Sunday, December 1, 2013

ಗ್ರಾಮೀಣ ಅಭಿವೃದ್ಧಿಯಲ್ಲಿ ಒಂದು ವೈಶಿಷ್ಟ್ಯಪೂರ್ಣ ಪ್ರಯೋಗ: ಭಾರತ ಅಭ್ಯುದಯ ಸೇವಾ ಸಂಸ್ಥೆಯ ಅನುಭವಗಳು


            ಭಾರತ ಅಭ್ಯುದಯ ಸೇವಾ ಸಂಸ್ಥೆ (IDS-I) ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಆಯ್ದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು 1979 ರಲ್ಲಿ ಹಮ್ಮಿಕೊಂಡಿತು. ಸಂಸ್ಥೆಯ ಒಂದು ವೈಶಿಷ್ಟ್ಯವೆಂದರೆ ಗ್ರಾಮದ ಜನರು ತಮ್ಮ ಅಭಿವೃದ್ಧಿಯನ್ನು ತಾವೇ ಸಾಧಿಸಿಕೊಳ್ಳಲು ಸಹಾಯಕಾರಿ ಆಗುವುದು. ಸಂಸ್ಥೆಯನ್ನು ಶ್ರೀ ಎಸ್. ಆರ್. ಹಿರೇಮಠ ಹಾಗೂ ಅವರ ಅಮೇರಿಕನ್ ಪತ್ನಿ ಶ್ರೀಮತಿ ಶ್ಯಾಮಲಾ ಹಿರೇಮಠ (ಸುಶ್ರೀ ಮೇವಿಸ್) ಇವರು ಇತರ ಸ್ವಯಂಸೇವಕರ ಸಹಾಯದಿಂದ ಪ್ರಾರಂಭಿಸಿದರು.

            ಪ್ರಾರಂಭದಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕು ಹಾಗೂ ರಾಣಿಬೆನ್ನೂರ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಸಂಸ್ಥೆಯು ಸಮುದಾಯ ಸಂಘಟನೆಯನ್ನು ಬುನಾದಿಯನ್ನಾಗಿ ಮಾಡಿಕೊಂಡು ಜನರ ಸಮಸ್ಯೆಗಳ ಪರಿಹಾರಕ್ಕೆ, ಆವಶ್ಯಕತೆಗಳ ಪೂರೈಕೆಗೆ ಹಾಗೂ ಸಂಪನ್ಮೂಲಗಳ ಅಭಿವೃದ್ಧಿ-ಬಳಕೆಗಾಗಿ, ನಿರ್ವಹಣೆಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಅವುಗಳಲ್ಲಿ ಪ್ರಮುಖವೆಂದರೆ (1) ಹೈನುಗಾರಿಕೆ, (2) ಆರೋಗ್ಯ ಯೋಜನೆ, (3) ಗ್ರಾಮೀಣ ಕೈಗಾರಿಕೆ, (4) ವಯಸ್ಕರ ಶಿಕ್ಷಣ, (5)  ಕುರಿಗಾರರ ಸಮಾಜ ಯೋಜನೆ, (6)ಪರಿಸರ ಯೋಜನೆ, (7)ಮೆಡ್ಲೇರಿ ಬಂಜರು ಭೂಮಿ ಸಮಗ್ರ ಅಭಿವೃದ್ಧಿ, (8) ಒಣ ಬೇಸಾಯ ಮತ್ತು ತೋಟಗಾರಿಕೆ.

