ಪುಸ್ತಕ ಪ್ರಕಾಶನ ಮಾಡಲು ಹೆಸರಾಂತ ಪ್ರೊಫೆಸರ್ ಒಬ್ಬರನ್ನು ಕೇಳಿಕೊಂಡೆ, ಆಗ ಅವರು 30 ದಿನಗಳ ಕಾಲಾವಕಾಶ ಕೊಡಿ. ನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.30 ದಿನ ಕಳೆದ ನಂತರ ಪ್ರೊಫೆಸರ್ ಕರೆ ಮಾಡಿ ನನ್ನ ಪುಸ್ತಕ ಪ್ರಕಟಿಸಲು ನಿಮಗೆ ಅನುಮತಿ ನೀಡಿದ್ದೇನೆ. ನೀವು ನನ್ನ ಕರಡುಪ್ರತಿಯನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು. ನಾನು ಸಂತೋಷದಿಂದ ಒಪ್ಪಿಕೊಂಡೆ. ಆದರೆ ಕೈಯಲ್ಲಿ ಆ ಪುಸ್ತಕವನ್ನು ಪ್ರಕಟಿಸುವಷ್ಟು ಹಣವಿರಲಿಲ್ಲ. ಸಾಲ ಮಾಡಿಯಾದರೂ ಆ ಪುಸ್ತಕ ಪ್ರಕಟಿಸಬೇಕೆಂಬ ಬಯಕೆ ನನ್ನದಾಗಿತ್ತು. ಆ ಪುಸ್ತಕದ ಮೊದಲ ಪ್ರಕಟಣೆ Macmillan ಅಂತರಾಷ್ಟ್ರೀಯ ಸಂಸ್ಥೆಯಿಂದ ಪ್ರಕಟಿಸಿತ್ತು. ಹಾಗಾಗಿ ಅತ್ಯಂತ ಕಾಳಜಿಯಿಂದ ಪ್ರಕಟಿಸಿ ಪ್ರೊಫೆಸರ್ರವರನ್ನು ಮೆಚ್ಚಿಸಬೇಕೆಂಬ ಬಯಕೆ ನನ್ನದಾಗಿತ್ತು.
ಪ್ರೊಫೆಸರ್ ಅತ್ಯಂತ ಕಾಳಜಿ ವಹಿಸಿ ಆ ಪುಸ್ತಕವನ್ನು ತಿದ್ದುವುದು ಹಾಗೂ ಹಲವಾರು ಅಂತರಾಷ್ಟ್ರೀಯ ಗುಣಮಟ್ಟದ ಪುಸ್ತಕಗಳನ್ನು ತೋರಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದರು. ನನ್ನ ಪರಿಸ್ಥಿತಿ ಚೆನ್ನಾಗಿ ಅರಿತಿದ್ದ ಪ್ರೊಫೆಸರ್ ಈ ಪುಸ್ತಕ ಪ್ರಕಟಿಸಲು ಎಷ್ಟು ವೆಚ್ಚವಾಗಬಹುದು ಎಂಬ ಅಂದಾಜು ಪಟ್ಟಿ ತಯಾರಿಸಲು ಸೂಚಿಸಿದರು. ಅಂದಾಜು ಪಟ್ಟಿ ತಯಾರಿಸಿ ಸುಮಾರು 95 ಸಾವಿರ ಖರ್ಚಾಗಬಹುದು ಎಂದು ತಿಳಿಸಿದೆ. ಹೀಗೆ ಪುಸ್ತಕದ ಸಂಪೂರ್ಣ ಕೆಲಸ ಮುಗಿಸಿ ಪುಸ್ತಕ ಮುದ್ರಿಸುವ ಹಂತಕ್ಕೆ ತಲುಪಿದಾಗ ಬೇರೆಯವರಲ್ಲಿ ಸಾಲ ಕೇಳಿದ್ದೆ. ಸಾಲ ಕೊಡುತ್ತಾರೆ ಎಂಬ ಭರವಸೆ ಇತ್ತು. ಇದ್ದಕ್ಕಿದ್ದಂತೆ ಪ್ರೊಫೆಸರ್ ಫೋನ್ ಮಾಡಿ ಅವರ ಮನೆಗೆ ಕರೆಸಿಕೊಂಡರು. ಪ್ರೊಫೆಸರ್ ಮಾತನಾಡುತ್ತ ನನ್ನ ಕೈಗೆ ಒಂದು ಪತ್ರವನ್ನು ನೀಡಿದರು. ಆ ಪತ್ರದಲ್ಲಿ Rawat ಪ್ರಕಾಶನದಿಂದ ಪ್ರೊಫೆಸರ್ ಪುಸ್ತಕ ಪ್ರಕಟಿಸುವುದಾಗಿ ತಿಳಿಸಿದ್ದರು. ಹೆಸರಾಂತ Rawat ಪ್ರಕಾಶನ ಸಂಸ್ಥೆ ಪ್ರಕಟಿಸುತ್ತೇನೆ ಎಂದಾಗ ಪ್ರೊಫೆಸರ್ ಎಲ್ಲಿ ಆ ಪುಸ್ತಕ Rawat ಪ್ರಕಾಶನಕ್ಕೆ ನೀಡಿರುತ್ತಾರೋ ಎಂಬ ಭಯ ನನ್ನನ್ನು ಕಾಡಲು ಶುರುವಾಯಿತು. ಹಾಗೆಯೇ ಆ ಪತ್ರದಲ್ಲಿ ಪ್ರೊಫೆಸರ್ಗೆ ಗೌರವಧನ ನೀಡುವ ಬಗ್ಗೆ ಚರ್ಚೆ ಮಾಡಲಾಗಿತ್ತು.
