Monday, December 2, 2013

ಸರ್ಕಾರಕ್ಕೆ ಸವಾಲಾದ ಅಪೌಷ್ಟಿಕತೆಯೆಂಬ ಪೆಡಂಭೂತ


            ಅಪರಿಮಿತ ಮಾನವ ಸಂಪನ್ಮೂಲವುಳ್ಳ ಭಾರತದಂತಹ ಸಂಪ್ರದಾಯಸ್ಥ ರಾಷ್ಟ್ರದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಡತನದ ಬೇಗೆಯಲ್ಲಿ ಸಿಲುಕಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಮಾತ್ರ ಮರೀಚಿಕೆಯೇ ಆಗಿದೆ. ಇತ್ತೀಚಿಗಷ್ಟೆ ಭಾರತದಲ್ಲಿ  ಮಕ್ಕಳ ಅಪೌಷ್ಟಿಕತೆಯ ಸ್ಥಿತಿ ಗತಿ ಕುರಿತು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿರುವ ವರದಿಯನ್ನು ಬಿಡುಗಡೆ ಮಾಡಿದ ಪ್ರಧಾನ ಮಂತ್ರಿಗಳಾದ ಡಾ|| ಮನಮೋಹನ್ ಸಿಂಗ್ ಇದೊಂದು ರಾಷ್ಟ್ರೀಯ ಅಪಮಾನ ಎಂದು ಕರೆದಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ ಅವರದೇ ನೇತೃತ್ವದ ಪೌಷ್ಟಿಕತೆಯ ಸವಾಲುಗಳಿಗೆ ಸಂಬಂಧಿಸಿದ ಪ್ರಧಾನಮಂತ್ರಿ ರಾಷ್ಟ್ರೀಯ ಮಂಡಳಿ ಕಳೆದ ಮೂರು ವರ್ಷಗಳಲ್ಲಿ ಸಭೆ ಸೇರಿರುವುದು ಕೇವಲ ಒಂದೇ ಬಾರಿಯಷ್ಟೆ. ರಾಷ್ಟ್ರದಲ್ಲಿ ಐದು ವರ್ಷದೊಳಗಿನ  ಶೇ. 42 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ವರದಿ ಬಹಿರಂಗ ಪಡಿಸಿದೆ. ಇನ್ನೂ ಕೆಲವು ನಂಬಲರ್ಹ ಸಂಸ್ಥೆಗಳ ಅಂದಾಜಿನ ಪ್ರಕಾರ ಪ್ರಮಾಣವು ಶೇ.52 ರಿಂದ 54 ರಷ್ಟಿದೆ (ಡಾ||. ಆರ್. ಬಾಲಸುಬ್ರಹ್ಮಣ್ಯಂ 2012).

            ಅಪೌಷ್ಟಿಕತೆಯ ಕರಿಛಾಯೆಯು ಆಫ್ರಿಕಾದ ಸಹರಾ ಉಪಖಂಡಕ್ಕಿಂತಲೂ ಭಾರತವನ್ನು ಹೆಚ್ಚಾಗಿ ಆವರಿಸಿಕೊಂಡಿದೆ. ವಿಶ್ವದ ಮೂರು ಅಪೌಷ್ಟಿಕ ಮಕ್ಕಳಲ್ಲಿ ಒಂದು ಮಗು ಭಾರತದ್ದೆ ಆಗಿದೆ. ಮೂರು ವರ್ಷದೊಳಗಿನ ಶೇ. 46 ರಷ್ಟು ಮಕ್ಕಳು ತಮ್ಮ ವಯಸ್ಸಿಗನುಗುಣವಾದ ತೂಕ ಹೊಂದಿಲ್ಲ. ಹಾಗೆಯೇ ಶೇ. 47 ರಷ್ಟು ಮಕ್ಕಳು ಕಡಿಮೆ ತೂಕದವರು ಮತ್ತು ಶೇ. 16 ರಷ್ಟು ಮಕ್ಕಳು ಅತ್ಯಂತ ಕೃಶ ಕಾಯದವರು ಇವರಲ್ಲಿ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂಬುದಾಗಿ ಯೂನಿಸೆಫ್ ಹೇಳಿದೆ. ನಮ್ಮಲ್ಲಿ ಅಪೌಷ್ಠಿಕತೆಯ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ಭಿನ್ನವಾಗಿದೆ. ರಾಷ್ಟ್ರದಲ್ಲೇ ಮಧ್ಯಪ್ರದೇಶದಲ್ಲಿ ಶೇ. 55 ರಷ್ಟು ಪ್ರಮಾಣದಲ್ಲಿ ಅಪೌಷ್ಟಿಕತೆ ಅತ್ಯಂತ ಹೆಚ್ಚಾಗಿದ್ದರೆ ಕೇರಳದಲ್ಲಿ ಶೇ. 27 ರಷ್ಟು ಕಡಿಮೆ ಇದೆ.