             ಸಂಸ್ಥೆಯು ಯೋಜನೆಗಳ ಅನುಷ್ಠಾನಕ್ಕೆ ತನ್ನದೇ ಆದ ತಂತ್ರವನ್ನು ರೂಪಿಸಿತ್ತು. ಪ್ರತಿ ಗ್ರಾಮಕ್ಕೆ ಅಂದರೆ ಸುಮಾರು ಒಬ್ಬ ಸಮುದಾಯ ಸಂಘಟಕ ಮುನ್ನೂರು ಕುಟುಂಬಗಳನ್ನು ಸಂಘಟಿಸುವಂತೆ ನೇಮಕ ಮಾಡಿತ್ತು. ಸಮುದಾಯ ಸಂಘಟಕರಿಗೆ ಪೂರ್ವದಲ್ಲಿ 3 ತಿಂಗಳವರೆಗೆ ತರಬೇತಿ  ನೀಡಿ ತರಬೇತಿಯಲ್ಲಿ ಯಶಸ್ವಿ ಆದವರನ್ನು  ಮಾತ್ರ ಸಮುದಾಯ ಸಂಘಟಕರೆಂದು ನೇಮಕ ಮಾಡಲಾಗುತ್ತಿತ್ತು. ಸಮುದಾಯ ಸಂಘಟಕರು ವಾರದ ರಜೆ ಒಂದು ದಿವಸ ಹೊರತುಪಡಿಸಿ ಉಳಿದೆಲ್ಲ ದಿನಗಳನ್ನು ತಮ್ಮ ಕಾರ್ಯಕ್ಷೇತ್ರದಲ್ಲಿಯೇ ವಾಸವಾಗಿದ್ದು, ಕೆಲಸ  ಮಾಡಬೇಕೆಂದು ನಿಯಮಿಸಲಾಗಿತ್ತು. ಇದರಿಂದ ಸಮುದಾಯ ಸಂಘಟಕರ ಮತ್ತು ಜನರ ನಡುವೆ ಸಂಪರ್ಕ ಬೆಳೆದು ಸಂಘಟನೆಗೆ ಹೆಚ್ಚು ಅನುಕೂಲವಾಗುತ್ತಿತ್ತು. ಹಾಗೂ ಜನರಿಗೂ ಸಮುದಾಯ ಸಂಘಟಕರು ಸಹ ತಮ್ಮವರಲ್ಲಿ ಒಬ್ಬರು ಎಂಬ ಭಾವನೆ ಬೆಳೆಯಲು ಅನುಕೂಲವಾಗಿತ್ತು. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಎಸ್. ಆರ್. ಹಿರೇಮಠ ಮೆಡ್ಲೇರಿ ಎಂಬ ಗ್ರಾಮದಲ್ಲಿಯೇ ವಾಸವಾಗಿದ್ದು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ಪರಿಣಾಮಕಾರಿ ಕೆಲಸಗಳು ಅನುಷ್ಠಾನಗೊಂಡವು. ಆಗ ಗ್ರಾಮೀಣ ಅಭಿವೃದ್ಧಿ ಪ್ರಯೋಗಗಳ ಅನುಭವ ಬಹಳ ಕಡಿಮೆ ಇತ್ತು.

            ಸಂಸ್ಥೆ ಮೊದಲು ಹತ್ತು ವರ್ಷ ಅನುಷ್ಠಾನಗೊಳಿಸಿದ ಯೋಜನೆಗಳು ಹಾಗೂ ಅವುಗಳ ಸಾಧನೆ:

            ಹೈನುಗಾರಿಕೆ: ಮೇಡ್ಲೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕೃಷಿ, ಕೃಷಿ ಕೂಲಿ, ಕುರಿ ಸಾಕಾಣಿಕೆ ಜನರ ಕಸುಬುಗಳಾಗಿದ್ದವು. ಉಪಕಸುಬುಗಳಾಗಿ ದನಗಳ ಸಾಕಾಣಿಕೆ, ಕೋಳಿ ಸಾಕಾಣಿಕೆ ಇದ್ದವು. ಆದರೆ ಅವುಗಳಿಂದ ನಿರೀಕ್ಷಿತ ಆದಾಯ ಇರಲಿಲ್ಲ. ಮಹಿಳೆಯರು ಆರ್ಥಿಕವಾಗಿ ಪುರುಷರನ್ನು ಅವಲಂಬಿಸಿದ್ದರು. ಮಹಿಳೆಯರ ಸಶಕ್ತೀಕರಣ ಹಾಗೂ ಹೈನುಗಾರಿಕೆ ಆದಾಯ ಉತ್ಪನ್ನ ತರುವ ಚಟುವಟಿಕೆಯನ್ನಾಗಿ ಮಾಡಲು ಯೋಜನೆಯನ್ನು ಅಳವಡಿಸಲಾಯ್ತು. ಹೈನುಗಾರಿಕೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಹನುಮನಟ್ಟಿಯಲ್ಲಿ ತರಬೇತಿ ಕೊಡಿಸಲಾಯಿತು. ಪಶು ಆರೋಗ್ಯ ಕಾರ್ಯಕರ್ತೆಯರನ್ನು ನೇಮಿಸಿ ಪ್ರತಿದಿನ 5 ಜನ ಮಹಿಳೆಯರನ್ನು ಭೇಟಿಮಾಡಿ ದನಗಳ ಸಾಕಾಣಿಕೆ, ದನಗಳಿಗೆ ಮುಂಜಾಗ್ರತಾ ಕ್ರಮ, ಮೇವು ಅಭಿವೃದ್ಧಿ ಮುಂತಾದ ವಿಷಯಗಳ ಬಗೆಗೆ ತರಬೇತಿ ನೀಡಲು ಅವರ ಶಕ್ತಿ ಸಾಮಥ್ಯವನ್ನು ಅಭಿವೃದ್ಧಿ ಪಡಿಸಲಾಯಿತು. ಇದರ ಉದ್ದೇಶ ಗ್ರಾಮದಿಂದ ಸಂಸ್ಥೆಯು ಹಿಂದೆ ಸರಿದರು ಸಹ ಸ್ಥಾನಿಕವಾಗಿ ದನಕರುಗಳ ಚಿಕಿತ್ಸೆಗಾಗಿ ಒಬ್ಬ ಗ್ರಾಮೀಣ ಪಶುವೈದ್ಯನನ್ನು ನೇಮಿಸಲಾಯಿತು. ಮೂಲಕ ಉದ್ಯೋಗದ ಮಹತ್ವವನ್ನು ತಿಳಿಸುವುದು ಉದ್ದೇಶವಾಗಿತ್ತು. ಉದ್ದೇಶ ಈಡೇರಿದ್ದು ಈಗಲೂ ಸಹ ಮೆಡ್ಲೇರಿ, ಅರೆಮಲ್ಲಾಪುರ, ಹಿರೇಬಿದರಿ, ಹೀಲದಹಳ್ಳಿ, ಕದರಿಹಾಳ, ಹರನಗಿ ಹಾಗೂ ರಾಕೋಳ ಗ್ರಾಮದ ಪಶು ಆರೋಗ್ಯ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದು ಅವರ ಕುಟುಂಬ ನಿರ್ವಹಣೆ, ಪಶು ಆರೋಗ್ಯ ಕೆಲಸದ ನಿರ್ವಹಣೆ ಆಗುತ್ತಿದೆ. ಅಲ್ಲದೇ ಸಾಕಷ್ಟು ಜನರಿಗೆ ಅನುಕೂಲವಾಗಿ ಪ್ರಪ್ರಥಮವಾಗಿ ಮಹಿಳಾ ಸಹಕಾರಿ ಸಂಘಗಳು ಪ್ರಾರಂಭವಾದವು. ಅಲ್ಲದೇ ಮಹಿಳೆಯರೇ ದನಗಳಿಗೆ ಕೃತಕ ಗರ್ಭಧಾರಣೆ ಮಾಡುವುದನ್ನು ಕಲಿತರು. ಹಿರೇಬಿದರಿ ಗ್ರಾಮದ ಶ್ರೀಮತಿ ಕರಿಯಮ್ಮ ಬಿರಾಳ ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದಲ್ಲಿ ಎಲ್ಲೆಡೆ ನೋಡಿದರೆ ಅಲ್ಲಿ ಸುಧಾರಿತ ತಳಿ ಆಕಳುಗಳು ಕಂಡುಬರುತ್ತಿದ್ದುದು ಸಂಸ್ಥೆ ಮಾಡಿದ ಕೆಲಸಕ್ಕೆ ಕೈಗನ್ನಡಿ ಆಗಿದೆ.