ಪ್ರೊಫೆಸರ್ ನನ್ನತ್ತ ನಗುತ್ತಾ, ನಾನು ನಿಮಗೆ 30 ದಿನ ವಾಯಿದೆ ಕೇಳಿದ್ದೆ ಏಕೆಂದರೆ Rawat ಪ್ರಕಾಶನದವರ ಹತ್ತಿರ ನನ್ನ ಪುಸ್ತಕ ಪ್ರಕಟಿಸಲು ಮನವಿ ಮಾಡಿ 6 ತಿಂಗಳಾಯಿತು. ಆದರೆ ಆ ಮನವಿ ಪತ್ರವನ್ನು ಅವರು ನೋಡಿರಲಿಲ್ಲವಂತೆ, ನಂತರ ಪ್ರೊಫೆಸರೊಬ್ಬರ ಮಿತ್ರರು ಪ್ರೊಫೆಸರ್ ಬಗ್ಗೆ ಅವರ ಅಂತರಾಷ್ಟ್ರೀಯ ಖ್ಯಾತಿಯ ಕುರಿತು ಹೇಳಿದ ಮೇಲೆ ಅವರ ತಪ್ಪಿನ ಅರಿವಾಗಿ ಪುಸ್ತಕವನ್ನು ಸಂಸ್ಥೆಗೆ ಕೊಡಬೇಕು ಎಂದು ಹೇಳುತ್ತಿದ್ದಾರೆ ಎಂದು ಮಾತು ನಿಲ್ಲಿಸಿದರು. ನನಗೆ ನಡುಕ, ಒಳ್ಳೆಯ ಅವಕಾಶ ತಪ್ಪಿದ ಭಾವ ಶುರುವಾಯಿತು. ಪ್ರೊಫೆಸರ್ ಹಾಗೂ ನನ್ನ ನಡುವೆ ಮೌನ ಆವರಿಸಿತು. ಪ್ರೊಫೆಸರ್ ನನ್ನ ಪುಸ್ತಕದ ಕುರಿತು ಹಲವಾರು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ವಿಮರ್ಶೆ ಬಂದಿದೆ. ಇಂತಹ ಒಳ್ಳೆ ಪುಸ್ತಕವನ್ನು ನಾನು Rawat ಪ್ರಕಾಶನಕ್ಕೆ ಕೊಡಬೇಕೆಂಬ ಆಸೆ, ಆದರೆ ನಾನು ನಿಮಗೆ ಮಾತು ಕೊಟ್ಟಿದ್ದೇನೆ. ಆದುದರಿಂದ Rawat ಪ್ರಕಾಶನದವರು ಗೌರವಧನ ನೀಡುತ್ತಾರೆ ಎಂಬ ಆಸೆಯನ್ನು ಪಡದೆ ನಿಮ್ಮ ಮಾತಿಗೆ ಗೌರವ ನೀಡಿ, ನಿಮಗೆ ಸಂತೋಷದಿಂದ ಈ ಪುಸ್ತಕ ಪ್ರಕಾಶನ ಮಾಡಲು ಅನುಮತಿ ನೀಡುತ್ತಿದ್ದೇನೆ. ಪ್ರಕಾಶನ ಮಾಡಿ ಎಂದರು. ಮನಸ್ಸಿನಲ್ಲಿ ಅಳುಕಿನಿಂದಲೆ ಒಪ್ಪಿಕೊಂಡೆ. ಜೇಬಲ್ಲಿ ಕಾಸಿಲ್ಲ ದೊಡ್ಡ ಜವಾಬ್ದಾರಿ ತಲೆ ಮೇಲೆ, ಪ್ರೊಫೆಸರ್ ನೀವು ಈ ಪುಸ್ತಕ ಪ್ರಕಾಶನ ಮಾಡುವಷ್ಟು ಸಾಹುಕಾರರಲ್ಲ ಎಂದು ತಿಳಿದಿದೆ. ಆದರೆ ನನ್ನ ಜೀವಮಾನದಲ್ಲಿ ನಾನು ಹಣ ನೀಡಿ ನನ್ನ ಲೇಖನ ಪ್ರಕಟಿಸಿಕೊಂಡ ಪರಿಪಾಟವಿಲ್ಲ. ಆಗಾಗಿ 90 ಸಾವಿರ ನಿಮಗೆ ಸಾಲದ ರೂಪದಲ್ಲಿ ಹಣ ನೀಡುತ್ತಿದ್ದೇನೆ, ನಿಮಗೆ ಪುಸ್ತಕ ಮಾರಿ ಬಂದ ಹಣದಿಂದ ಈ ನನ್ನ ಸಾಲದ ಹಣವನ್ನು ವಾಪಸ್ಸು ಮಾಡಬಹುದು ಎಂದು ಹೇಳಿದಾಗ ನನಗೆ ಮನಸ್ಸಲ್ಲಿ 1 ಕೋಟಿ ಲಾಟರಿ ಹೊಡೆದಷ್ಟು ಸಂತೋಷವಾಗಿತ್ತು.
ಪುಸ್ತಕವನ್ನು ಪ್ರಕಟಿಸಲು ಚೈನಾದಿಂದ ಅವರು ಮಾಡಿದ ಮುಖಪುಟ ಹೊದಿಕೆ ತರಿಸಿ ಅಚ್ಚುಕಟ್ಟಾಗಿ ಪ್ರಿಂಟ್ ಮಾಡಿ ಪ್ರೊಫೆಸರ್ ಕೈಗೆ ಪುಸ್ತಕ ನೀಡಿದೆ. ಒಮ್ಮೆ ಕಣ್ಣಾಡಿಸಿದ ಪ್ರೊಫೆಸರ್ ನಾನು Rawat ಪ್ರಕಾಶನಕ್ಕೆ ನೀಡಿದ್ದರೂ ಈ ಪುಸ್ತಕ ಇಷ್ಟೊಂದು ಗುಣಮಟ್ಟದಲ್ಲಿ ಬರುತ್ತಿರಲಿಲ್ಲವೇನೋ, ತುಂಬಾ ಚೆನ್ನಾಗಿದೆ. ಹಾಗೆಯೇ ವೈಯಕ್ತಿಕವಾಗಿ ನಾನು ಪುಸ್ತಕದ ಪ್ರತಿ ಪುಟದ ಪ್ರತಿ ಪದಗಳನ್ನು ಕೊನೆಯವರೆವಿಗೂ ಗಮನ ನೀಡಲು Rawat ಪ್ರಕಾಶನಕ್ಕೆ ನೀಡಿದ್ದರೆ ಆಗುತ್ತಿರಲಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು.
ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದೆವು. ಈ ಸಮಾರಂಭಕ್ಕೆ ಡಾ. ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವತಂತ್ರ ಹೋರಾಟಗಾರರು ಹಾಗೂ ಶ್ರೀಮತಿ ಅನಿತಾರೆಡ್ಡಿರವರು ಆಗಮಿಸಿದ್ದರು. ಹೆಚ್ಚಿನ ಪ್ರಚಾರ ನೀಡದೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಹಾಜರಾದವರು ಕೇವಲ 10 ರಿಂದ 15 ಜನರು. ಪ್ರೊಫೆಸರ್ ಮೊದಲೇ ನಾನು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಆಹ್ವಾನಿಸುವುದಿಲ್ಲ ಎಂದಿದ್ದರು. ತೋರಿಕೆಯ ಸ್ವಭಾವ ಅವರದಾಗಿರಲಿಲ್ಲ. ಕೇವಲ ಕೆಲವೇ ಪತ್ರಕರ್ತರು, ಆಸಕ್ತರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಲವೇ ಜನರನ್ನು ಕಂಡು ಕಾರ್ಯಕ್ರಮದ ಆಯೋಜಕನಾದ ನನಗೆ ಮುಜುಗರ, ಸಂಕೋಚ, ಬೇಸರವಾಗಿ ಸ್ವಾಗತ ಭಾಷಣ ಮಾಡಲು ತಡಕಾಡಿದೆ. ಆದರೆ ಅತಿಥಿಗಳಾಗಿ ಆಗಮಿಸಿದ್ದ ಎಚ್.ಎಸ್. ದೊರೆಸ್ವಾಮಿರವರು ಸುಮಾರು 1 ಗಂಟೆ 30 ನಿಮಿಷ ಪುಸ್ತಕದ ಕುರಿತಾಗಿ ಮಾತನಾಡಿದರು. ಅವರು ಮಾತನಾಡಬೇಕಾದ್ದನ್ನು ಬರೆದುಕೊಂಡು ಬಂದಿದ್ದರು. ಅವರ ಭಾಷಣವನ್ನು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯಲ್ಲಿ ಮುದ್ರಿಸಲಾಯಿತು. ಹಾಗೆಯೇ ಶ್ರೀಮತಿ ಅನಿತಾರೆಡ್ಡಿರವರು ಸುಮಾರು 1 ಗಂಟೆ 20 ನಿಮಿಷ ಮಾತನಾಡಿದರು. ಇವರು ಸಂಪೂರ್ಣ ಪುಸ್ತಕವನ್ನು ಓದಿ ಬರೆದುಕೊಂಡು ಬಂದು ಮಾತನಾಡಿದ್ದರು. ಇಬ್ಬರೂ ಹಿರಿಯರು ಕೇವಲ ಕೆಲವೇ ಸಭಿಕರಿದ್ದುದನ್ನು ಕಂಡು ಬೇಸರಗೊಂಡಿದ್ದಾಗಲಿ, ಮುಜುಗರಗೊಂಡಿದ್ದಾಗಲಿ, ಸಂಕೋಚಗೊಂಡ ಯಾವುದೇ ಮುಖಭಾವ ಅವರಲ್ಲಿರಲಿಲ್ಲ. ಅವರಿಗೆ ಪುಸ್ತಕದ ಬಗ್ಗೆ ಅಪಾರವಾದ ಗೌರವ, ಹೆಮ್ಮೆ, ಪ್ರೀತಿ ಇತ್ತು. ಕೊನೆಗೆ ಇದನ್ನೆಲ್ಲಾ ಅನುಭವಿಸಿದ ಪ್ರೊಫೆಸರ್ ಪುಸ್ತಕ ಸಮಾರಂಭದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅವರಿಗೆ ದೊರೆಸ್ವಾಮಿ ಹಾಗೂ ಅನಿತಾರೆಡ್ಡಿರವರ ವಿಮರ್ಶೆ ಖುಷಿ ನೀಡಿತ್ತು.
