜೆಟ್ನ ಶೇ.15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ' ಹುಳುಕು ತನ್ನ ಮುಖಕ್ಕೇ ರಾಚುತ್ತದೆ. ಇಷ್ಟಕ್ಕೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಯಾರು? ತೀರ ಬಡತನದಲ್ಲಿರುವ, ಹಿಂದುಳಿದಿರುವ ಮತ್ತು ದಲಿತ ಮಕ್ಕಳು, ಕರ್ನಾಟಕ ಸಮೃದ್ಧವಾದ ರಾಜ್ಯ ಯಾವುದೇ ಸಮಸ್ಯೆ ಇಲ್ಲವೆಂದು ಭಾಷಣ ಬೀಗಿಕೊಂಡು ತಮ್ಮ ಪಕ್ಷ ಮತ್ತು ಕುರ್ಚಿ ಉಳಿಸಿಕೊಳ್ಳಲು ಹೋರಾಡುವ ನಗುಮುಖದ ಮುಖ್ಯಮಂತ್ರಿಗಳು ನೀಡುತ್ತಿರುವ ಕೊಡುಗೆ ಅಪಾರ (ದುರಂತ).

            ಮೂರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. 2008-09ನೇ ಸಾಲಿನಲ್ಲಿ 1,74,541 ಮಕ್ಕಳು ದಾಖಲಾಗಿದ್ದು, 2009-10ನೇ ಸಾಲಿಗೆ ಮಕ್ಕಳ ಸಂಖ್ಯೆ 1,55,080 ಇತ್ತು. 2010-11ನೇ ಸಾಲಿನಲ್ಲಿ ಮಕ್ಕಳ ಸಂಖ್ಯೆ 1,41,475ಕ್ಕೆ ಕುಸಿದಿದೆ. ಮೂರು ವರ್ಷಗಳಲ್ಲಿ ಮಕ್ಕಳ ಸಂಖ್ಯೆಯನ್ನು ಒಟ್ಟು 33,065 ಕಡಿಮೆಯಾಗಿದೆ ಇದಕೆಲ್ಲ ಸರಕಾರವೇ ಹೊಣೆ. ಇದಷ್ಟೇ ಅಲ್ಲದೆ ಡಿಸ್ಟ್ರಿಕ್ಟ್ ಇನ್ಫರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ (District Information System For Education-DISE) ಡೈಸ್' ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿಆಂಶಗಳು ಕಾಣಸಿಗುತ್ತವೆ. 2009-10ನೆಯ ಸಾಲಿನ ಅಧ್ಯಯನದಂತೆ 46,288 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದಾರೆ, 11.884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣವೆಂದರೆ, ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ,ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆ' ಗಾಗಿ ಅಲ್ಲದೇ ಲಾಭ'ಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದಾರೆ, ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪ ಮಾಡಲೇ ಬೇಕು ಖಾಸಗಿ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿದರು. ಬೋಧನಾ ತರಬೇತಿ ಪಡೆಯದ ಇಂಗ್ಲಿಷನ್ನು ಚೆನ್ನಾಗಿ ಬಲ್ಲ ಶಿಕ್ಷಕರೆ ಹೆಚ್ಚು, ಇವರು ಯಾವ ಮಟ್ಟದಲ್ಲಿ ಮಕ್ಕಳಿಗೆ ಅಭಿವೃದ್ಧಿ ಶೀಲ ಸಮಾಜವನ್ನು ತೋರಿಸಿಕೊಡವರು ದೇವರೆ ಬಲ್ಲ. 2007-08 ಡೈಸ್ (DIES) ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5,724 ಖಾಸಗಿ ಶಾಲೆಗಳಲ್ಲಿ 7,37,017 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲ ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ಮತ್ತು ಆಂಗ್ಲಮಾಧ್ಯಮ ಶಿಕ್ಷಣ ನೀಡುವ ಮನಸ್ಸು ಸರಕಾರಕ್ಕಿಲ್ಲವಷ್ಟೇ.

            ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರಕಾರಕ್ಕೆ ವರ್ಷಕ್ಕೆ 4000-5000ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೊಸೀಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಷನ್ ಮತ್ತಿತರ ಇಪ್ಪತ್ತು ಖಾಸಗಿ ಸಂಸ್ಧೆ-ವ್ಯಕ್ತಿಗಳು ಕರ್ನಾಟಕದ ಸರಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ರೀತಿಯಲ್ಲಿ ಸರಕಾರ ಈಗಾಗಲೇ ಸರಕಾರಿ ಶಾಲೆಗಳನ್ನು ಮುಚ್ಚಿ ಸದ್ದಿಲ್ಲದೆ ಖಾಸಗಿಯವರಿಗೆ' `ದತ್ತು' ನೀಡಿ ಆಗಿದೆ!

            ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರಕಾರ  2009 ರಲ್ಲೇ ರೂಪಿಸಿದ ಶಿಕ್ಷಣ ಹಕ್ಕು ಕಾಯಿದೆ' ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗೀಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು' ನೀಡಿಕೊಂಡಿರುವ ರಾಜ್ಯ ಸರಕಾರ ಕಾಯಿದೆಯನ್ನು ಆಳವಡಿಸಿಕೊಳ್ಳುವುದಕ್ಕೆ ಮೀನ ಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದೆ. ಇದರಿಂದ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ. ಶಾಲೆಗಳಿಗೆ ಮೂಲಸೌಲಭ್ಯಗಳನ್ನು ನೀಡದೆ ಉತ್ತಮ ಬೋಧನೆಯನ್ನು ಸಹ ನೀಡದೆ ಶಾಲೆಗಳನ್ನು ಮುಚ್ಚಿ ಮಕ್ಕಳ ಭವಿಷ್ಯದ ಮೇಲೆ ಆಟವಾಡುವ ಸರಕಾರಗಳು ಇದ್ದರೆಷ್ಟು! ಹೋದರೆಷ್ಟೂ? ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ನಾಯಕರೇ ಇಲ್ಲದಂತಾಗಿದೆ ಸಮಾಜ, ಹೌದು ಪೋಷಕರಿಗೆ ತಮ್ಮ ಮಕ್ಕಳು  ಭವಿಷ್ಯದಲ್ಲಿ ಒಳ್ಳೆಯ ವೃತ್ತಿಯಲ್ಲಿರಬೇಕು, ಉತ್ತಮ ಸಂಬಳ ಪಡೆಯಬೇಕು. ಆಂಗ್ಲಭಾಷೆಯಲ್ಲಿ ಮಾತಾನಾಡಬೇಕೆಂದು ಎಲ್ಲಾ ಗ್ರಾಮೀಣ ಭಾಗದ ಪೋಷಕರು ಇಂದಿನ ಆಧುನಿಕ ತಾಂತ್ರಿಕ ಯುಗದಲ್ಲಿ ಇರುವ ಆಶಯ ಮತ್ತು ಹಂಬಲ, ಅದನ್ನು ನಿಗಿಸಲು ಯೋಜನೆಗಳನ್ನು ತಯಾರಿಸುವ ಬದಲು ಮುಚ್ಚಲು ಹೊರಟಿರುವುದು ಎಷ್ಟು ಸರಿ? ಇತ್ತೀಚಿನ ದಿನಗಳಲ್ಲಿ ಆಂಗ್ಲಭಾಷೆ ಮಾತಾನಾಡುವವರು ಶ್ರೀಮಂತರು, ಮೇಲ್ಪರ್ಗದವರು ಎಂಬ ನಂಬಿಕೆ ಗ್ರಾಮೀಣ ಭಾಗದ ಜನರದ್ದು, ಶ್ರೀಮಂತಿಕೆ , ಮೇಲಂತಸ್ತಿಕೆ ಗ್ರಾಮೀಣ ಬಡಜನರಿಗೆ, ದೀನದಲಿತರಿಗೆ, ಹಿಂದುಳಿದವರಿಗೆ ಬೇಡವೆನ್ನುವ ಹುನ್ನಾರವೇ? ಸರ್ಕಾರಗಳು ಇವೆಲ್ಲವುಗಳನ್ನು ಗಮನದಲ್ಲಿಟ್ಟು ಕೊಂಡು ಕೆಲವೊಂದು ಸುಧಾರಣೆ ಕಾನೂನು, ನೀತಿ-ನಿಯಮಗಳನ್ನು ಸಾರ್ವಜನಿಕರಿಗೆ ಮತ್ತು ಕನ್ನಡ ಜನತೆಗೆ ಮುಖ್ಯವಾಗಿ ಗ್ರಾಮೀಣ ಭಾಗದ ಬಡಜನರಿಗಾಗಿ ಜಾರಿಗೆ ತಂದರೆ ಒಳ್ಳೆಯದಾಗುತ್ತದೆ ಅವುಗಳೆಂದರೆ:

            ಸರಕಾರವು ಇತ್ತೀಚೆಗೆ ಕೆಲವೊಂದು ಪತ್ರಿಕೆಗಳಲ್ಲಿ 6ನೆಯ ತರಗತಿಯಿಂದ ಆಂಗ್ಲಮಾಧ್ಯಮವನ್ನು ಸರಕಾರಿ ಶಾಲೆಗಳಲ್ಲಿ ತೆರೆಯುವುದಾಗಿ ಭರವಸೆಯನ್ನು ನೀಡಿದೆ, ಆದರೆ ಈಗಾಗಲೇ ಸರ್ಕಾರದ ಅನುದಾನದಲ್ಲಿರುವ ನವೋದಯ, ಮುರಾರ್ಜಿದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆಂಗ್ಲ ಮಾಧ್ಯಮ ಶಾಲೆಗಳು ನೀಡಿರುವ ಕೊಡುಗೆಯೇನು? ಅಲ್ಲಿಂದ ವ್ಯಾಸಂಗ ಮಾಡಿಬಂದಿರುವ ಮಕ್ಕಳು ಆಂಗ್ಲಭಾಷೆಯಲ್ಲಿ ಪ್ರವೀಣರಾಗಿದ್ದಾರೆಯೇ? ಎಂಬುದನ್ನು ಗಮನಿಸಿದರೆ ಉತ್ತರವೂ ಇಲ್ಲಬಿಡಿ, ಸತ್ಯಂಶವೆಂದರೆ ಅಲ್ಲಿ ಸರಿಯಾದ ಬೋಧಕ ವರ್ಗವಿಲ್ಲ, ಬೋಧಕ (ಆಂಗ್ಲಭಾಷೆಬಲ್ಲವರು)ರಿಲ್ಲದಿದ್ದಾಗ ಮಕ್ಕಳು ಇನ್ಯಾವ ಮಟ್ಟದಲ್ಲಿ ಪ್ರವೀಣರಾಗಬಲ್ಲರು? ಆದ್ದರಿಂದ ಮುಂದೆ ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಪ್ರಾರಂಭಿಸುವಾಗ ಇದನ್ನೆಲ್ಲ ಯೋಚಿಸಿ ಬೋಧಕವರ್ಗವನ್ನು ತರಬೇತಿಗೋಳಿಸಿ ಪ್ರಾರಂಭಿಸಬೇಕು ಮತ್ತು 5ನೇ ತರಗತಿಗೆ ಆಂಗ್ಲಭಾಷ ಮಾಧ್ಯಮವಾಗಿ ಭೋಧನೆ ಮಾಡಿ ಒಂದನೇ ತರಗತಿಯಿಂದ ಇಂಗ್ಲೀಷ್ ಪಠ್ಯವನ್ನು ಆಳವಡಿಸಿ ಕೊಂಡರೆ 5ನೇ ತರಗತಿಗೆ ಬರುವಷ್ಟರೊಳಗೆ ಸ್ವಲ್ಪಮಟ್ಟಿಗಾದರು ಪ್ರಬುದ್ಧರಾಗುತ್ತಾರೆ.

            ಸರ್ಕಾರಿ ಕಛೇರಿಗಳಲ್ಲಿ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಹಾಗೂ ಸರ್ಕಾರಿ ಸಂಬಳವನ್ನು ಪಡೆದುಕೊಂಡು, ಖಾಸಸಗಿಯವರಿಗೆ ಸೇವೆ ಮಾಡುವ ಸರ್ಕಾರಿ ನೌಕರರ (ಸರ್ಕಾರಿ ಗುಮಸ್ತರಿಂದಿಡಿದು, ಸರ್ಕಾರಿ ಮುಖ್ಯ ಪ್ರಧಾನ ಕಾರ್ಯದರ್ಶಿಗಳವರೆಗೆ) ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಬೇಕು ಮತ್ತು ಸರ್ಕಾರಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಬೋಧನೆ ಮಾಡುವ ಬೋಧಕರ ಮಕ್ಕಳು ಅವರು ಬೋಧನೆ ಮಾಡುವ ಶಾಲಾ-ಕಾಲೇಜುಗಳಲ್ಲಿಯೇ ವ್ಯಾಸಂಗ ಮಾಡಬೇಕು. ಹಾಗಾದಾಗ ತನ್ನ ಮಗುವು ಶಾಲೆಯಲ್ಲಿದೆ ಎಂಬ ಅರಿವಿನಿಂದಾದರು ಉತ್ತಮ ಬೋಧನೆ ಮಾಡಬಹುದು ಅಂತಹ ಕಾನೂನನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.