            ಆರೋಗ್ಯ ಯೋಜನೆ: ಸಂಸ್ಥೆಯು ಪ್ರಾರಂಭದಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆದು ರೋಗಗಳಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಪ್ರಾರಂಭಿಸಿತು. ಆದರೆ ಇದರಿಂದ ಜನರ ಸಮಸ್ಯೆ ಉಲ್ಬನಿಸಿತೇ ಹೊರತು ಕಡಿಮೆ ಆಗಲಿಲ್ಲ. ಆಗ ಸಂಸ್ಥೆಯು ಜನರೊಂದಿಗೆ ಕುಳಿತು ವಿಷಯವಾಗಿ ಏನು ಮಾಡಬೇಕು ಎಂದು ವಿಚಾರಿಸಿದಾಗ ಜನರು ರೋಗ ಬಂದ ನಂತರ ಪರಿಹಾರ ಕೆಲಸ ಮಾಡುವುದಕ್ಕಿಂತ ರೋಗ ಬರಲಾರದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಜನರಿಗೆ ಆರೋಗ್ಯ ಶಿಕ್ಷಣ ನೀಡುವುದು ಅವಶ್ಯವೆಂದಾಗ ಸಂಸ್ಥೆಯು ಪ್ರತಿ ಗ್ರಾಮದಿಂದ ಆಸಕ್ತಿ ಹೊಂದಿದ ಮಹಿಳೆಯರನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಿ ಪ್ರತಿ ಗ್ರಾಮದ 5 ಮನೆಗಳಿಗೆ ಭೇಟಿ ಕೊಟ್ಟು ಆರೋಗ್ಯ ಶಿಕ್ಷಣ ನೀಡುವ ಕೆಲಸ ಆರಂಭಿಸಿತು. ಇದರಿಂದ ಮಕ್ಕಳ ಸಾವಿನ ಪ್ರಮಾಣ, ಗರ್ಭಿಣಿಯರ ಸಾವಿನ ಪ್ರಮಾಣ ಕಡಿಮೆ ಆಯಿತು. ಅಶಕ್ತ ಮಕ್ಕಳಿಗೆ ಪೋಷಕ ಪುಡಿಯನ್ನು ಹಾಗೂ ಅತಿಸಾರ ಭೇಧಿಗೆ ಕಾಯ್ದಾರಿಸಿದ ನೀರು ಕುಡಿಯುವ ವ್ಯವಸ್ಥೆ ಬಗ್ಗೆ ತರಬೇತಿ ನೀಡಲಾಯಿತು. ಅಲ್ಲದೇ ಹುರುಕು, ಕಜ್ಜಿ ಇವೆಲ್ಲ ನಂತರದ ದಿನಗಳಲ್ಲಿ ಗ್ರಾಮದಿಂದ ದೂರ ಮಾಡಲಾಯಿತು. ಈಗಲೂ ಸಂಸ್ಥೆಯು ಹಿಂದೆ ಸರಿದ ಹಳ್ಳಿಗಳಲ್ಲಿ ಆರೋಗ್ಯ ಕಾರ್ಯಕರ್ತೆಯರ ಉಪಯೋಗ ಪಡೆಯುತ್ತಿದ್ದಾರೆ. 2008 ನೆಯ ಸಾಲಿನಲ್ಲಿ ತರಬೇತಿ ನೀಡಿದ ಹಾಗೂ ಕೆಲಸ ನಿರ್ವಹಿಸಿದ ಮಹಿಳಾ ಆರೋಗ್ಯ ಕಾರ್ಯಕರ್ತೆಯರನ್ನು ಸರ್ಕಾರವು ಗುರುತಿಸಿ ಆಶಾ ಕಾರ್ಯಕ್ರಮದಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ. ಸಂಸ್ಥೆಯು ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ತಾಲೂಕಿನಲ್ಲಿ ಗ್ರಾಮಪಂಚಾಯಿತಿಯಿಂದ ಆರೋಗ್ಯ ಕಾರ್ಯಕರ್ತೆಯರಿಗೆ ಗೌರವ ಧನ ಕೊಟ್ಟು ಆರೋಗ್ಯ ಶಿಕ್ಷಣ ನೀಡುವ ಕೆಲಸ ಮಾಡುವಂತೆ ಮಾಡಿದ್ದುದು ಸಹ ದಾಖಲೆಗೆ ಅರ್ಹವಾದ ಕ್ರಮವಾಗಿದೆ.