ಸುಮಾರು ದಿನಗಳು ಕಳೆದವು. NBT ಯಿಂದ Subsidy Scheme ಗೆ ಈ ಪುಸ್ತಕವನ್ನು ಕಳುಹಿಸಲು ನಿರ್ಧರಿಸಿದೆ. ಈ Subsidy Scheme ನ ಪ್ರಕಾರ ಈ Scheme ಗೆ ಆಯ್ಕೆಯಾದ ಪುಸ್ತಕದ ಪ್ರಕಾಶಕರಿಗೆ ಹಾಗೂ ಲೇಖಕರಿಗೆ ಹಣ ನೀಡುತ್ತಾರೆ. ಈ ಪುಸ್ತಕವನ್ನು NBT ಸಂಸ್ಥೆ ಪರಿಶೀಲಿಸಿ ಪುಸ್ತಕವನ್ನು ಆಯ್ಕೆ ಮಾಡಿತು. ಆದರೆ ಮತ್ತೊಮ್ಮೆ ಈ ಪುಸ್ತಕವನ್ನು ಮುದ್ರಿಸಬೇಕು, ಮುದ್ರಿಸಲು ಹಣ ಬೇಕು ಮೊದಲು ಮುದ್ರಿಸಿದ ಪ್ರತಿಗಳು ಖಾಲಿಯಾಗಿಲ್ಲ. ಆದರೆ NBT ಯಂತಹ ಸಂಸ್ಥೆ ಆಯ್ಕೆ ಮಾಡಿದ ಮೇಲೆ ಪುಸ್ತಕ ಮುದ್ರಿಸುವ ಸುವರ್ಣ ಅವಕಾಶ ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಹಾಗಾಗಿ ಈ ಪುಸ್ತಕ ಮುದ್ರಿಸಲು ಪ್ರೊಫೆಸರ್ ಬಳಿ ಮತ್ತೆ ಚರ್ಚೆ ಶುರುವಾಯಿತು. ಪ್ರೊಫೆಸರ್ ನಿಮಗೆ ಮೊದಲನೆ ಪ್ರಕಟಣೆ ಮಾಡಲು ಹಣವಿರಲಿಲ್ಲ. ಮತ್ತೊಮ್ಮೆ ಮುದ್ರಿಸುವ ಭಂಡ ಧೈರ್ಯವೇಕೆ ? ಹಾಗೆಯೇ ನನ್ನ ಪುಸ್ತಕ NBT ಯಿಂದ ಆಯ್ಕೆಯಾಗಿದೆ ಎಂಬ ಸಂತೋಷವಿದೆ. ಆದರೆ ಪ್ರಕಾಶಕರಾಗಿ ನೀವು ಸ್ವಲ್ಪ ಯೋಚಿಸಿ 2ನೇ ಮುದ್ರಣ ಬಂದರೆ ಮೊದಲ ಮುದ್ರಣದ ಪ್ರತಿಗಳು ಖರ್ಚಾಗದೆ ಹಾಗೆಯೇ ಉಳಿಯಬಹುದು ಎಂದರು. ಏಕೆಂದರೆ ಮೊದಲ ಮುದ್ರಣದ ಪುಸ್ತಕದ ಬೆಲೆ 695/-. 2ನೇ ಮುದ್ರಣದ ಪುಸ್ತಕದ ಬೆಲೆ 295/-, NBT ಸಂಸ್ಥೆ ಪ್ರಾಯೋಜಿಸಿ ಪ್ರಕಟಿಸಿರುವುದರಿಂದ ಅತಿ ಕಡಿಮೆ ಬೆಲೆ ನಿಗದಿಗೊಳಿಸಲಾಗಿತ್ತು. ಆದರೆ ಈ ಪುಸ್ತಕ NBT ಯಿಂದ ಪ್ರಕಟವಾದರೆ ನಮ್ಮ ನಿರುತ ಪ್ರಕಾಶನಕ್ಕೆ ಗೌರವ ಎಂಬ ಸ್ವಾರ್ಥದಿಂದ NBT ನೀಡಿದ ಆಹ್ವಾನವನ್ನು ಸಂತೋಷದಿಂದ ಕಿಸೆಯಲ್ಲಿ ಹಣವಿಲ್ಲದಿದ್ದರೂ ಒಪ್ಪಿಕೊಂಡಿದ್ದೆ.
NBT ನೀಡಿದ ವೇಳೆಗೆ ಪುಸ್ತಕ ಮುದ್ರಿಸಿ ಪ್ರಥಮ ಪ್ರತಿ ಪ್ರೊಫೆಸರ್ಗೆ ನೀಡಿದೆ. ಪ್ರೊಫೆಸರ್ ನನಗೆ ಮಕ್ಕಳಿಲ್ಲ, ನಿಮ್ಮ ಆಸಕ್ತಿ, ಶ್ರದ್ಧೆ, ಪ್ರಾಮಾಣಿಕತೆಗಾಗಿ ನಾನು ನಿಮಗೆ ಈ ಪುಸ್ತಕದ ಹಕ್ಕುದಾರಿಕೆಯನ್ನು ನೀಡುತ್ತಿದ್ದೇನೆ. ಮುಂದೊಮ್ಮೆ ನನ್ನ ಅಣ್ಣನ ಮಕ್ಕಳು, ನನ್ನ ಸಂಬಂಧಿಕರು ಈ ಪುಸ್ತಕದ ಕುರಿತು ತಗಾದೆ ತೆಗೆಯಬಾರದು ಎಂದು ಹೇಳಿ ಈ ಪುಸ್ತಕದ ಸಂಪೂರ್ಣ ಹಕ್ಕುಗಳನ್ನು ನನಗೆ ಬರೆದುಕೊಟ್ಟರು.