            ಬಹು ಮುಖ್ಯವಾಗಿ ಇಡೀ ದೇಶಾದ್ಯಂತ ಅಥವಾ ರಾಜ್ಯದ್ಯಂತ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಪಠ್ಯಕ್ರಮವಿರಬೇಕು. ಅದು ರಾಜ್ಯ ಪಠ್ಯವಾದರು ಸರಿ ಅಥವಾ ಕೇಂದ್ರ (CBSE) ಪಠ್ಯವಾದರು ಸರಿ ಹೀಗಾದಲ್ಲಿ ಮಕ್ಕಳಲ್ಲಿ ಐಕ್ಯತೆಯನ್ನು ಕಾಣಬಹುದು ಮತ್ತು ಪಠ್ಯಗಳಲ್ಲಿ ಕರ್ನಾಟಕದ ಮತ್ತು ಕನ್ನಡ ನಾಡಿನ ಬಗ್ಗೆ ಶೇಕಡ 60 ಭಾಗದಷ್ಟು ಒಳಗೊಂಡಿರ ಬೇಕು.

ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ಒಂದೇ ತರಹದ (ಬಣ್ಣವನ್ನು ಸೇರಿಸಿ) ಸಮವಸ್ತ್ರವಿರಬೇಕು ಮತ್ತು ವಿದ್ಯಾರ್ಥಿ ಶುಲ್ಕವನ್ನು ಸರಕಾರವೇ ನಿಗದಿಮಾಡಿ ಅದು ಸರ್ಕಾರಿ ಶಾಲೆಗಳಲ್ಲಿ ಮತ್ತು ಖಾಸಗಿ ಶಾಲೆಗಳಲ್ಲಿ ಏಕ ರೀತಿಯಲ್ಲಿರಬೇಕು ಇದರಲ್ಲಿ ಖಾಸಗಿಯವರು ಹೆಚ್ಚಾಗಿ ಶುಲ್ಕ ವಸೂಲಿ ಮಾಡಿದರೆ ಮತ್ತು ಕಾನೂನು ಪಾಲಿಸದಿದ್ದರೆ  ಪರವಾನಿಗಿ ರದ್ದು ಪಡಿಸುವಂತಹ ಕಾನೂನು ಜಾರಿಯಾಗಬೇಕು.

ಸರಕಾರಿ/ಖಾಸಗಿ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿನ ಶಿಕ್ಷಕರಿಗೆ ಮೂರು ವರ್ಷಗಳಿಗೊಮ್ಮೆ ತರಬೇತಿಗಳನ್ನು ನೀಡಿ ಅವರನ್ನು ಸಹ ಶೈಕ್ಷಣಿಕವಾಗಿ ಪ್ರಬುದ್ಧಗೊಳಿಸುವ ಜವಾಬ್ದಾರಿ ಸರ್ಕಾರದ್ದಗಿರಬೇಕು.

ಶಾಲೆಗಳಲ್ಲಿರುವ SDMC ಸದಸ್ಯತ್ವವನ್ನು ಖಾಸಗಿಯವರು ಅನ್ವಯವಾಗಬೇಕು ಮತ್ತು ಅವರಿಗೆ ತರಬೇತಿಗಳನ್ನು ನೀಡಿ ಅವರಿಗೂ ವಿದ್ಯಾರ್ಹತೆಯನ್ನು ನಿಗದಿಮಾಡಬೇಕು ಏಕೆಂದರೆ ಅದೇಷ್ಟೋ ಜನ ಸಮಾಜವನ್ನು ಅರಿಯದವರು ಸದಸ್ಯರುಗಳಾಗಿ ಶಿಕ್ಷಕರ ಕೈಗೊಂಬೆಗಳಾಗಿ ಶಾಲೆಯ ಅನಾಭಿವೃಧ್ಧಿಗೆ ಕಾರಣರಾಗಿದ್ದಾರೆ.