            ಗ್ರಾಮದ ಜನರು ಕೈಗಾರಿಕೆ ಕೆಲಸಗಳಿಗೆ ಪಟ್ಟಣದ ಮೇಲೆ ಅವಲಂಬನೆ ಆಗಬಾರದು. ಆದುದರಿಂದಲೇ ಯುವಕರಿಗೆ ಗ್ರಾಮದಲ್ಲಿಯೇ ಉದ್ಯೋಗ ಹೊಂದಲು ಗ್ರಾಮೀಣ ಕೈಗಾರಿಕೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ಇದರಿಂದ ಗ್ರಾಮದ ಯುವಕರು ಹಾಗೂ ಮಹಿಳೆಯರು ಜನರಲ್ ಇಂಜಿನಿಯರಿಂಗ್, ಮೋಟಾರ್ ಡಿಸೈನಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಪ್ರಮುಖರು ಸುಭಾಸ ಅಂಬಿಗೇರ, ರವಿ ಬಡಿಗೇರ, ಕೆಂಚವ್ವ ಹರಿಜನ, ಕೋಟೆಪ್ಪ ಗುಲ್ಯಾಳ ಮುಂತಾದವರು ಸಂಸ್ಥೆಯು ಆರೋಗ್ಯ ಯೋಜನೆ ಕೆಲಸ ಮಾಡುವಾಗ ಕೆಲವು ಗ್ರಾಮಗಳಲ್ಲಿ ರೋಗಗಳು ಹೆಚ್ಚಾಗಿ ಕಂಡುಬರುತ್ತಿದ್ದವು. ಇವುಗಳ ಮೂಲ ಗುರುತಿಸಲಾಗಿ ಬಿರ್ಲಾ ಒಡೆತನದ ಎರಡು ಕಂಪನಿಗಳು ಬಿಡುವ ತ್ಯಾಜ್ಯ ವಸ್ತುಗಳು ತುಂಗಭದ್ರಾ ನದಿಯಲ್ಲಿ ಸೇರುವುದರಿಂದ ನದಿ ದಂಡೆಗಳ ಹಳ್ಳಿಗಳಲ್ಲಿ ಚರ್ಮರೋಗಗಳು, ಅಲ್ಸರ್ ರೋಗಗಳು ಹೆಚ್ಚಿಗೆ ಆಗಿದ್ದವು. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲಾಗಿ ಜನರು ಗ್ರಾಮದಲ್ಲಿ ಪರಿಸರ ಸಂಘಗಳನ್ನು ಹಾಗೂ ತಾಲೂಕು ಮಟ್ಟದಲ್ಲಿ ತುಂಗಭದ್ರಾ ಪರಸರ ಸಮಿತಿ ರಚನೆ ಮಾಡಿ ಅಹಿಂಸಾತ್ಮಕ ಹೋರಾಟಗಳನ್ನು ಮಾಡಲಾಯಿತು. ಇದರ ಪರಿಣಾಮವಾಗಿ ಬಿರ್ಲಾ ಕಂಪನಿಯು ಎಚ್ಚೆತ್ತು ಪರಿಹಾರ ಕ್ರಮಗಳನ್ನು ಜರುಗಿಸಿತು. ಸರಕಾರವೂ ಇದರ ಉಸ್ತುವಾರಿಗಾಗಿ ಒಂದು ಸಮಿತಿಯನ್ನು ರಚಿಸಿರುತ್ತದೆ.

            ಮೊದಲಿನ 10 ವರ್ಷಗಳ ಕೆಲಸಕ್ಕೆ ದಾನಿ ಸಂಸ್ಥೆಗಳಾದ HIVOS, World neighbors, OXFAM, Christen Aid, NORAD ಸಂಸ್ಥೆಗಳು ಹಣ ಸಹಾಯ ಮಾಡಿದವು ಅಲ್ಲದೆ ಮಧ್ಯದಲ್ಲಿ ಸಂಸ್ಥೆಯು ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆ ಆದ ಜನರಿಗೆ ಉದ್ಯೋಗ ತರಬೇತಿಗಳನ್ನು ಸಂಘಟಿಸಿತು. ಇದಕ್ಕೆ ಕೃಷ್ಮ ಮೇಲ್ದಂಡೆ ಯೋಜನೆಯ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆಯಿಂದ ಧನಸಹಾಯ ಪಡೆದು 10 ಪುನಾವಸತಿ ಕೇಂದ್ರಗಳಲ್ಲಿ ಸಿದ್ಧ ಉಡುಪು ತಯಾರಿಕೆ, ರೆಗಸಿನ್ ಬ್ಯಾಗ್ ತಯಾರಿಕೆ, ಕ್ರೋಸಾ ವೈಯರ್ ಹೆಣಿಕೆ, ಸ್ವೇಟರ್ ಹೆಣಿಕೆ, ದ್ವಿ ಚಕ್ರ ವಾಹನಗಳ ರಿಪೇರಿ ತರಬೇತಿ, ಸೋಪು ತಯಾರಿಕೆ, ಮುಂತಾದ ತರಬೇತಿಗಳನ್ನು ಬೀಳಗಿ, ಬಸವನ ಬಾಗೇವಾಡಿ ತಾಲೂಕಿನ ಪುನರ್ವಸತಿ ಕೇಂದ್ರಗಳಲ್ಲಿ ಏರ್ಪಡಿಸಿ ಉದ್ಯೋಗಸ್ಥರನ್ನಾಗಿ ಮಾಡಲಾಗಿದೆ.