 

ಅಪೌಷ್ಟಿಕತೆಯ ತೊಡಕುಗಳು:

            ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರಗಳು ರೂಪಿಸಿರುವ ಕಾರ್ಯಕ್ರಮಗಳು ವಿಫಲಗೊಂಡಂತಿವೆ ಎಂದೇ ಬೆಳವಣಿಗೆಯ ಅರ್ಥ. ಕೇವಲ ಆಹಾರ ಸೇವನೆಯಷ್ಟೆ ಅಪೌಷ್ಟಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. ಮುಖ್ಯವಾಗಿ ಇದರ ಜೊತೆಗೆ ಆರೋಗ್ಯ ಸೇವೆಯ ಗುಣಮಟ್ಟ, ಮಕ್ಕಳ ಬಗ್ಗೆ ತೋರುವ ಕಾಳಜಿ, ಗರ್ಭಿಣಿಯರ ಆರೋಗ್ಯ, ನೈರ್ಮಲ್ಯ ಪಾಲನೆ, ಎಲ್ಲವನ್ನೂ ಅದು ಅವಲಂಬಿಸಿರುತ್ತದೆ. ಬಾಲಕರಿಗಿಂತ ಬಾಲಕಿಯರಲ್ಲೇ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿ ಕಾಣಿಸುತ್ತಿದೆ.

            ಮಗುತನದ ಅವಧಿಯಲ್ಲಿ ಅಪೌಷ್ಟಿಕತೆಯ ಸಮಸ್ಯೆಗಳು ಕಾಣಿಸಿಕೊಂಡರಂತೂ ಮಗುವಿನ ಸ್ನಾಯುಗಳು, ಸಂವೇದನಾ ಶೀಲತೆ, ಗ್ರಹಣ ಶಕ್ತಿ, ಸಾಮಾಜಿಕ ಮತ್ತು ಭಾವನಾತ್ಮಕ ವಿಕಾಸಕ್ಕೆ ತೊಡಕುಂಟುಮಾಡಿ ಗಂಭೀರ ಮತ್ತು ದೀರ್ಘಾವಧಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇಂತಹ ಮಕ್ಕಳು ಶಾಲೆಯ ಪ್ರಗತಿಯಲ್ಲಿ ಹಿಂದೆ ಬೀಳುವುದರ ಜೊತೆಗೆ ವಯಸ್ಕರಾದ ಮೇಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಬಹುಬೇಗ ಕಾಯಿಲೆಗಳಿಗೆ ತುತ್ತಾಗಿ ಅವಧಿ ಪೂರ್ವ ಸಾವಿಗೆ ಶರಣಾಗುವ ಸಂಭವವೇ ಹೆಚ್ಚು.

            ಭಾರತದಲ್ಲಿ ಸುಮಾರು 6 ಕೋಟಿ ಮಕ್ಕಳು ಕಡಿಮೆ ತೂಕದವರಿದ್ದಾರೆ. ಇದಕ್ಕೆ ಮೂಲ ಕಾರಣವಾದ ಕಿತ್ತು ತಿನ್ನುವ ಬಡತನದಿಂದಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವಲ್ಲಿ ಪಾಲಕರು ಅಸಮರ್ಥರಾಗಿದ್ದಾರೆ. ಪ್ರಮುಖವಾಗಿ ಬಾಲಕಿಯರು, ಗ್ರಾಮೀಣ ಪ್ರದೇಶದವರು, ಕಡುಬಡವರು, ಪರಿಶಿಷ್ಟಜಾತಿ, ಪಂಗಡದವರ ಮೇಲೆ ಸಮಸ್ಯೆ ಹೆಚ್ಚು ಪರಿಣಾಮಕಾರಿಯಾದ ಪ್ರಭಾವ ಬೀರಿದೆ. ಇದರಿಂದಾಗಿ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದಾಗಿ ಸೊಂಕಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ.

 

ಅಪೌಷ್ಟಿಕತೆಯ ಅಂಕಿ ಅಂಶಗಳು:

            ಕರ್ನಾಟಕದಲ್ಲಿ ಸುಮಾರು 61 ಸಾವಿರಕ್ಕಿಂತ ಹೆಚ್ಚಿನ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಎದ್ದು ಕಾಣುತ್ತಿದೆ. ಪ್ರಮುಖವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 61,564 ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಂತು ಅಪೌಷ್ಟಿಕತೆಯ ಪ್ರಮಾಣ  ತುಸು ಹೆಚ್ಚಾಗಿಯೇ ಇದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಸ್ವಲ್ಪ ಕಡಿಮೆಯೇನೊ ಇದೆ, ರಾಜ್ಯದ ವಿವಿಧ ಜಿಲ್ಲೆಗಳ ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಅಂಕಿ ಅಂಶಗಳನ್ನು ಗಮನಿಸುವುದಾದರೆ ರಾಜ್ಯದಲ್ಲಿ ರಾಯಚೂರು ಜಿಲ್ಲೆಯಲ್ಲಿಯೇ 8810ಕ್ಕೂ ಹೆಚ್ಚು ಮಕ್ಕಳು ಕಡಿಮೆ ತೂಕ ಹೊಂದಿದ್ದು ಅವರ ಸಂಖ್ಯೆಯ ಅತ್ಯಧಿಕ ಪ್ರಮಾಣದಲ್ಲಿದೆ. ಬೆಳಗಾವಿಯಲ್ಲಿ 6244, ಬಳ್ಳಾರಿಯಲ್ಲಿ 4807, ವಿಜಾಪುರದಲ್ಲಿ 4316, ಕೊಪ್ಪಳದಲ್ಲಿ 3898, ಹಾವೇರಿಯಲ್ಲಿ 3705, ಧಾರವಾಡದಲ್ಲಿ 3027, ಗುಲ್ಬರ್ಗದಲ್ಲಿ 2980, ಚಿತ್ರದುರ್ಗದಲ್ಲಿ 2782, ದಾವಣಗೆರೆಯಲ್ಲಿ 2286, ತುಮಕೂರಿನಲ್ಲಿ 1390 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1216, ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ. ಹಾಗೆಯೇ ಶಿವಮೊಗ್ಗದಲ್ಲಿ 1091, ಯಾದಗಿರಿಯಲ್ಲಿ 947, ದಕ್ಷಿಣಕನ್ನಡದಲ್ಲಿ 858, ಕೋಲಾರದಲ್ಲಿ 788, ಉತ್ತರಕನ್ನಡದಲ್ಲಿ 772, ಬೀದರ್ನಲ್ಲಿ 759, ಚಾಮರಾಜನಗರದಲ್ಲಿ 650, ಮಂಡ್ಯದಲ್ಲಿ 612, ಚಿಕ್ಕಮಗಳೂರಿನಲ್ಲಿ 585, ಹಾಸನದಲ್ಲಿ 416, ಬೆಂಗಳೂರು ನಗರದಲ್ಲಿ 402, ಬೆಂಗಳೂರು ಗ್ರಾಮಾಂತದಲ್ಲಿ 356, ಉಡುಪಿಯಲ್ಲಿ 319, ರಾಮನಗರದಲ್ಲಿ 248, ಕೊಡಗಿನಲ್ಲಿ 214, ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಮೇಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಕಂಡು ಬರುತ್ತಾರೆ ಎಂಬುದು ಸಾಬೀತಾಗುತ್ತದೆ. ಕಾರಣ ಭಾಗವು ಹೆಚ್ಚು ಕಡಿಮೆ ಮೂರು ವರ್ಷಗಳಿಗೊಮ್ಮೆಯಾದರೂ ಬರಗಾಲ ಪೀಡಿತಕ್ಕೊಳಗಾಗುತ್ತದೆ. ಇದರಿಂದಾಗಿ ಆಹಾರಕ್ಕಾಗಿ  ಬಡವರು, ಕೂಲಿಕಾರರು, ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪೌಷ್ಟಿಕ ಆಹಾರದ ಕೊರತೆ ಎದುರಾಗುತ್ತದೆ. ಸಿಕ್ಕ ಆಹಾರವನ್ನು ತಿಂದು ಬದುಕುವ ಅನಿವಾರ್ಯತೆಯೇ ಹೆಚ್ಚು, ಆಗಾಗಿ ಅಪೌಷ್ಟ್ಠಿಕತೆಗೆ ಜನರು ತುತ್ತಾಗುತ್ತಾರೆ.