            ಮಕ್ಕಳಿಗೆ ಪಠ್ಯದ ಜೊತೆಗೆ ಹೊರಗಿನ ಕ್ಷೇತ್ರಗಳ, ವ್ಯಕ್ತಿತ್ವ ವಿಕಸನ (Personality Development) ಮತ್ತು ಜೀವನಕ್ಕೆ ಬದುಕಲು ಇರುವ ಮಾರ್ಗಗಳ ಬಗ್ಗೆ ತರಬೇತಿಗಳನ್ನು ನೀಡಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಹುಪಾಲು ಮಕ್ಕಳು ಉನ್ನತ ಶಿಕ್ಷಣವನ್ನು ಮುಗಿಸಿದನಂತರವು ಇನ್ನೊಬ್ಬರ ಮೇಲೆ ಅವಲಂಬಿನಾಗಿರುತ್ತಾನೆಯೇ ಹೊರತು ಅವನ/ಅವಳ ಸ್ವತಃ ಬುದ್ಧಿಯಿಂದ ಬದುಕಲು ಆಗುತ್ತಿಲ್ಲ ಆದ್ಧರಿಂದ ಹೆಚ್ಚಿನ ರೀತಿ ಕ್ಷೇತ್ರಕಾರ್ಯ  ತರಬೇತಿಗಳು ಮುಖ್ಯವಾಗಿದೆ.

            ಸರ್ಕಾರಗಳು ಖಾಸಗಿಯವರ ಕೈಗೊಂಬೆಗಳಾಗದೆ ದೇಶದ/ರಾಜ್ಯದ ಬಡಜನರನ್ನಾದರು ದೃಷ್ಠಿಯಲ್ಲಿಟ್ಟುಕೊಂಡ ಮೇಲಿನ ಅಂಶಗಳನ್ನು ಜಾರಿಗೊಳಿಸಿದರೆ ಗ್ರಾಮೀಣ ಭಾಗದಲ್ಲಿನ ಶಾಲೆಗಳು ಮುಚ್ಚುವ ಸ್ಥಿತಿಬರುವುದಿಲ್ಲ ಖಾಸಗಿಯತ್ತ ಮನಸ್ಸು ಮಾಡುವುದಿಲ್ಲ ಹಾಗಾಗಿ ಎಲ್ಲದರ ಶೈಕ್ಷಣಿಕ ಸುಧಾರಣೆಗಾಗಿ ಸಾಮಾಜಿಕ ಚಿಂತಕರು, ಕಾರ್ಯಕರ್ತರು, ಕನ್ನಡ ಪರ ಹೋರಟಗಾರರು(ನಿಷ್ಠವಂತರು) ಶಿಕ್ಷಣ-ತಜ್ಞರು ಕಾಲಕಾಲಕ್ಕೆ ಸುಧಾರಣೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಸೂಕ್ತವಾಗಿರುತ್ತದೆ ಏಕೆಂದರೆ ಇಂದಿನ ಆಧುನಿಕ ಕಾಲಾದಲ್ಲಿ ಬದಲಾವಣೆಗಳು ಬೇಗನೆ ಮರುಕಳಿಸುವುರಿಂದ ಸುಧಾರಣೆಗಳು, ಅಭಿವೃದ್ಧಿಗಳು ಬದಲಾಗುತ್ತಿರಬೇಕು, ಹಾಗಾದಲ್ಲಿ ದೇಶದಲ್ಲಿನ ಬಡ ಮಕ್ಕಳು ಸಹ ಶ್ರೀಮಂತಿಕೆ ಮತ್ತು ಮೇಲಂತಸ್ತಿಕೆ ಕಾಣುವುದರಲ್ಲಿ ಸಂದೇಹವಿಲ್ಲ.

 

ನಾಗೇಶ ಹೆಚ್.ವಿ.

ಸಂಶೋಧನಾವಿದ್ಯಾರ್ಥಿ, ಸಮಾಜಕಾರ್ಯ ವಿಭಾಗ,

ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ,

ಬೆಂಗಳೂರು-56

Email-nageshahv@yahoo.com Phone No:9449396802, 7411328968

 

 

No comments:

Post a Comment