            ಸಂಸ್ಥೆಯು 2002 ನೆಯ ಇಸವಿಯಲ್ಲಿ ವಿಶ್ವ ಬ್ಯಾಂಕ್ ನೆರವಿನ ಸುಜಲಾ ಜಲಾನಯನ ಎಂಬ ಬೃಹತ್ ಯೋಜನೆಯ ಅನುಷ್ಠಾನದಲ್ಲಿ 3 ತಾಲ್ಲೂಕಿನಲ್ಲಿ ಕ್ಷೇತ್ರ ಮಟ್ಟದ ಎನ್.ಜಿ. ಆಗಿ ಹಾಗೂ ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಲೀಡ್ ಎನ್.ಜಿ. ಆಗಿ ಕಾರ್ಯ ನಿರ್ವಹಿಸಿರುತ್ತದೆ. ಯೋಜನೆಯಲ್ಲಿ ಭೂ ಸವಕಳಿ ತಡೆಯುವ ಕ್ರಮಗಳು, ಕೃಷಿ ಅರಣ್ಯ, ಕೃಷಿ ತೋಟಗಾರಿಕೆ, ಕೃಷಿ ಹೊಂಡಗಳ ನಿರ್ಮಾಣದಂತಹ ಚಟುವಟಿಕೆಗಳನ್ನು ಮಾಡಿ ಮಣ್ಣು ಮತ್ತು ಸಂರಕ್ಷಣೆಯಲ್ಲಿ ಕೆಲಸ ನಿರ್ವಹಿಸಿತು.

            ಸಂಸ್ಥೆಯು 2005ರಲ್ಲಿ ಕರ್ನಾಟಕ ಅರಣ್ಯ ಇಲಾಖೆಯೊಡನೆ 5 ಜಿಲ್ಲೆಗಳಲ್ಲಿ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ (KSFMBC) ಯೋಜನೆಯಡಿಯಲ್ಲಿ 5 ವರ್ಷದ ಕಾರ್ಯನಿರ್ವಹಿಸಿತು. ಸಂಸ್ಥೆಯು ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕಾರ್ಯ ಮಾಡಿ 182 ಗ್ರಾಮ ಅರಣ್ಯ ಸಮಿತಿ ಹಾಗೂ 910 ಸ್ವ-ಸಹಾಯ ಸಂಘಗಳನ್ನು ರೂಪಿಸಿತು. ಅಲ್ಲದೆ ಸಂಸ್ಥೆಯು ಗ್ರಾಮ ಅರಣ್ಯ ಸಮಿತಿಗೆ ಪಿ.ಆರ್. ಕಾರ್ಯಕ್ರಮಗಳ ಮೂಲಕ ಯೋಜನೆ ರೂಪಿಸಿ ತತ್ಸಬಂಧದ ಸಂಘಟನೆಗಳನ್ನು ನಡೆಸಿತು. ತರಬೇತಿಗಳನ್ನು ನೀಡಿ ಅವರ ಸಾಮರ್ಥ್ಯವನ್ನು ಹೆಚ್ಚಿಸಿತು. ಅಲ್ಲದೆ ಸ್ವಸಹಾಯ ಸಂಘಗಳ ಸದಸ್ಯರಿಗೆ ಆದಾಯ ಉತ್ಪನ್ನ ಚಟುಟಿಕೆಗಳ ಬಗೆಗೆ ತರಬೇತಿಯನ್ನು ನೀಡಿ ಉದೋಗಸ್ಥರನ್ನಾಗಿ ಮಾಡಲಾಯಿತು.