 

ಅಪೌಷ್ಟಿಕತೆಗೆ ಕಾರಣಗಳು:

ಮಕ್ಕಳ ಅಪೌಷ್ಟಿಕತೆಗೆ ಬಡತನದ ಜೊತೆಗೆ ನವಜಾತ ಶಿಶುಗಳು ಮತ್ತು ಪುಟ್ಟ ಮಕ್ಕಳ ಬಗ್ಗೆ ತೋರುವ ನಿಷ್ಕಾಳಜಿಯೇ ಆಗಿದೆ. ಮಕ್ಕಳ ದೈಹಿಕ, ಮಾನಸಿಕ, ಬೆಳವಣಿಗೆಗೆ ಬೇಕಾದ ಉತ್ತಮ ಆಹಾರ ಕೊಡಬೇಕೆಂಬ ತಿಳುವಳಿಕೆ ಕೂಡ ಗ್ರಾಮೀಣ ಪ್ರದೇಶದ ಜನರಿಗಿಲ್ಲ. ಹಾಗಾಗಿ ಪಾಲಕರ ಬಡತನವೇ ಅವರ ಮಕ್ಕಳ ಪಾಲಿನ ಶತ್ರು ಹಾಗೂ ಸಂಪ್ರದಾಯಸ್ಥ ಸಮಾಜದಲ್ಲಿ ಇನ್ನೂ ಅಸ್ಥಿತ್ವದಲ್ಲಿರುವ ಬಾಲ್ಯ ವಿವಾಹ ಪದ್ದತಿ, ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕೊರತೆ, ಸಕಾಲದಲ್ಲಿ ಸಿಗದ ವೈದ್ಯಕೀಯ ಸೇವೆಗಳು, ಅವಧಿಪೂರ್ವ ಜನನ ಹುಟ್ಟುವಾಗಲೇ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಮೂಡನಂಬಿಕೆ, ಅನಕ್ಷರತೆ, ನೈರ್ಮಲ್ಯದ ಕೊರತೆ, ಎಲ್ಲಾ ಅಂಶಗಳು ಕೂಡ ಅಪೌಷ್ಟಿಕತೆಗೆ ಕಾರಣವಾಗುತ್ತವೆ. ಇಂತಹ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ದೇಹ ಜೋತಾಡುವ ಚರ್ಮದ ಹೊದಿಕೆ ಹೊದ್ದ ಮೂಳೆಗಳ ಹಂದರ ಎಂಬಂತ್ತಿದೆ. ಮುಖ ಎದೆಗೂಡುಗಳಲ್ಲಿ ಮೂಳೆ ಹೊರಕ್ಕೆ ವಕ್ರವಾಗಿ ಚಲಿಸುವ ಅಸ್ಥಿಪಂಜರದಂತಿದೆ ಕೆಲವು ಮಕ್ಕಳಲ್ಲಿ ಅಂಕು ಡೊಂಕು ಕೈಕಾಲು, ಗುಡಾಣದಂತಹ ಹೊಟ್ಟೆ, ಬೆಳಕೆ ಇಲ್ಲದ ಪೇಲಾವ ಕಣ್ಣು, ಉಸಿರಾಡುವ ಗೊರಗೊರ ಶಬ್ದ, ಜೀರುಂಡೆಯಂತೆ ಅಳುವ ದನಿ.