ಸುಮಾರು ದಿನಗಳು ಕಳೆದವು. ಪ್ರೊಫೆಸರ್ರವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಆದರೆ ಪ್ರೊಫೆಸರ್ ನೀಡಿದ 90 ಸಾವಿರ ವಾಪಸ್ಸು ನೀಡಲು ನನ್ನ ಬಳಿ ಹಣ ಇರಲಿಲ್ಲ. ಈ ಸಂದರ್ಭದಲ್ಲಿ NBT ಪುಸ್ತಕಕ್ಕೆ ಗೌರವಧನವಾಗಿ ಪ್ರೊಫೆಸರ್ಗೆ ಸುಮಾರು 50 ಸಾವಿರ ನೀಡಲಾಯಿತು. ಪ್ರಕಾಶಕರಿಗೆ ಸುಮಾರು 35 ಸಾವಿರ ನೀಡಲಾಗಿತ್ತು. ಈ ಸಂದರ್ಭದಲ್ಲಿ ನನ್ನ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರದಿದ್ದ ಕಾರಣದಿಂದ ಅಂತು ಇಂತು ಪ್ರೊಫೆಸರ್ಗೆ ನಿರೀಕ್ಷಿಸದಿದ್ದ 50 ಸಾವಿರ ನನ್ನ ಕಾರಣದಿಂದ ಬಂದಿದೆ. ಆಗಾಗಿ ನನಗೆ 90 ಸಾವಿರ ನೀಡಿದ ಹಣದಲ್ಲಿ 50 ಸಾವಿರ ಮನ್ನ ಮಾಡಿದರೆ ಚೆನ್ನಾಗಿರುತ್ತದೆ ಅನಿಸುತ್ತಿತ್ತು. ಹಲವಾರು ಸಂಘ ಸಂಸ್ಥೆಗಳಿಗೆ ಪ್ರೊಫೆಸರ್ ದೇಣಿಗೆ ನೀಡುತ್ತಿದ್ದರು. ನಾನು ಇಷ್ಟೊಂದು ಕಷ್ಟದಲ್ಲಿರುವ ನನಗೆ ಸಾಲವಾಗಿ ನೀಡಿದ್ದಾರೆ. ಹಾಗೆಯೇ ಅವರ ಪುಸ್ತಕ NBT ಗೆ ಆಯ್ಕೆಯಾಗುವಲ್ಲಿ ನನ್ನ ಶ್ರಮವಿದೆ ಹಾಗೂ 50 ಸಾವಿರ ಹಣ ಗೌರವಧನವಾಗಿ ಪ್ರೊಫೆಸರ್ಗೆ ಬಂದಿದೆ ಹಾಗೂ ನಾನು ಕಷ್ಟದಲ್ಲಿದ್ದೇನೆ, ಈ ಪರಿಸ್ಥಿತಿಯಲ್ಲಿ ನನ್ನ ತಲೆಯಲ್ಲಿ ಹಲವಾರು ಚಿಂತೆಗಳು, ಆತಂಕಗಳು ಶುರುವಾದವು.