            ಈಗ ಸಂಸ್ಥೆಯು ಸಾವಯವ ಕೃಷಿ ಯೋಜನೆ, ಕೌಶಲ್ಯ ತರಬೇತಿ ನೀಡುವುದಲ್ಲದೆ ತನ್ನ ಕಾರ್ಯ ವ್ಯಾಪ್ತಿಯನ್ನು ಬಳ್ಳಾರಿಗೂ ವ್ಯಾಪಿಸಿ ಅಕ್ರಮ ಗಣಿಗಾರಿಕೆಯ ವಿರುದ್ದ ಸಂಡೂರು ಭಾಗದ 10 ಗ್ರಾಮಗಳಲ್ಲಿ ಕಾರ್ಯನಿರ್ವಹಿಸಿ ಅಹಿಂಸಾತ್ಮಕ ನೇರ ಕ್ರಿಯೆಗಳ ಮೂಲಕ ಗಣಿಗಾರಿಕೆ ತಡೆಗಟ್ಟುವಲ್ಲಿ ಕೆಲಸ ನಿರ್ವಹಿಸಿದೆ. ಭಾರತದ ಉಚ್ಛನ್ಯಾಯಾಲಯವು ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದುದು ಚರಿತ್ರಾರ್ಹ ದಾಖಲೆಯಾಯಿತು. ಕ್ರಮದಿಂದ ಐಡಿಎಸ್ ಕೈಗೊಂಡ ಶ್ರಮವು ಸಾರ್ಥಕವಾಯಿತು ಎಂಬುದಕ್ಕೆ ಸಾಕ್ಷಿಯಾಯಿತು.

            ಸಂಸ್ಥೆಯು 30 ವರ್ಷ ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ನಿರ್ವಹಿಸಿ ಕಲಿತ ಪಾಠಗಳು:

1.         ಅಭಿವೃದ್ಧಿ ಎಂದರೆ ಕೇವಲ ಭೌತಿಕ ಅಭಿವೃದ್ಧಿ ಮಾತ್ರವಲ್ಲ. ಅದು ಜನರ ಅಭಿವೃದ್ಧಿ ಆಗಿದೆ.

2.         ಸಂಸ್ಥೆ ಪ್ರಾರಂಭದಲ್ಲಿ ಎಲ್ಲ ವರ್ಗದ ಜನರೊಂದಿಗೆ ತನ್ನ ಕೆಲಸ ಮಾಡಿತು. ಇದರಿಂದ ಗ್ರಾಮದ ಮೊದಲಿನ ಮುಖಂಡರೇ ಮತ್ತೆ ಮುಂದಾಳತ್ವ ವಹಿಸತೊಡಗುವುದು ಕಂಡುಬಂದಿತು. ಆದ್ದರಿಂದ ಭೂ ರಹಿತ ಕೂಲಿಕಾರರು, ಅತಿ ಸಣ್ಣ ರೈತರು, ಸಣ್ಣ ರೈತರು ಅದರಲ್ಲೂ ಪ್ರಕಾರದ ಗುಂಪುಗಳ ಮಹಿಳೆಯರಿಗೆ ಹಾಗೂ ಎಸ್.ಸಿ/ಎಸ್.ಟಿ  ಜನರಿಗೆ ಪ್ರಾಶಸ್ತ್ಯ ಕೊಟ್ಟು ಕೆಲಸ ನಿರ್ವಹಿಸಲು ಪ್ರಾರಂಭಿಸಿತು. ಕ್ರಮದಿಂದ ಮುಖಂಡತ್ವದಲ್ಲಿ ಮಹದಂತರ ಬದಲಾವಣೆಯು ಕಂಡುಬಂತು.

 

ಆರ್.ಬಿ ಪಾಟೀಲ್

ಮಾಜಿ CEO, ಡಿ ಎಸ್ ಧಾರವಾಡ.

 

 

No comments:

Post a Comment