 

ಅನುಷ್ಠಾನದ ವೈಪಲ್ಯ:

            ಎಳೆಯ ವಯಸ್ಸಿನ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗದಿದ್ದರೆ ಅಂತಹ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಅಂತಹವರು ಜೀವನದುದ್ದಕ್ಕೂ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ ಎಳೆಯ ವಯಸ್ಸಿನ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದು ಅತಿ ಮುಖ್ಯ. ಮಕ್ಕಳಿಗೆ ಎರಡು ಹೊತ್ತಿನ ಊಟ ಒದಗಿಸುವುದೇ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಹಾಲು, ಹಣ್ಣು, ತರಕಾರಿ, ಮಾಂಸ, ಮೊಟ್ಟೆ, ಮುಂತಾದವುಗಳನ್ನು ಸರ್ಕಾರ ದುರ್ಬಲಗೊಂಡ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿಯೇ ಅಂಗನವಾಡಿ ಕೇಂದ್ರಗಳ ಮೂಲಕ ಸಿಗುವಂತೆ ಮಾಡಲು ತೆರೆದಿವೆ. ಆದರೆ ಸರಿಯಾದ ಪ್ರಮಾಣದಲ್ಲಿ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಜೊತೆಗೆ ದೇಶದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅನುಷ್ಠಾನದಲ್ಲಿರುವ ಮಕ್ಕಳ ಸಮಗ್ರ ಅಭಿವೃದ್ದಿ ಸೇವಾ ಕಾರ್ಯಕ್ರಮ (.ಸಿ.ಡಿ.ಎಸ್) ಹಲವು ಹಂತಗಳಲ್ಲಿ ಯಶಸ್ವಿ ಪಡೆದಿದ್ದರೂ ಮಕ್ಕಳ ಅಪೌಷ್ಟಿಕತೆಯ ವಿಷಯದಲ್ಲಿ ಮಾತ್ರ ಅಂತಹ ಗಮನಾರ್ಹವಾದ ಯಶಸ್ಸು ಕಂಡಿಲ್ಲ. ಕಾರಣ ಯೋಜನೆ ಕೇವಲ ಆಹಾರ ಪೂರೈಕೆಗೆ ಮಾತ್ರ ಆದ್ಯತೆ ನೀಡಿತ್ತೇ ಹೊರತು ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಂತಿಲ್ಲ ಮತ್ತು .ಸಿ.ಡಿ.ಎಸ್. ಯೋಜನೆಯು ಕೇವಲ ಮೂರು ವರ್ಷ ತುಂಬಿದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತದೆ. ಆದರೆ ವೇಳೆಗಾಗಲೇ ಮಗು ಅಪೌಷ್ಟಿಕತೆಗೆ ತುತ್ತಾಗುತ್ತದೆ.

 

ಸರ್ಕಾರದ ಕಾರ್ಯಕ್ರಮಗಳು:

            ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸರ್ಕಾರವು ಹಲವು ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಪ್ರಮುಖವಾಗಿ ಅಕ್ಟೋಬರ್ 2, 1975 ರಲ್ಲಿ .ಸಿ.ಡಿ.ಎಸ್ ಕಾರ್ಯಕ್ರಮವನ್ನು ದೇಶದ 33 ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಜಾರಿಗೊಳಿಸಿದೆ. ಇದರ ಜೊತೆಗೆ 1974 ರಲ್ಲಿ ಮಕ್ಕಳ ರಾಷ್ಟ್ರೀಯ ನೀತಿ, 1986 ರಲ್ಲಿ ರಾಷ್ಟ್ರೀಯ ಆರೋಗ್ಯ ನೀತಿ (2002) 1992 ರಲ್ಲಿ ಮಕ್ಕಳ ರಾಷ್ಟ್ರೀಯ ಕ್ರಿಯಾಯೋಜನೆ, 1993 ರಲ್ಲಿ ರಾಷ್ಟ್ರೀಯ ಪೌಷ್ಟಿಕ ನೀತಿ 1995 ರಲ್ಲಿ ಪೌಷ್ಠಿಕತೆಯ ಕ್ರಿಯಾಯೋಜನೆ 2000 ಮಕ್ಕಳ ರಕ್ಷಣೆಯ ಬಗ್ಗೆ ರಾಷ್ಟ್ರೀಯ ಕಾರ್ಯಕ್ರಮ ರೂಪಿಸುವಿಕೆ ಹೀಗೆ ಹಲವು ಕಾನೂನುಗಳನ್ನು ಸರ್ಕಾರ ಜಾರಿಗೊಳಿಸಿದೆ. ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರ್ಕಾರದ ಸಹಾಯನುಧನವಾಗಿ 500 ಕ್ಯಾಲೋರಿಗಳನ್ನು ಪ್ರತಿ ದಿನ ಆಹಾರವಾಗಿ ನೀಡಲಾಗುತ್ತಿದೆ. ಮತ್ತು 12-15 ಗ್ರಾಂ ಪ್ರೋಟೀನನ್ನು 0-6 ವರ್ಷದ ಮಕ್ಕಳಿಗೆ 600 ಕ್ಯಾಲೋರಿಗಳನ್ನು 20 ರಿಂದ 25 ಗ್ರಾಂ ಪ್ರೋಟೀನನ್ನು ಅತಿ ನ್ಯೂನ್ಯ ಪೋಷಣೆಯ ಮಕ್ಕಳಿಗೆ ಪೂರಕ ಆಹಾರವಾಗಿ ನೀಡಲಾಗುತ್ತಿದೆ. ವರ್ಷದಲ್ಲಿ 300 ದಿನಗಳು ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸಾಮಾನ್ಯ ಆರೋಗ್ಯವಂತ ಮಕ್ಕಳಿಗೆ ಪ್ರತಿದಿನ ರೂ. 4 ಘಟಕ ವೆಚ್ಚದಲ್ಲಿ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮತ್ತು ಕಿಶೋರಿಯರಿಗೆ, ಪ್ರತಿ ದಿನ ರೂ. 5 ಹಾಗೂ ತೀರ್ವ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ರೂ. 6 ಘಟಕ ವೆಚ್ಚದಲ್ಲಿ ವಾರದ ಎಲ್ಲಾ 6 ದಿನಗಳಲ್ಲಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕ ಮತ್ತು ತರಬೇತಿ ಕೇಂದ್ರದಿಂದ ಸಿದ್ದ ಪಡಿಸಿದ/ಬೇಯಿಸಿದ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಹಾಗೂ ಪ್ರಾಯಪೂರ್ವ ಬಾಲಕಿಯರಿಗೆ ಪೌಷ್ಟಿಕ ಕಾರ್ಯಕ್ರಮ, ಕಿಶೋರಿ ಶಕ್ತಿ ಯೋಜನೆ, ಅಪೌಷ್ಟಿಕ ಮಕ್ಕಳ ವೈದ್ಯಕೀಯ ವೆಚ್ಚ ಬರಿಸುವ ಯೋಜನೆ, ಸಬಲ ಕಾರ್ಯಕ್ರಮ ಮೊದಲು ಜಾರಿಯಲ್ಲಿದ್ದ ಎನ್.