ಪ್ರಾಮಾಣಿಕವಾಗಿ ಪ್ರೊಫೆಸರ್ಗೆ 1 ಪತ್ರ ಬರೆಯಲು ನಿರ್ಧರಿಸಿದೆ, ಪ್ರೀತಿಯ ಪ್ರೊಫೆಸರ್ ನನ್ನ ಹಣಕಾಸಿನ ಪರಿಸ್ಥಿತಿ ಚೆನ್ನಾಗಿಲ್ಲ. ಆದರೆ ನಾನು ನಿಮಗೆ 90 ಸಾವಿರ ಹಣ ಸಾಲವಾಗಿ ಪಡೆದು ಬಹಳ ದಿನ ಕಳೆದಿವೆ. ಅದನ್ನು ಹಿಂದಿರುಗಿಸುತ್ತೇನೆ ಎಂದು ಮಾತು ನೀಡಿದ್ದೆ ಆದರೆ ಹಿಂದಿರುಗಿಸಲು ಸ್ವಲ್ಪ ಸಮಯಾವಕಾಶ ನೀಡಿ, ನೀವು ನಿಮ್ಮ ಹಣ ವಾಪಸ್ಸು ಮಾಡಬೇಕೆಂದು ಬಯಸಿದ್ದಲ್ಲಿ ನಾನು ಈ ಪತ್ರದೊಂದಿಗೆ 1 ಚೆಕ್ ಅನ್ನು ಲಗತ್ತಿಸಿರುತ್ತೇನೆ. ಆ ಚೆಕ್ನಲ್ಲಿ ನೀವೆ ಹಣ ನಮೂದಿಸಿ ನಿಮ್ಮ ಖಾತೆಗೆ ಜಮಾ ಮಾಡುವ ಮೊದಲು ನನಗೆ ತಿಳಿಸಿ ನಾನು ನನ್ನ ಖಾತೆಯಲ್ಲಿ ಹಣವಿರುವಂತೆ ನೋಡಿಕೊಳ್ಳುತ್ತೇನೆ. ಬೇರೆಯವರ ಬಳಿ ಸಾಲ ಮಾಡಿ ಜಮಾ ಮಾಡುತ್ತೇನೆ ಎಂದು ಬರೆದು ಪತ್ರ ಕಳುಹಿಸಲು ಮನಸ್ಸು ಬಾರದೆ, ನೇರವಾಗಿ ಪ್ರೊಫೆಸರನ್ನು ಭೇಟಿ ಮಾಡಿ ಹೇಳಲೆ, ಪತ್ರ ಕಳುಹಿಸಲೆ ಎಂಬ ಗೊಂದಲದಲ್ಲಿ ಬಿದ್ದೆ. ಸುಮಾರು 3 ದಿನ ಕಳೆದ ನಂತರ ಪ್ರೊಫೆಸರ್ ಕಡೆಯಿಂದ ನನಗೊಂದು ಪತ್ರ ಬಂತು. ಆ ಪತ್ರವನ್ನು ಪುಸ್ತಕ ಮಾರಾಟದ ಕುರಿತು ಹಾಗೂ 90 ಸಾವಿರದ ಸಾಲದ ಮರುಪಾವತಿಸಲು ಸೂಚಿಸಲಾಗಿತ್ತು. ಈ ಪತ್ರವನ್ನು ಪ್ರೊಫೆಸರ್ ಕಡೆಯಿಂದ ನಾನು ನಿರೀಕ್ಷಿಸಿರಲಿಲ್ಲ.
ಪತ್ರ ತಲುಪಿದ ಮರುಗಳಿಗೆಯಲ್ಲಿ ನನ್ನ ಸ್ನೇಹಿತ ಮಹದೇವರನ್ನು ಕರೆದು ನನ್ನ ತಮ್ಮನ ಬಳಿ ಸಾಲ ಮಾಡಿ 40 ಸಾವಿರ ನಗದು ಹಾಗೂ ಮೊದಲೇ ತಯಾರಿಸಿದ್ದ ಚೆಕ್ ನೀಡಿ ಪ್ರೊಫೆಸರ್ಗೆ ಕಳುಹಿಸಿದೆ. ಈ ಪ್ರಾಮಾಣಿಕ ನಡೆಯಿಂದ ಸಂತೋಷಗೊಂಡ ಪ್ರೊಫೆಸರ್ 1 ತಿಂಗಳ ನಂತರ ನಾನು ನೀಡಿದ ಚೆಕ್ ವಾಪಸ್ಸು ಕಳುಹಿಸಿಕೊಟ್ಟಿದ್ದರು ಹಾಗೂ ನನ್ನೆಲ್ಲ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸಿದ್ದರು.
ಇಷ್ಟೆಲ್ಲಾ ಹೇಳಿದ ಮೇಲೆ ಆ ಪ್ರೊಫೆಸರ್ರವರ ಹೆಸರು ಹೇಳದಿದ್ದರೆ ಹೇಗೆ ?
ಅವರ ಹೆಸರು ಪ್ರೊಫೆಸರ್ ಶಂಕರ್ ಪಾಠಕ್, ನಿವೃತ್ತ ಪ್ರೊಫೆಸರ್, ದೆಹಲಿ ವಿಶ್ವವಿದ್ಯಾಲಯ, ಸಮಾಜಕಾರ್ಯ ವಿಭಾಗ ಹಾಗೂ ನಾವು ಮುದ್ರಿಸಿದ ಪುಸ್ತಕದ ಹೆಸರು Social Work and Social Welfare.
Congratulations.victory will come only when we are mentally and spiritually prepared to accept all the sufferings and agony.
ReplyDelete