ಪಿ..ಜಿ ಕಾರ್ಯಕ್ರಮದ ಬದಲಿಗೆ ಜಾರಿಯಲ್ಲಿದೆ. ಅಂಗನವಾಡಿಯಲ್ಲಿ ಪ್ರತಿದಿನ ಕುರುಕುರೆ, ಉಪ್ಪಿಟ್ಟು, ರವೆಹಾಗೂ ಕಾಲು ಕೆ.ಜಿ ಬೇಳೆ, ಅರ್ಧ ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಮಕ್ಕಳಿಗೆ ರೂ. 6 ಮೌಲ್ಯದ ಪೌಷ್ಟಿಕ ಆಹಾರದ ಜೊತೆಗೆ ವೈದ್ಯಕೀಯ ವೆಚ್ಚವಾಗಿ ರೂ. 750 ನೀಡಲಾಗುತ್ತಿದೆ. ವಿಜಾಪುರ ಮತ್ತು ಗುಲ್ಬರ್ಗದಲ್ಲಿ ಪ್ರಾಯೋಗಿಕವಾಗಿ ಗ್ರಾಮೀಣ ಮಕ್ಕಳ ಅಭಿವೃದ್ದಿ ಕೇಂದ್ರ ಆರಂಭಿಸಲಾಗಿದೆ. ಇಂತಹ ಅಪೌಷ್ಟಿಕತೆಯ ಮಕ್ಕಳಿಗೆ ಬಾಲಸಂಜೀವಿನಿ ಯೋಜನೆಯಡಿಯಲ್ಲಿ ರಾಜ್ಯದ 7 ಆಸ್ಪತ್ರೆಗಳಲ್ಲಿ 18 ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ, ಆದರೂ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ವಿಫಲವಾದಂತೆ ಕಂಡುಬರುತ್ತಿವೆ. ಹಾಗಾಗಿ ಸರ್ಕಾರ ಕೇವಲ ಹೊಸ ಹೊಸ ಯೋಜನೆಗಳತ್ತ ನೀಲ ನಕ್ಷೆಗಳನ್ನ ರೂಪಿಸುವಲ್ಲಿ ಸಮಯವನ್ನ ವ್ಯೆಯಿಸದೇ ಆರೋಗ್ಯವಂತ ಮಗು ದೇಶದ ಭವಿಷ್ಯದ ಆಸ್ತಿ ಎಂಬ ಘೋಷ ವಾಕ್ಯ ಜಪಿಸದೇ ಪೌಷ್ಟಿಕ ಆಹಾರ ಕಾರ್ಯಕ್ರಮಗಳಿಗೆ ನೀಡುವ ಹಣ ಸದ್ಬಳಕೆ ಆಗುತ್ತಿದೆಯೇ ಎಂಬುದನ್ನು  ಗಮನಿಸಬೇಕು. ಅಪೌಷ್ಟಿಕತೆ ನಿವಾರಣೆ ಸರ್ಕಾರದ ಜವಾಬ್ದಾರಿಯಾದರೂ ಕಾರ್ಯಕ್ರಮದ ಅನುಷ್ಠಾನದಲ್ಲಿ ಸಮಾಜವು ಕೈಜೋಡಿಸಬೇಕು, ಉದಾರ ಮನಸ್ಸಿನ ದಾನಿಗಳು, ಸಂಘ ಸಂಸ್ಥೆಗಳು, ಮಠ ಮಾನ್ಯಗಳು, ಯೋಜನೆಯ ಬಗ್ಗೆ ಲಕ್ಷ್ಯ ನೀಡಬೇಕಾಗಿದೆ. ಪೌಷ್ಟಿಕತೆಯ ಗುರಿಸಾಧನೆಗೆ ಆರ್ಥಿಕ ಪ್ರಗತಿಯೊಂದೆ ಸಾಧನವಾಗಲಾರದು. ಗುರಿಸಾಧನೆ ಆಗಬೇಕಿದ್ದರೆ ಪ್ರಸಕ್ತ ಪೌಷ್ಟಿಕ ಕಾರ್ಯಕ್ರಮಗಳಲ್ಲಿ ಸುಧಾರಣೆಗೆ ತರುವ ಬಗ್ಗೆ ಅಥವಾ ಕಾರ್ಯಕ್ರಮ ಜಾರಿಗೆ ತರುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು, ಮತ್ತು ಯುವ ಸಮುದಾಯ, ನಾಗರೀಕ ಬಂದುಗಳು ಚಿಂತನೆ ನಡೆಸಬೇಕಾಗಿದೆ.

 

ರಾಜಶೇಖರ್ ಸಿ. (ಕೋಟಿ)

ಶೆಟ್ಟಹಳ್ಳಿ ಗ್ರಾಮ ಮತ್ತು ಅಂಚೆ,

ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ.571430.

 

 

 

No comments:

Post a Comment